ಎನ್ಹೆಚ್-75 ಪೆರಿಯಶಾಂತಿ-ಬಿಸಿ ರೋಡ್ ಹೆದ್ದಾರಿ ಕಾಮಗಾರಿ ಅಪ್ಡೇಟ್
ಬೆಂಗಳೂರು, ಸೆಪ್ಟೆಂಬರ್ 15: ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ವಾಹನ ಸವಾರರಿಗೆ ಸಿಹಿಸುದ್ದಿ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ) ಈ ಕುರಿತು ಮಾಹಿತಿ ನೀಡಿದೆ. ಪೆರಿಯಶಾಂತಿ-ಬಿಸಿ ರೋಡ್ ನಡುವಿನ 4 ಪಥದ ಹೆದ್ದಾರಿ ಕಾಮಗಾರಿಯು 2025ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದೆ. ಎನ್ಹೆಚ್ 75ರ ಪ್ಯಾಕೇಜ್-1ರ ಕಾಮಗಾರಿ ಶೇ 94ರಷ್ಟು ಪೂರ್ಣಗೊಂಡಿದೆ ಎಂದು ವಿವರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ದಿಶಾ ಸಮಿತಿಯ ಸಭೆಯಲ್ಲಿ ಎನ್ಹೆಚ್ಎಐ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಈ ಕುರಿತು ಮಾಹಿತಿ ನೀಡಿದರು. "ಮಂಗಳೂರು-ಬೆಂಗಳೂರು ಸಂಪರ್ಕಿಸುವ ಎನ್ಹೆಚ್-75ರ ಪೆರಿಯಶಾಂತಿ (ಧರ್ಮಸ್ಥಳ ಕ್ರಾಸ್) ಮತ್ತು ಬಿಸಿ ರೋಡ್ ನಡುವಿನ ನಾಲ್ಕು ಪಥದ ರಸ್ತೆ 2025ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ" ಎಂದರು.

ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75 ನಾಲ್ಕು ಪಥಗೊಳಿಸುವ ಕಾಮಗಾರಿಯನ್ನು ಪ್ಯಾಕೇಜ್ ಅಡಿಯಲ್ಲಿ ವಿಭಾಗಿಸಿ ಕೈಗೊಳ್ಳಲಾಗಿದೆ. ಪೆರಿಯಶಾಂತಿ-ಬಿಸಿ ರೋಡ್ ನಡುವಿನ ಕಾಮಗಾರಿ ಶೇ 94ರಷ್ಟು ಪೂರ್ಣಗೊಂಡಿದೆ. ಆದರೆ ಆನೆ ಕಾರಿಡಾರ್ ಅಂಡರ್ಪಾಸ್ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ಕಾರಣ ಕೆಲಸವನ್ನು ನಿಲ್ಲಿಸಲಾಗಿದೆ. ಆದರೆ ಅರಣ್ಯ ಇಲಾಖೆ ಆನೆ ಕಾರಿಡಾರ್ಗೆ ಇನ್ನೂ ಎರಡು ಪ್ರದೇಶಗಳನ್ನು ಗುರುತಿಸಿದ್ದು, ಉಳಿದ ಕಾಮಗಾರಿ ಬೇಗನೇ ಪೂರ್ಣಗೊಳ್ಳಲಿದೆ.
31 ಕಿ. ಮೀ. ಕಾಮಗಾರಿ ಪೂರ್ಣ: ಪೆರಿಯಶಾಂತಿ-ಬಿಸಿ ರೋಡ್ ನಡುವಿನ 48 ಕಿ. ಮೀ. ಮಾರ್ಗದಲ್ಲಿ 31 ಕಿ. ಮೀ. ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆದೇಶದ ಕಾರಣ ಉಳಿದ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ದಿಶಾ ಸಭೆಗೆ ಮಾಹಿತಿ ನೀಡಿದರು. ಇಲಾಖೆ ಅಧಿಕಾರಿಗಳು ಕೆಲಸಕ್ಕೆ ತಡೆ ನೀಡುವಂತೆ ಹೇಳಿಲ್ಲ. ಹೊಂಡ, ಮಣ್ಣು ತೆಗೆಯುವ ಕುರಿತು ಸೂಚನಾ ಫಲಕಗಳನ್ನು ಹಾಕಿ ಕಾಮಗಾರಿ ಮುಂದುವರೆಸಲು ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಲ್ಲಡ್ಕ ಬಳಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ. ಇದರ ಕಾಮಗಾರಿ ಶೇ 72ರಷ್ಟು ಪೂರ್ಣಗೊಂಡಿದೆ. ಜನವರಿ 2025ರಲ್ಲಿ ಕಾಮಗಾರಿ ಪೂರ್ಣವಾಗಲಿದೆ. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಎಲ್ಲಾ ಕಾಮಗಾರಿಗೆ ವೇಗ ನೀಡಿ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳು ಕಾಮಗಾರಿಗೆ ಅಡ್ಡಿಯಾಗಿರುವ ವಿಚಾರಗಳ ಕುರಿತು ಸಭೆಯ ಗಮನಕ್ಕೆ ಮಾಹಿತಿಗಳನ್ನು ನೀಡಿದರು.
ಅಧಿಕಾರಿಗಳು ಮಾಣಿ, ಉಪ್ಪಿನಂಗಡಿ ಫ್ಲೈ ಓವರ್ 2024ರ ಡಿಸೆಂಬರ್ ಮತ್ತು ಕಲ್ಲಡ್ಕ ಫ್ಲೈ ಓವರ್ 2025ರ ಜನವರಿಗೆ ಮುಗಿಯಲಿದೆ. ನರಹರಿ ಪರ್ವತ ಬಳಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಲು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ. ಆದ್ದರಿಂದ ಇದಕ್ಕೆ ಅನುಮೋದನೆ ಪಡೆದು ಮೇ ತಿಂಗಳಿನಲ್ಲಿ ಕಾಮಗಾರಿ ಆರಂಭಿಸಲಾಗಿದೆ, ಇದು ವಿಳಂಬವಾಗಲಿದೆ ಎಂದರು.
ಸಭೆಯಲ್ಲಿ ಬಿಸಿ ರೋಡ್-ಸುರತ್ಕಲ್ ಹೆದ್ದಾರಿ ಶಾಶ್ವತ ನಿರ್ವಹಣೆ ಹಾಗೂ ಈ ಪ್ರದೇಶದಲ್ಲಿ ಬೈಪಾಸ್ ನಿರ್ಮಾಣ ಮಾಡಲು ಪ್ರಸ್ತಾಪ ಸಿದ್ಧಪಡಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಸಿ ರೋಡ್-ಸುರತ್ಕಲ್ ನಡುವೆ ವಾಹನಗಳ ಸಂಚಾರ ಹೆಚ್ಚಿದೆ. ರಸ್ತೆಗೆ ಹಾನಿಯಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಶಾಶ್ವತ ನಿರ್ವಹಣೆ ಯೋಜನೆ ರೂಪಿಸಬೇಕು ಎಂದು ಸಂಸದರು ಸೂಚಿಸಿದರು.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿಸಿ ರೋಡ್ ಮತ್ತು ಅಡ್ಡಹೊಳೆ (63.6 ಕಿ.ಮೀ) ನಡುವಿನ ಚತುಷ್ಪಥ ಯೋಜನೆ ನಿಗದಿತ ಗಡುವಿನಲ್ಲಿ ಪೂರ್ಣಗೊಂಡಿಲ್ಲ. ಈ ಮೊದಲು ನವೆಂಬರ್ 2023ರಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳದ ಕಾರಣ ಜನರು ಎನ್ಎಚ್ಎಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications