ಪಠ್ಯದಿಂದ ನಾರಾಯಣ ಗುರು ಔಟ್: ಕರಾವಳಿಯಲ್ಲಿ ಭುಗಿಲೆದ್ದ ಆಕ್ರೋಶ
ಮಂಗಳೂರು, ಮೇ 18: ಎಸ್ಎಸ್ಎಲ್ಸಿ ಪಠ್ಯ ಪುಸ್ತಕದಲ್ಲಿ ಆರ್ಎಸ್ಎಸ್ ಸಂಸ್ಥಾಪಕ ಕೆ. ಬಿ. ಹೆಗಡೇವಾರ್ ಭಾಷಣ ಸೇರಿಸಿದ ವಿಚಾರ ವಿವಾದಕ್ಕೆ ಗ್ರಾಸವಾಗಿರುವಾಗಲೇ ಕರಾವಳಿಯಲ್ಲಿ ಮತ್ತೊಂದು ವಿವಾದ ಆರಂಭವಾಗಿದೆ. 10ನೇ ತರಗತಿ ಪಠ್ಯ ಪುಸ್ತಕದಲ್ಲಿ ಸಮಾಜ ಸುಧಾಕರ ನಾರಾಯಣ ಗುರುಗಳ ಪಠ್ಯವನ್ನು ತೆಗೆದಿರೋದಕ್ಕೆ ಸರ್ಕಾರದ ವಿರುದ್ಧ ಕರಾವಳಿಯಲ್ಲಿ ಭಾರೀ ಆಕ್ರೋಶ ವ್ಯಕ್ಯವಾಗಿದೆ.
ಕರ್ನಾಟಕ ಸರಕಾರ ಮುದ್ರಿಸುವ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಶಿರೋನಾಮೆಯೊಂದಿಗೆ ನಾರಾಯಣ ಗುರುಗಳ ಜೀವನ ಚರಿತ್ರೆ ಪಠ್ಯ ಮುದ್ರಿಸಲಾಗಿತ್ತು. ಆದರೆ ಈ ಬಾರಿ ಪಠ್ಯ ಪುಸ್ತಕ ರಚನಾ ಸಮಿತಿ ನಾರಾಯಣ ಗುರುಗಳ ಪಠ್ಯವನ್ನು ಪುಸ್ತಕದಿಂದ ಕೈ ಬಿಟ್ಟಿದೆ.
ಕಳೆದ ಆರು ತಿಂಗಳಿನೊಳಗೆ ಕರಾವಳಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರದಲ್ಲಿ ಮೂರು ವಿವಾದಗಳು ಸೃಷ್ಟಿಯಾಗಿದೆ. ನಗರದ ಲೇಡಿಹಿಲ್ ಸರ್ಕಲ್ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಮರು ನಾಮಕರಣ, ದೆಹಲಿಯ ಗಣರಾಜ್ಯೋತ್ಸವ ಪೆರೇಡ್ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೊ ಕೈಬಿಡಲಾಗಿತ್ತು.
ಈ ಎರಡೂ ವಿಚಾರದಲ್ಲಿ ಕರಾವಳಿಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಎಸ್ಎಸ್ಎಲ್ಸಿ ಸಮಾಜ ವಿಜ್ಞಾನ ಪಠ್ಯದಿಂದ ನಾರಾಯಣ ಗುರುಗಳ ಪಠ್ಯಕ್ಕೆ ಕೊಕ್ ನೀಡಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಎಸ್ಎಸ್ಎಲ್ ಸಿ ಸಮಾಜ ವಿಜ್ಞಾನದ 2020ನೇ ಪಠ್ಯ ಹಾಗೂ 2022ನೇ ಸಾಲಿನ ಪರಿಷ್ಕೃತ ಪಠ್ಯಪುಸ್ತಕದ ಪಿಡಿಎಫ್ ಆವೃತ್ತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಆರ್. ನಾರಾಯಣ ಗುರು ಕೇವಲ ಒಂದು ವರ್ಗಕ್ಕೆ ಸೀಮಿತ ಅಲ್ಲ; ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಶ್ರೀ ಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ನಾರಾಯಣ ಗುರು ಕೇವಲ ಒಂದು ವರ್ಗಕ್ಕೆ ಸೀಮಿತ ಅಲ್ಲ. ನಾರಾಯಣ ಗುರು ಶೋಷಿತ ವರ್ಗದ ಜಗದ್ಗುರು. ಕೇರಳದಲ್ಲಿ ಹಿಂದೂಗಳ ಮತಾಂತರವನ್ನು ತಡೆದ ಗುರು. ಹಿಂದೂ ಧರ್ಮದ ಉಳಿಯುವಿಕೆಯಲ್ಲಿ ನಾರಾಯಣ ಗುರುಗಳ ಪಾತ್ರ ಅಪಾರ.
ಹಿಂದೂ ಧರ್ಮ ಚದುರಿಸೋದನ್ನು ನಾರಾಯಣ ಗುರುಗಳು ನಿಲ್ಲಿಸಿದರು. ದೇವಸ್ಥಾನಕ್ಕೆ ಶೋಷಿತ ವರ್ಗಕ್ಕೆ ಪ್ರವೇಶ ಇಲ್ಲದಿರುವಾಗ ಸ್ವತಃ ದೇವಸ್ಥಾನ ಕಟ್ಟಿ ಪೂಜೆಗೆ ಅನುವು ಮಾಡಿದರು. ಸಮಾಜದಲ್ಲಿ ಶಾಂತಿ ನೆಲೆಸಲು ಅವರ ತತ್ವಪಾಲನೆ ಅನಿವಾರ್ಯವಾಗಿದೆ. ಪ್ರಸ್ತುತ ಸಮಾಜದಲ್ಲಿ ಜನರಿಗೆ ಸುಖ ಶಾಂತಿ ಇಲ್ಲ. ಶಾಂತಿ ಪಾಲಿಸಲು ಗುರುಗಳ ತತ್ವ ಅನಿವಾರ್ಯ. ಪಠ್ಯ ಪುಸ್ತಕ ರಚನಾ ಸಮತಿ ಪಠ್ಯ ತೆಗೆದಿರೋದು ಖಂಡನೀಯ. ಇದೊಂದು ಘೋರ ಅಪರಾಧ ಅಂತಾ ಹೇಳಿದ್ದಾರೆ.
ಶಿಕ್ಷಣ ಸಚಿವರ ಹೇಳಿಕೆ ಮೂರ್ಖತನ; "ಗುರುಗಳ ಪಠ್ಯ ತೆಗೆದಿರುವ ಬಗ್ಗೆ ಶಿಕ್ಷಣ ಸಚಿವರ ಪ್ರತಿಕ್ರಿಯೆ ನೋಡಿ ಆಶ್ಚರ್ಯವಾಗಿದೆ. ಈ ಬಗ್ಗೆ ಮಾಹಿತಿ ಇಲ್ಲ ಪಠ್ಯ ನೋಡಿ ಪ್ರತಿಕ್ರಿಯೆ ನೀಡೋದಾಗಿ ಹೇಳಿದ್ದಾರೆ. ಶಿಕ್ಷಣ ಸಚಿವ ನಾಗೇಶ್ ರವರದ್ದು ಮೂರ್ಖತನದ ಹೇಳಿಕೆ ನೀಡಿದ್ದಾರೆ. ಸಚಿವರು ಕೂಡಲೇ ಎಚ್ಚೆತ್ತು, ಪಠ್ಯ ರಚನಾ ಸಮಿತಿಯ ಜೊತೆ ಮಾತನಾಡಬೇಕು.ಇದು ಮೇಲ್ವರ್ಗದವರ ದುರಂಹಕಾರವನ್ನು ತೋರಿಸುತ್ತದೆ. ಶೋಷಿತ ವರ್ಗದ ನಾಯಕರ ದಮನ ಕಾರ್ಯವಾಗುತ್ತಿದೆ. ಮೇಲ್ವರ್ಗದರು ಶೋಷಿತರನ್ನು ದಮನಿಸುತ್ತಿದ್ದಾರೆ" ಎಂದು ಪದ್ಮರಾಜ್ ಹೇಳಿದ್ದಾರೆ.
"ಈ ಹಿಂದೆ ಗಣರಾಜ್ಯೋತ್ಸವ ಪರೇಡ್ನಿಂದ ನಾರಾಯಣ ಗುರು ಟ್ಯಾಬ್ಲೋ ತೆಗೆದರು. ಉದ್ದೇಶ ಪೂರ್ವಕವಾಗಿ ದಮನ ಕಾರ್ಯವಾಗುತ್ತಿದೆ. ಸರ್ಕಾರದ ನೀತಿ ಬಗ್ಗೆ ಸಮಸ್ತ ಶೋಷಿತ ವರ್ಗ ಪ್ರತಿಭಟನೆ ಮಾಡಲಿದೆ" ಎಂದು ಕುದ್ರೋಳಿ ಗೋಕರ್ನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.