Get Updates
Get notified of breaking news, exclusive insights, and must-see stories!

ನಾರಾಯಣ ಗುರು ಸ್ತಬ್ಧಚಿತ್ರ ವಿವಾದ; ಜ.26ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು, ಜನವರಿ 25: ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸ್ತಬ್ಧಚಿತ್ರದ ಪರೇಡ್‌ನಲ್ಲಿ ಕೇರಳ ಸರ್ಕಾರ ಕಳುಹಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡಮಟ್ಟದ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.

ಜನವರಿ‌ 26ರಂದು ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕಾರ ಖಂಡಿಸಿ, ಮಂಗಳೂರಿನಲ್ಲಿ ನಾರಾಯಣ ಗುರು ಟ್ಯಾಬ್ಲೋ ಮೆರವಣಿಗೆ ನಡೆಯಲಿದೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಮೆರವಣಿಗೆ ಸಂಗಮವಾಗಲಿದ್ದು, ಸಾವಿರಾರು ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಿದ್ದಾರೆ. ಈ ಬಗ್ಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಲ್ಲವ ಮುಖಂಡರು ಹೋರಾಟದ ರೂಪುರೇಷೆ ತೆರೆದಿಟ್ಟಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧಚಿತ್ರ ತಿರಸ್ಕರಿಸಿವುದನ್ನು ವಿರೋಧಿಸಿ ಸಂಪೂರ್ಣ ವಾಹನ ಜಾಥಾ, ಮೌನ‌ ಮೆರವಣಿಗೆ ನಡೆಯಲಿದೆ. ಕಾಲ್ನಡಿಗೆ ಜಾಥಾಕ್ಕೆ ಅವಕಾಶವಿಲ್ಲ. ಈ ಮೆರವಣಿಗೆಯಲ್ಲಿ ಹಳದಿ ಶಾಲು, ಹಳದಿ ಧ್ವಜಕ್ಕೆ ಮಾತ್ರ‌ ಅವಕಾಶ ಬೇರೆ ಬಣ್ಣದ ಶಾಲು, ಧ್ವಜಗಳಿಗೆ ಅವಕಾಶವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಬ್ರಿಗೇಡ್ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

Narayana Guru Tableau Controversy; Massive Protest in Mangaluru on January 26

2-3 ದಿನಗಳಿಂದ ಈ ಯಾತ್ರೆಯನ್ನು ನಿಲ್ಲಿಸುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ತಂಡವೊಂದು ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿತ್ತು. ಆದರೆ ಯಾವುದೇ ಕಾರಣಕ್ಕೆ ಯಾತ್ರೆಯನ್ನು ನಿಲ್ಲಿಸಲಾಗುವುದಿಲ್ಲ ಎಂದು ಪೂಜಾರಿಯವರು ಹೇಳಿದ್ದು, ಈ ಮೂಲಕ ಇದೊಂದು ವಿಫಲ ಯತ್ನವಾಗಿದೆ ಎಂದು ಹೇಳಿದ್ದಾರೆ.

ಜನಾರ್ದನ ಪೂಜಾರಿಯವರೊಂದಿಗೆ ಇದ್ದುಕೊಂಡು ರಾಜಕೀಯದ ಎಲ್ಲಾ ಲಾಭವನ್ನು ಪಡೆದ ಹರಿಕೃಷ್ಣ ಬಂಟ್ವಾಳ, ಪ್ರಶ್ನಾತೀತ ನಾಯಕನಿಗೆ ಪ್ರಶ್ನೆಯನ್ನು ಮಾಡುವ ಕಾರ್ಯ ಮಾಡಿದ್ದಾರೆ. ಅಂದು ಜನಾರ್ದನ ಪೂಜಾರಿಯವರು ಕಾಂಗ್ರೆಸ್‌ನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ಇದೇ ವ್ಯಕ್ತಿ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷರಾಗಿದ್ದುಕೊಂಡು ಅವರ ಜೊತೆಯಲ್ಲಿದ್ದುಕೊಂಡಿದ್ದರು. ಇಂದು ಜನಾರ್ದನ ಪೂಜಾರಿಯವರನ್ನು ನಡುನೀರಿನಲ್ಲಿ ಈ ವ್ಯಕ್ತಿ ಕೈಬಿಟ್ಟು ಹೋಗಿದ್ದಾರೆ.

Narayana Guru Tableau Controversy; Massive Protest in Mangaluru on January 26

ನಾಲ್ಕು ಬಾರಿ ಜನಾರ್ದನ ಪೂಜಾರಿಯವರು ಸೋಲಲು, ಬಿಲ್ಲವ ಸಮುದಾಯದ ಯುವಕರನ್ನು ಜನಾರ್ದನ ಪೂಜಾರಿಯವರಿಂದ ದೂರ ಮಾಡಿರುವ ಶ್ರೇಯಸ್ಸು ಹರಿಕೃಷ್ಣರಿಗಿದೆ. ಇವರು ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಟ್ಟಿದ್ದರಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಾರ್ದನ ಪೂಜಾರಿಯವರ ಹೆಸರು ಹಾಳಾಗಲು ಕಾರಣ.‌ ಇದೀಗ ಮತ್ತೆ ಜನಾರ್ದನ ಪೂಜಾರಿಯವರ ಹೆಸರು ಹಾಳು ಮಾಡಲು ಯಾತ್ರೆಯನ್ನು ತಡೆಯುವ ಯತ್ನ ಮಾಡುತ್ತಿದ್ದು, ನಾಚಿಕೆಯಾಗಬೇಕು ಈ ಮನುಷ್ಯನಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಗುರುಗಳ ಟ್ಯಾಬ್ಲೋದಲ್ಲಿ ಹಳದಿ ಬಿಟ್ಟು ಬೇರಾವ ಧ್ವಜ, ಬಣ್ಣಗಳಿಗೆ ಅವಕಾಶ ಇಲ್ಲ. ಗುರುಗಳ ಮೇಲೆ ಅಭಿಮಾನ ಇದ್ದವರು ಮಾತ್ರ ಬನ್ನಿ, ರಾಜಕೀಯಕ್ಕೆ, ಕಾಟಾಚಾರಕ್ಕೆ ಬರಬೇಡಿ. ಗುರುಗಳಿಗೆ ಅವಮಾನ ಆಗಿದೆ, ಈ ಬಗ್ಗೆ ಯಾವುದೇ ಸಮರ್ಥನೆಯನ್ನು ಬಿಲ್ಲವ ಸಮಾಜ ಬೆಂಬಲಿಸಲ್ಲ, ನಮಗೆ ದುಃಖವಾಗಿದೆ. ಜನಾರ್ದನ ಪೂಜಾರಿ ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದೆ. ಗುರುಗಳ ಮೇಲೆ ವಿಶ್ವಾಸ ಇರುವವರು ಮೆರವಣಿಗೆಯಲ್ಲಿ ಕೇವಲ ಹಳದಿ ಧ್ವಜ ಹಳದಿ ಶಾಲಿಗೆ ಬದ್ಧರಾಗಿ ಅಂತಾ ಪದ್ಮರಾಜ್ ಹೇಳಿದ್ದಾರೆ.

Narayana Guru Tableau Controversy; Massive Protest in Mangaluru on January 26

ಇದಕ್ಕೂ ಮುನ್ನ ಕೇಂದ್ರ ಸರ್ಕಾರದಿಂದ ನಾರಾಯಣ ಗುರು ಟ್ಯಾಬ್ಲೋ ತಿರಸ್ಕಾರ ಖಂಡಿಸಿ ಜನಾರ್ದನ ಪೂಜಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ದ‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿಯ ಜನಾರ್ದನ ಪೂಜಾರಿ ನಿವಾಸಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿದ್ದಾರೆ.

ಈ ವೇಳೆ ನಾರಾಯಣ ಗುರು ಟ್ಯಾಬ್ಲೋ ವಿವಾದದ ಬಗ್ಗೆ ಜನಾರ್ದನ ಪೂಜಾರಿಗೆ ಮನವರಿಕೆ ಮಾಡಿದ ಸಚಿವ ಕೋಟಾ, ಕೇರಳ ಸರ್ಕಾರ ಮತ್ತು ಕಮ್ಯುನಿಸ್ಟರ ಕುತಂತ್ರದಿಂದ ವಿವಾದ ಎದ್ದಿದೆ. ಕೇಂದ್ರ ‌ಸರ್ಕಾರ ಮತ್ತು ನರೇಂದ್ರ ಮೋದಿಗೆ ನಾರಾಯಣ ಗುರುಗಳ ಬಗ್ಗೆ ಗೌರವವಿದೆ. ಅವರು ಟ್ಯಾಬ್ಲೋ ತಿರಸ್ಕಾರ ಮಾಡಿಲ್ಲ, ಕೇರಳ ಸರ್ಕಾರ ಸುಮ್ಮನೆ ವಿವಾದ ಎಬ್ಬಿಸಿದೆ. ಜ.26ರ ಪ್ರತಿಭಟನೆ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ ಎಂದು ಸಚಿವರು ಮನವಿ ಮಾಡಿದ್ದಾರೆ.

ನಾರಾಯಣ ಗುರುಗಳ ಯಾವುದೇ ಕಾರ್ಯಕ್ರಮಕ್ಕೆ ಬಿಜೆಪಿ ಬೆಂಬಲವಿದೆ. ಆದರೆ ಕಮ್ಯುನಿಸ್ಟರ ಈ ಕುತಂತ್ರ ರಾಜಕೀಯದ ಬಗ್ಗೆ ನಮ್ಮ ವಿರೋಧವಿದೆ ಅಂತ ಪೂಜಾರಿಗೆ ಕೋಟಾ ತಮ್ಮ ನಿಲುವು ಹೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಜನಾರ್ದನ ಪೂಜಾರಿ, ಪ್ರತಿಭಟನೆ ಕೈ ಬಿಡದೇ ರಾಜಕೀಯ ನುಸುಳದಂತೆ ಮೆರವಣಿಗೆ ನಡೆಸುತ್ತೇವೆ. ಸಮಾನ ಮನಸ್ಕರು ಮತ್ತು ನಾರಾಯಣ ಗುರು ಅಭಿಮಾನಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಇದೊಂದು ರಾಜಕೀಯ ರಹಿತ ಹೋರಾಟ, ಅದನ್ನು ರಾಜಕೀಯ ನುಸುಳದಂತೆ ನಡೆಸುತ್ತೇವೆ ಎಂದು ಕೋಟಾ ಶ್ರೀನಿವಾಸ ಪೂಜಾರಿಗೆ ಜನಾರ್ದನ ಪೂಜಾರಿ ಮನವರಿಕೆ ಮಾಡಿದ್ದಾರೆ.

ಆ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ನಾರಾಯಣ ಗುರುಗಳ ಬದಲು ಶಂಕರಾಚಾರ್ಯರ ಪ್ರತಿಮೆ ಅಳವಡಿಸುವ ಬಗ್ಗೆ ಕೇಂದ್ರ ಸರ್ಕಾರ ಹೇಳಿರುವುದಕ್ಕೆ ಯಾವುದೇ ದಾಖಲೆ ಇದ್ದರೆ ಪ್ರತಿಪಕ್ಷಗಳು ನೀಡಲಿ. ಇದು ಕೇವಲ‌ ರಾಜಕೀಯ ದುರುದ್ದೇಶಕ್ಕಾಗಿ ಕಮ್ಯೂನಿಸ್ಟ್ ಹಾಗೂ ಕಾಂಗ್ರೆಸ್‌ನವರು ಮಾಡುತ್ತಿರುವ ನಾಟಕ‌. ಮೋದಿಯವರ ಮೇಲೆ‌ ವಿನಾಕಾರಣ ಗೂಬೆ ಕೂರಿಸುವ ಷಡ್ಯಂತ್ರವೆಂದು ಹೇಳಿದರು.

ಕೇರಳದ ಶಿವಗಿರಿಯಲ್ಲಿರುವ ನಾರಾಯಣ ಗುರುಗಳ ಮಠವನ್ನು 5 ವರ್ಷ ಸ್ವಾಧೀನಪಡಿಸಿಕೊಂಡಿದ್ದು ಕಮ್ಯೂನಿಸ್ಟ್ ಸರ್ಕಾರ. ಮಠದಲ್ಲಿದ್ದ 24 ಸನ್ಯಾಸಿಗಳನ್ನು ಬೀದಿಗೆ ತಳ್ಳಿದ್ದು ಕಮ್ಯೂನಿಸ್ಟ್ ಸರ್ಕಾರ. ಈಗ ನಾರಾಯಣ ಗುರುಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ವಿನಾಕಾರಣ ಗೊಂದಲ ಸೃಷ್ಟಿಸುತಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ಮುಖಂಡರು ನಾರಾಯಣ ಗುರುಗಳ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ವಾಗ್ದಾಳಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+