ನಮೋ ಬ್ರಿಗೇಡ್ ಮಂಗಳೂರು ಕಚೇರಿ ಉದ್ಘಾಟನೆ
ಮಂಗಳೂರು, ಸೆ. 16 : ಭಾರತೀಯ ಜನತಾ ಪಕ್ಷದ ಲೋಕಸಭಾ ಚುನಾವಣಾ ಸಮಿತಿಯ ನೇತೃತ್ವವಹಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಶುಕ್ರವಾರ, ಸೆ.13ರಂದು ಆಯ್ಕೆ ಮಾಡಿದ ಬೆನ್ನ ಹಿಂದೆಯೇ ಕರ್ನಾಟಕದಲ್ಲಿ ನರೇಂದ್ರ ಮೋದಿ ಪರ ಪ್ರಚಾರಕ್ಕೆಂದು ಹುಟ್ಟಿಕೊಂಡಿರುವ ನಮೋ ಬ್ರಿಗೇಡ್ ಚಟುವಟಿಕೆಗಳು ಗರಿಗೆದರಿವೆ.
ಭ್ರಷ್ಟಾಚಾರವನ್ನು ಬುಡಮೂಲದಿಂದ ತೊಲಗಿಸಬೇಕು ಮತ್ತು ನರೇಂದ್ರ ಮೋದಿ ಅವರನ್ನು ಭಾರತದ ಪ್ರಧಾನಿ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ಪಕ್ಷಭೇದ ಮರೆತು ಸಾವಿರಾರು ಯುವಕ ಮತ್ತು ಯುವತಿಯರು ನಮೋ ಬ್ರಿಗೇಡ್ ಸೇರುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಈಗಾಗಲೆ ನಗರಕ್ಕೊಂದರಂತೆ ನಮೋ ಬ್ರಿಗೇಡ್ ತಲೆಯೆತ್ತಿವೆ.
ನಮೋ ಬ್ರಿಗೇಡ್ ಮಂಗಳೂರು ಘಟಕ ತನ್ನ ಕಚೇರಿಯನ್ನು ಮಂಗಳೂರಿನಲ್ಲಿ ಸೋಮವಾರ, ಸೆ. 16ರಂದು ಬೆಳಿಗ್ಗೆ 10 ಗಂಟೆಗೆ ತೆರೆಯಿತು. ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್ ಐ.ಎನ್. ರೈ, ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ಕಿಣಿ, ಖ್ಯಾತ ಅಂಕಣಕಾರ ಮತ್ತು ಪ್ರಖರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರು ದೀಪ ಬೆಳಗಿಸಿ ವಿಧ್ಯುಕ್ತವಾಗಿ ಕಚೇರಿಯನ್ನು ಉದ್ಘಾಟಿಸಿದರು. (ಚಿತ್ರ : ಮಂಜು ನೀರೇಶವಲ್ಯ)

ಮೋದಿ ಅವರು ಪ್ರಧಾನಿಯಾಗಬೇಕು
ಉದ್ಘಾಟನಾ ಭಾಷಣ ಮಾಡಿದ ಚಕ್ರವರ್ತಿ ಸೂಲಿಬೆಲೆ ಅವರು, ಕರ್ನಾಟಕ ರಾಜ್ಯಾದ್ಯಂತ 45 ನಮೋ ಬ್ರಿಗೇಡ್ ಶಾಖೆಗಳು ಪ್ರಾರಂಭವಾಗಿದ್ದು, ಪಕ್ಷಭೇದ ಮರೆತು ಯುವಕ, ಯುವತಿಯರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಭಾವಿ ಪ್ರಧಾನಿ ಎಂದೇ ಬಿಂಬಿತರಾಗಿರುವ ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಒಂದೇ ಉದ್ದೇಶದಿಂದ ನಮೋ ಬ್ರಿಗೇಡ್ ಪ್ರಾರಂಭವಾಗಿದೆ ಎಂದರು.

ಭ್ರಷ್ಟಾಚಾರ ಸಂಪೂರ್ಣ ನಾಶವಾಗಬೇಕು
ದೇಶದಲ್ಲಿ ಭ್ರಷ್ಟಾಚಾರ ಉತ್ತುಂಗಕ್ಕೇರಿದ್ದು ಇದನ್ನು ಸಂಪೂರ್ಣ ನಾಶಗೊಳಿಸುವವರೆಗೆ ದೇಶದ ಯುವಕರು ಇಂತಹ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕು. ಮೋದಿಯವರು ಪ್ರಧಾನಿಯಾಗುವರು ಎಂಬ ಭರವಸೆ ನನಗಿದೆ ಎಂದು ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್ ಐ.ಎನ್. ರೈ ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟದ ಮಾದರಿ ಹೋರಾಟ
ಸ್ವಾತಂತ್ರ್ಯ ಹೋರಾಟವನ್ನು ಕಂಡಿದ್ದ ಮಟ್ಟಾರು ಕಿಣಿಯವರು, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ನಡೆಸಿದ ಹೋರಾಟದ ರೀತಿಯಲ್ಲೇ ಈಗ ಕೂಡ ಹೋರಾಡುವ ಪ್ರಸಂಗ ಬಂದಿದೆ. ದೇಶವನ್ನು ನರೇಂದ್ರ ಮೋದಿಯವರಂಥ ನಾಯಕರು ಮುನ್ನಡೆಸಿಕೊಂಡು ಹೋಗಬೇಕು ಎಂಬುದು ನನ್ನ ಆಶಯ ಎಂದು ನುಡಿದರು.

ಮಂಗಳೂರಿನಲ್ಲಿ ನಮೋ ಬ್ರಿಗೇಡ್ ಕಚೇರಿ
ನಮೋ ಬ್ರಿಗೇಡ್ ಕರ್ನಾಟಕ ಸಂಚಾಲಕರಾದ ನರೇಶ್ ಶೆಣೈ, ಮಂಗಳೂರಿನ ಪ್ರಮೋದ್ ರೈ, ಗೋಪಾಲಕೃಷ್ಣ ಭಟ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪತ್ರಕರ್ತರ ಹಿಂಡು
ನಮೋ ಬ್ರಿಗೇಡ್ ಕಚೇರಿ ಉದ್ಘಾಟನಾ ಸಮಾರಂಭದ ವರದಿಗೆಂದು ಬಂದ ಮಂಗಳೂರಿನ ಪತ್ರಕರ್ತರ ಸಮೂಹ.












Click it and Unblock the Notifications