ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂತಸ, ಸಂಭ್ರಮ
ಮಂಗಳೂರು, ಮೇ 17 : ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸುವ ಮೂಲಕ ಸಂಸತ್ ಪ್ರವೇಶಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕರಾವಳಿಯಲ್ಲಿ ಸೋಲು ಅನುಭವಿಸಿತ್ತು. ಲೋಕಸಭೆ ಫಲಿತಾಂಶ ಕಾರ್ಯಕರ್ತರಿಗೆ ಸಂತಸತಂದಿದ್ದು ಕುಣಿದು ಕುಪ್ಪಳಿಸಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಕಾಂಗ್ರೆಸ್ ಪಕ್ಷ ದಕ್ಷಿಣ ಕನ್ನಡದಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಿ ನಡೆಸಿದ್ದ ಆಂತರಿಕ ಚುನಾವಣೆಯಲ್ಲಿ ಜಯಗಳಿಸಿದ್ದ ಜನಾರ್ದನ ಪೂಜಾರಿ, ಚುನಾವಣೆಯಲ್ಲಿ ಸೋಲುವ ಮೂಲಕ ಮೋದಿ ಅಲೆ ಇದೆ ಎಂದು ಒಪ್ಪಿಕೊಂಡಂತಾಗಿದೆ. ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ನರೇಂದ್ರ ಮೋದಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದರು, ಅದಕ್ಕೆ ಮತದಾರ ತಲೆದೂಗಿದ್ದಾನೆ. [ದಕ್ಷಿಣ ಕನ್ನಡ : ಕಮಲದ ಅಲೆಗೆ ಕೈ ಧೂಳೀಪಟ]
6,42,739 ಮತಗಳನ್ನು ಪಡೆದ ನಳೀನ್ ಕುಮಾರ್ ಕಟೀಲ್ 4,99,030 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ವಿರುದ್ಧ ಜಯಗಳಿಸಿದರು. ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ನಳೀನ್ ಕುಮಾರ್ ಕಟೀಲ್ ಗೆಲುವಿನ ಬಳಿಕ ಸಂಭ್ರಮಾಚರಣೆ ನಡೆಸಿದರು. ಚಿತ್ರಗಳಲ್ಲಿ ನೋಡಿ ಸಂಭ್ರಮಾಚರಣೆ
ದಾಖಲೆ ಗೆಲುವು ಬರೆದ ಕಟೀಲ್
ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ 2009 ಮತ್ತು 2014ರ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಎರಡು ಬಾರಿ ಸಂಸತ್ತಿಗೆ ಆಯ್ಕೆ ಆಗಿದ್ದಾರೆ. 2014ರ ಚುನಾವಣೆಯಲ್ಲಿ 1,43,709 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಪೂಜಾರಿಗೆ ಎರಡನೇ ಬಾರಿ ಸೋಲುಣಿಸಿದ ನಳೀನ್
2009 ಮತ್ತು 2014ರ ಚುನಾವಣೆಯಲ್ಲಿ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. 2014ರ ಚುನಾವಣೆಯಲ್ಲಿ ಪೂಜಾರಿ 4,99,030 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ಕಾರ್ಯಕರ್ತರಲ್ಲಿ ಮನೆಮಾಡಿದ ಸಂಭ್ರಮ
ಕಳೆದ ವಿಧಾನಸಭೆ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರು. ನಳೀನ್ ಕುಮಾರ್ ಗೆಲ್ಲುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಹೊಸ ಹುರುಪು ತುಂಬಿದ್ದಾರೆ. ಆದ್ದರಿಂದ ಫಲಿತಾಂಶದ ನಂತರ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದರು.
ಬಂದಿತ್ತು ಮೋದಿ ಬೈಕ್
ಬಿಜೆಪಿ ಕಾರ್ಯಕರ್ತರೊಬ್ಬರು ಮೋದಿ ಬೈಕ್ ತೆಗೆದುಕೊಂಡು ಬಂದು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೈಕ್ ತುಂಬಾ ಮೋದಿ ಎಂದು ಬರೆಸಿಕೊಂಡಿದ್ದ ಅವರು ಸಂಭ್ರಮಾಚರಣೆಯಲ್ಲಿ ಎಲ್ಲರ ಗಮನ ಸೆಳೆದರು.
ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಶೆಟ್ಟರು
ನಳೀನ್ ಕುಮಾರ್ ಕಟೀಲ್ ಅವರ ಗೆಲುವಿನ ಸಂಭ್ರಮಾಚರಣೆಯಲ್ಲಿ ಮಾಜಿ ಸಚಿವ ನಾಗರಾಜ ಶೆಟ್ಟಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.
ಗೆಲುವಿನ ಶಂಖನಾದ
ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಶಂಖನಾದ ಮಾಡುವ ಮೂಲಕ ನಳೀನ್ ಕುಮಾರ್ ಕಟೀಲ್ ಗೆಲುವನ್ನು ಸ್ವಾಗತಿಸಿದರು.
ಮೋದಿ ಅಲೆಗೆ ತಲೆದೂಗಿದ ಮತದಾರ
ನರೇಂದ್ರ ಮೋದಿ ಮಂಗಳೂರಿನಲ್ಲಿ ಸಮಾವೇಶ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದರು. ಅದಕ್ಕೆ ತಲೆದೂಗಿದ ಕಾರ್ಯಕರ್ತರು ನಳೀನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸಿದ್ದಾರೆ.
ಕೈ ಹಿಡಿದ ನಳೀನ್ ಅಭಿವೃದ್ಧಿ ಕಾರ್ಯಗಳು
2009ರ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ನಳೀನ್ ಕುಮಾರ್ ಕಟೀಲ್ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದರು. ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು.
ಜೆಡಿಎಸ್ ತಂತ್ರ ಫಲಿಸಲಿಲ್ಲ
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಸ್ ಡಿಪಿಐ ಪಕ್ಷಕ್ಕೆ ಬೆಂಬಲ ನೀಡಿತ್ತು. ಆದರೆ, ಚುನಾವಣೆಯಲ್ಲಿ ಈ ತಂತ್ರವೂ ಫಲಿಸಲಿಲ್ಲ. ಎಸ್ ಡಿಪಿಐ ಅಭ್ಯರ್ಥಿ ಹನೀಫ್ ಖಾನ್ ಕೋಟಾಜೆ 27,254 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.