ತ್ರಿವಳಿ ತಲಾಖ್ ಪದ್ಧತಿ ಅಸಂವಿಧಾನಿಕ : ಮಂಗಳೂರಿಗರು ಏನಂತಾರೆ?
ಮಂಗಳೂರು, ಆಗಸ್ಟ್ 23: ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು ಮಂಗಳೂರಿನ ಅನೇಕ ಜನಪ್ರತಿನಿಧಿಗಳು ನ್ಯಾಯಾಲಯದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಒನ್ಇಂಡಿಯಾ ಕನ್ನಡ ಕೂಡ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಇದರ ಒಂದಿಷ್ಟು ಸ್ಯಾಂಪಲ್ ಗಳು ಇಲ್ಲಿವೆ.
"ಹಿಂದೂ ಧರ್ಮದಲ್ಲಿಯೂ ಕೆಲ ಆಚರಣೆಗಳು ಅಸಹ್ಯಕರವಾಗಿದ್ದವು. ಸತಿ ಸಹಗಮನ, ಬಾಲ್ಯ ವಿವಾಹ, ದೇವದಾಸಿಯಂತ ಧಾರ್ಮಿಕ ಮೌಢ್ಯತೆಗಳು ಎಷ್ಟೋ ಜನರನ್ನ ಬಲಿ ತೆಗೆದುಕೊಳ್ಳುತ್ತಿತ್ತು. ಆದರೆ, ಕಾಲ ಕಳೆದಂತೆ ಇಂತಹ ಆಚರಣೆಗಳಿಗೆ ಕಾನೂನು ಮತ್ತು ಸಮಾಜ ಕಟ್ಟುಪಾಡುಗಳನ್ನು ತಂದಾಗ ಕಂಡಿತವಾಗಿ ಒಪ್ಪಿಕೊಳ್ಳಲೇಬೇಕಾಯಿತು; ಒಪ್ಪಿಕೊಳ್ಳಲೇಬೇಕು ಕೂಡ. ನಮಗೆ ಮಾನವತಾ ಧರ್ಮವೇ ಮೊದಲಾಗಬೇಕು," ಎನ್ನುತ್ತಾರೆ ಮಂಗಳೂರಿನ ಫಾತಿಮಾ.

"ಧರ್ಮ ಆಚರಣೆ ಎಂದು ಮೌಢ್ಯದಲ್ಲಿ ಇರುವುದನ್ನ ಕಾನೂನು ಒಪ್ಪುವುದಿಲ್ಲ. ಕಾನೂನು ಒಪ್ಪುವುದಿಲ್ಲ ಎಂದಾದರೇ ಅದನ್ನ ಅವಶ್ಯಕವಾಗಿ ಬದಲಾವಣೆ ಮಾಡಿಕೊಳ್ಳಲೇಬೇಕು. ಅದು ಯಾವ ಧರ್ಮವಾದರೂ ಸರಿಯೇ... ನಮ್ಮಲ್ಲಿ ದೇಶದ ಕಾನೂನೇ ಮೊದಲು, ನಂತರ ಧರ್ಮ. ಏಕೆಂದರೆ ನಮ್ಮ ರಾಷ್ಟ್ರ ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಜಾತ್ಯಾತೀತ ರಾಷ್ಟ್ರ. ಈ ನಿಟ್ಟಿನಲ್ಲಿ ಈ ತೀರ್ಪು ಸ್ವಾಗತಾರ್ಹ. ಆದ್ದರಿಂದ ರಾಷ್ಟ್ರದ ಸುಪ್ರಿಂ ಕೋರ್ಟ್ ನೀಡಿರುವ ತಲಾಖ್ ನಿಷೇಧದ ಆಜ್ಞೆಯನ್ನು ಶಿರಸಾ ಪಾಲಿಸಲೇಬೇಕು. ಆಗ ಮಾತ್ರ ಭಾರತದ ನೆಲದಲ್ಲಿ ಜೀವಿಸುತ್ತಿರುವುದಕ್ಕೆ ಒಂದು ಕೃತಜ್ಞತೆ ನೀಡಿದಂತಾಗುವುದು ಮತ್ತು ಇದು ಎಲ್ಲರ ಕರ್ತವ್ಯ ಕೂಡ ಹೌದು," ಎನ್ನುತ್ತಾರೆ ಅವರು.
"ಇದೊಂದು ತುಂಬಾ ಕ್ಲಿಷ್ಟಕರವಾದ ಪ್ರಕರಣವಾಗಿತ್ತು. ಏನೇ ಆಗಲಿ ಈ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಸುಪ್ರೀಂಕೋರ್ಟ್ ತುಂಬಾ ಘನತೆವೆತ್ತ ತೀರ್ಪನ್ನು ನೀಡಿದೆ. ತ್ರಿವಳಿ ತಲಾಖ್ ಕುರಿತಂತೆ ಸುಪ್ರೀಂಕೋರ್ಟ್ ಪ್ರಗತಿಪರ ಹಾಗೂ ಐತಿಹಾಸಿಕವಾದ ತೀರ್ಪು ನೀಡುವ ಮೂಲಕ, ಇದು ಮುಸ್ಲಿಮ್ ಮಹಿಳೆಯರ ಗೆಲುವಾಗಿದೆ. ಈ ನಿಟ್ಟಿನಲ್ಲಿ ಈ ತೀರ್ಪು ಸ್ವಾಗತಾರ್ಹ," ಎನ್ನುವುದು ಮಂಗಳೂರಿನ ಶಿಕ್ಷಕಿ ಮಮ್ತಾಜ್ ಭಾನು ಅವರ ಅಭಿಪ್ರಾಯವಾಗಿದೆ.
"ಒಮ್ಮೆಲೇ ಮೂರು ಬಾರಿ ತಲಾಖ್ ಹೇಳುವುದು ನಿಜಕ್ಕೂ ಅಮಾನವೀಯ. ಇದಕ್ಕೆ ನನ್ನ ವಿರೋಧವೂ ಇದೆ. ಶರಿಯತ್ ಕೂಡಾ ಈ ರೀತಿ ತಲಾಕ್ ಹೇಳುವುದನ್ನು ಒಪ್ಪುವುದಿಲ್ಲ. ಅಲ್ಲಿ ಹೆಣ್ಣು-ಗಂಡು ಇಬ್ಬರಿಗೂ ತಲಾಕ್ ನಿರ್ಧಾರಕ್ಕೆ ಕಾಲಾವಕಾಶ ನೀಡುತ್ತದೆ," ಎನ್ನುತ್ತಾರೆ ಅನುಪಮಾ ಪತ್ರಿಕೆಯ ಸಂಪಾದಕಿ, ಲೇಖಕಿ, ಹಾಗೂ ಆಪ್ತ ಸಮಾಲೋಚಕಿ ಶಹನಾಝ್.
"ಇಸ್ಲಾಂ ಧರ್ಮವನ್ನು ಸರಿಯಾಗಿ ಪಾಲಿಸುವವರು ತಲಾಖ್ ನಂತಹ ಪ್ರಮಾದಗಳನ್ನು ಮಾಡುವುದಿಲ್ಲ. ಕೆಲವೊಮ್ಮೆ ಇದನ್ನು ಮೀರಿ ಒಮ್ಮೆಲೇ ಮೂರು ಬಾರಿ ತಲಾಖ್ ನೀಡಿ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿರುವುದೂ ಇದೆ. ಇದನ್ನು ನಾನು ವಿರೋಧಿಸುತ್ತೇನೆ. ಸುಪ್ರೀಂಕೋರ್ಟ್ ಕೂಡಾ ಇದೇ ವಾದವನ್ನು ಎತ್ತಿಹಿಡಿದಿದೆ. ಈ ನಿಟ್ಟಿನಲ್ಲಿ ಈ ತೀರ್ಪು ಸ್ವಾಗತಾರ್ಹ," ಎಂಬುದು ಶಹನಾಝ್ ಹೇಳಿಕೆಯಾಗಿದೆ.
"ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠ, ತಲಾಖ್ ಅಸಾಂವಿಧಾನಿಕ ಎಂದು ಹೇಳಿ ರದ್ದು ಮಾಡಿ ಬಹುಮತದ ತೀರ್ಪು ನೀಡಿದೆ. ಜಗತ್ತಿನ ಬಹುತೇಕ ದೇಶಗಳಲ್ಲಿ ತ್ರಿವಳಿ ತಲಾಖ್ ಅಸ್ತಿತ್ವದಲ್ಲಿ ಇಲ್ಲ. ಇದು ಯಾರ ವಿರುದ್ಧದ ಅಥವಾ ಪರವಾದ ತೀರ್ಪು ಎಂದು ವಿಂಗಡಿಸಲು ಸಾಧ್ಯವಿಲ್ಲ. ಇದೊಂದು ಮುಸ್ಲಿಮ್ ಮಹಿಳೆಯರಿಗೆ ಸಿಕ್ಕ ಸ್ವಾತಂತ್ರ್ಯ," ಎನ್ನುತ್ತಾರೆ ಟೈಲರ್ ವೃತ್ತಿ ಮಾಡುವ ಸಲ್ಮಾ.












Click it and Unblock the Notifications