ಮೂಡುಬಿದಿರೆ-ಮಂಗಳೂರು ಚತುಷ್ಪಥ: ನ್ಯಾಯಯುತ ದರ ಸಿಗದೆ ಭೂಮಿ ಕೊಡಲ್ಲವೆಂದ ಭೂಮಾಲೀಕರು
ಮಂಗಳೂರು, ಫೆಬ್ರವರಿ 11: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ-169 ಚತುಷ್ಪಥಕ್ಕೆ ಪೂರ್ವ ಭೂಸ್ವಾಧೀನ ಮಾಡುವುದಕ್ಕೆ ಮಾಡಿರುವ ಅಂತಿಮ ಅವಾರ್ಡ್ನಲ್ಲಿ ಮಾರುಕಟ್ಟೆ ದರದಲ್ಲಿ ನ್ಯಾಯಯುತ ಪರಿಹಾರ ದೊರಕಿಲ್ಲ.
ಇದನ್ನು ಸರಿಪಡಿಸದಿದ್ದರೆ ಜಮೀನು ಬಿಟ್ಟು ಕೊಡುವುದಿಲ್ಲ. ಹೆದ್ದಾರಿ ಪ್ರಾಧಿಕಾರದ ಧೋರಣೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧ ಎಂದು ಯೋಜನೆಯ ಭೂಮಾಲೀಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಹೇಳಿದರು.
ತಮಗಾಗುವ ಅನ್ಯಾಯ ಬಗ್ಗೆ ಈಗಾಗಲೇ ಸಮಿತಿ ಸಭೆ ನಡೆಸಲಾಗಿದೆ. ಫೆ.12ರಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರನ್ನು ಭೇಟಿ ಮಾಡಲಿದ್ದೇವೆ. ಫೆ.22 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಬಳಿಗೆ ನಿಯೋಗ ಹೋಗುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ತಿಳಿಸಿದರು.

ಜಿಲ್ಲಾಧಿಕಾರಿಯವರು 2020ರ ಡಿ.29 ರಂದು ಬೆಂಗಳೂರಿನಲ್ಲಿರುವ ಎನ್ಎಚ್ಎಐ ಪ್ರಾದೇಶಿಕ ವ್ಯವಸ್ಥಾಪಕರಿಗೆ ಪತ್ರ ಬರೆದು ತಾವು ಸೂಚಿಸಿರುವಂತೆ ಭೂ ದರ ನಿಗದಿಪಡಿಸದಿದ್ದರೆ ಭೂಮಾಲೀಕರಿಗೆ ಹೆಚ್ಚಿನ ನಷ್ಟವಾಗಲಿದೆ. ಹಾಗಾಗಿ ನ್ಯಾಯಯುತ ದರ ಕಾಯಿದೆ 2013ರ ಕಲಂ 26ರಡಿ ಮಾರುಕಟ್ಟೆ ದರ ನಿಗದಿಪಡಿಸಲು ಸೂಚಿಸಿದ್ದರು.
ಆದರೆ ಬೆಂಗಳೂರಿನ ಅಧಿಕಾರಿ 20 ಸೆಂಟ್ಸ್ ಒಳಗಿನ ಜಮೀನಿಗೆ ಮಾರುಕಟ್ಟೆ ದರ ಒಳಪಡಿಸಬಾರದು ಎಂದು ಜನವರಿಯಲ್ಲಿ ಪತ್ರ ಬರೆದಿದ್ದಾರೆ. ಈಗಾಗಲೇ 1894 ರದ್ದುಪಡಿಸಿ ನ್ಯಾಯಯುತ ದರ ಕಾಯ್ದೆ 2013 ಜಾರಿಗೆ ಬಂದಿರುವುದರಿಂದ ಸಿವಿಸಿ ನಿರ್ದೇಶನ ಅಪ್ರಸ್ತುತವಾಗಲಿದೆ.
ಜಿಲ್ಲಾಧಿಕಾರಿ ನಿರ್ದೇಶನ ಬರುವುದಕ್ಕೆ ಮೊದಲೇ ವಿಶೇಷ ಭೂಸ್ವಾಧೀನಾಧಿಕಾರಿ ಗ್ರಾಮಗಳ ಭೂಮೌಲ್ಯವನ್ನು ಅತಿ ಕಡಿಮೆ ದರ ನಿಗದಿಪಡಿಸಿ ಅವಾರ್ಡ್ ಆದೇಶವನ್ನು ಯೋಜನಾ ನಿರ್ದೇಶಕರಿಗೆ ಸಲ್ಲಿಸಿರುವುದು ತಿಳಿದುಬಂದಿದೆ. ಆದರೆ ಪ್ರಾಧಿಕಾರದವರಿಗೆ ವಿಶೇಷ ಭೂಸ್ವಾಧೀನಾಧಿಕಾರಿಯವರ ಅವಾರ್ಡ್ ರಚನೆ ವಿಚಾರದಲ್ಲಿ ನಿರ್ದೇಶನ ನೀಡಲು ಅಧಿಕಾರವಿಲ್ಲ ಎಂದರು. ಸಮಿತಿ ಸಂಚಾಲಕ ಪ್ರಕಾಶ್ಚಂದ್ರ, ಕಾರ್ಯದರ್ಶಿ ವಿಶ್ವಜಿತ್, ಬೃಜೇಶ್ ಶೆಟ್ಟಿ ಮಿಜಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications