ಅಯ್ಯಪ್ಪ ಸ್ವಾಮಿ ಸ್ತುತಿ ರಾಗದಲ್ಲಿ ಶಾಸಕ ಬಾವಾ 'ಭಜನೆ', ಹಿಂದೂಗಳ ಆಕ್ರೋಶ
ಮಂಗಳೂರು, ಮಾರ್ಚ್ 10: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿವೆ. ಒಂದೆಡೆ ಸಮಾವೇಶಗಳು ನಡೆಯುತ್ತಿದ್ದರೆ ಇನ್ನೊಂದೆಡೆ ಪಾದಯಾತ್ರೆಯ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ .
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಚುನಾವಣೆ ಸಮಯದಲ್ಲಿ ಜನರನ್ನು ಆಕರ್ಷಿಸುವುದಕ್ಕಾಗಿ ರಾಜಕಾರಣಿಗಳು ಏನೆಲ್ಲ ಕಸರತ್ತು ಮಾಡ್ತಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನವೊಂದು ಬೆಳಕಿಗೆ ಬಂದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪುಣ್ಯ ಕ್ಷೇತ್ರ ಶಬರಿಮಲೆಯ ಅಯ್ಯಪ್ಪ ಸ್ವಾಮಿಯನ್ನು ಸ್ತುತಿಸುವ "ಕಲ್ಲು ಮುಳ್ಳು ಶಬರಿಮಲೆಕ್ಕ್" ಅನ್ನುವ ಭಕ್ತಿಗೀತೆಯನ್ನೇ ಹೋಲುವಂತೆ ಚುನಾವಣಾ ಪ್ರಚಾರದ ಪದ್ಯವನ್ನು ರಚಿಸಲಾಗಿದೆ.
ಸಾಮರಸ್ಯಕ್ಕಾಗಿ ಶಾಸಕ ಮೊಯ್ದೀನ್ ಬಾವಾ 10 ದಿನಗಳ ಪಾದಯಾತ್ರೆ
ಆದರೆ, ಹಾಡಿನಲ್ಲಿ ಅಯ್ಯಪ್ಪ ಸ್ವಾಮಿಯ ಬದಲಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾರನ್ನು ಹೊಗಳಿ ಸಾಹಿತ್ಯ ರಚಿಸಲಾಗಿದ್ದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸಿದ್ಧ ಭಕ್ತಿಗೀತೆಯ ಧಾಟಿಯನ್ನು ರಾಜಕಾರಣಿಯನ್ನು ಹೊಗಳಲು ಬಳಸಿಕೊಂಡಿದ್ದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪದ್ಯ ವೈರಲ್ ಆಗಿದ್ದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಸಕ ಮೊಯ್ದೀನ್ ಬಾವಾ ಅವರ ವಿರುದ್ದ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ತುಳು ಭಾಷೆಯಲ್ಲಿ ಈ ಹಾಡು ರಚಿಸಲಾಗಿದ್ದು ಶಾಸಕ ಮೊಯ್ದೀನ್ ಬಾವಾ ಹಿಂದೂ ಸಂಘಟನೆಗಳ ಆಕ್ರೋಶ ಕಟ್ಟಿಕೊಳ್ಳುವಂತಾಗಿದೆ.