ಮೋದಿ ಹೆಸರು ಉಲ್ಲೇಖಿಸಿದ ಯಕ್ಷಗಾನ ಪಾತ್ರಧಾರಿ ವಿರುದ್ಧ ಕಾಂಗ್ರೆಸ್ ಕೆಂಗಣ್ಣು
ಮಂಗಳೂರು, ಫೆಬ್ರವರಿ 01: ಛತ್ರಪತಿ ಶಿವಾಜಿ ಮಹಾರಾಜ್ ಯಕ್ಷಗಾನದ ಪ್ರಸಂಗದ ಸಂಭಾಷಣೆ ವೇಳೆ ಪಾತ್ರಧಾರಿ ಪ್ರಧಾನಿ ನರೇಂದ್ರ ಮೋದಿ ಹೆಸರು ಉಲ್ಲೇಖಿಸಿ ಸಂಭಾಷಣೆ ನಡೆಸಿದ್ದು, ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಶಿವಾಜಿ ಮಹಾರಾಜನ ಕಥೆಯುಳ್ಳ ಯಕ್ಷಗಾನ ಪ್ರದರ್ಶನ ದೇಂತಡ್ಕ ಎಂಬಲ್ಲಿ ನಡೆದಿತ್ತು. ಶಿವಾಜಿಯ ಗುರು ಸಮರ್ಥ ರಾಮದಾಸನ ಪಾತ್ರವನ್ನು ಕಲಾವಿದ ಗಣರಾಜ ಭಟ್ ಬಡೆಕ್ಕಿಲ ನಿರ್ವಹಿಸಿದ್ದರು.
ಶಿವಾಜಿ ಮಹಾರಾಜರಿಗೆ ಗುರು ಸಮರ್ಥ ರಾಮದಾಸ್ ಉಪದೇಶ ನೀಡುವ ಸಂಭಾಷಣೆಯ ಸಂದರ್ಭದಲ್ಲಿ ಭಾರತದ ಸ್ವಚ್ಛತೆಗಾಗಿ ನರೇಂದ್ರನಂತೆ ನೀನು ಕೇಸರಿಯ ತಂಡ ಕಟ್ಟಬೇಕು. ರಾತ್ರಿ ವೇಳೆ ಗೋವುಗಳನ್ನು ಕದ್ದೊಯ್ಯುವ ದುಷ್ಟರನ್ನು ಸದೆಬಡಿಯಲು ತರುಣ ಪಡೆಯನ್ನು ಜಾಗರಣ ವೇದಿಕೆಯ ರೂಪದಲ್ಲಿ ಕಟ್ಟಬೇಕಿದೆ ಅನ್ನುವ ಉಪದೇಶವನ್ನು ಶಿವಾಜಿಗೆ ಹೇಳುತ್ತಾರೆ.
ಕಥೆಯ ರೂಪವನ್ನು ಈಗಿನ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಬದಲಿಸಿಕೊಂಡು ಪ್ರಧಾನಿ ಮತ್ತು ಹಿಂದು ಸಂಘಟನೆಯ ಹೆಸರು ಹೇಳಿದ್ದು, ಈಗ ಬಿಜೆಪಿ ವಿರೋಧಿಗಳ ಕಣ್ಣು ಕೆಂಪಾಗಿಸಿದ್ದು, ಕಾಂಗ್ರೆಸ್ಸಿಗರಿಂದ ಭಾರೀ ವಿರೋಧ ಕೇಳಿಬಂದಿದೆ. ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ -ವಿರೋಧದ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಮಾಜಿ ಸಚಿವ ರಮಾನಾಥ ರೈ, ದಕ್ಷಿಣ ಕನ್ನಡ ಎಸ್ಪಿಗೆ ಫೋನ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ, ಲಿಖಿತವಾಗಿ ಯಾವುದೇ ದೂರು ಸಲ್ಲಿಸಿಲ್ಲ. ಇದನ್ನೇ ನೆಪ ಮಾಡಿಕೊಂಡ ಪುತ್ತೂರು ಠಾಣೆ ಪೊಲೀಸರು ಕಲಾವಿದ ಗಣರಾಜ ಭಟ್ಟರನ್ನು ಠಾಣೆಗೆ ಕರೆಸಿ, ಮುಚ್ಚಳಿಕೆ ಬರೆಸಿದ್ದಾರೆ.
ಈ ಯಕ್ಷಗಾನ ಕೆಲವು ದಿನಗಳ ಹಿಂದೆ ಪುತ್ತೂರು ತಾಲೂಕಿನ ದೇಂತಡ್ಕದಲ್ಲಿ ನಡೆದಿತ್ತು. ಇದೀಗ ರಮಾನಾಥ ರೈ ಫೋನ್ ಕರೆ ಮಾತ್ರಕ್ಕೆ ಪೊಲೀಸರು ಕಲಾವಿದನನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದು ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications