ಮಂಗಳೂರು : ಚಿರತೆ ಭೀತಿಯಲ್ಲೇ ಗ್ರಾಮಸ್ಥರ ಬದುಕು
ಮಂಗಳೂರು, ಡಿ. 26 : 'ಚಿರತೆ ನಮ್ಮ ಮನೆ ಅಂಗಳದ ಸಮೀಪದಲ್ಲೇ ಓಡಾಡುತ್ತದೆ. ಕೆಲವು ದಿನದ ಮೊದಲು ಮನೆಯಂಗಳದಲ್ಲಿದ್ದ ನಾಯಿಯೊಂದನ್ನು ತಿಂದು ಹಾಕಿದೆ'. ಇದು ಬಂಟ್ವಾಳ ತಾಲೂಕಿನ ದಲಿತ ಕಾಲೋನಿಯ ಜನರು ಆತಂಕದಿಂದ ಹೇಳುವ ಮಾತು. ಈ ಕಾಲೋನಿಯ ಜನರು ಚಿರತೆ ಭಯದಿಂದ ಬದುಕುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ದಲಿತ ಕಾಲೋನಿಯ ಜನರು ಚಿರತೆ ಭಯದಲ್ಲಿ ಬದುಕುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಕಾಲೋನಿಯ ನಿವಾಸಿ ಕೃಷ್ಣಪ್ಪ ಮುಗೇರ ಕಾಡಿಗೆ ಕಟ್ಟಿಗೆ ತರಲು ಹೋದಾಗ ಚಿರತೆ ಬೆನ್ನಟ್ಟಿಕೊಂಡು ಬಂದಿತ್ತು. ಗ್ರಾಮದ ಸಮೀಪದ ಕಾಡಿನಲ್ಲಿ ಒಂದು ಚಿರತೆ ಮತ್ತು ನಾಲ್ಕು ಮರಿಗಳಿವೆ.
ಸಂಜೆಯಾದ ಬಳಿಕ ಕಾಲೋನಿಯ ಜನರು ಮನೆಯಿಂದ ಹೊರಬರಲು ಹೆದರುತ್ತಾರೆ. ಆದರೂ ಸರ್ಕಾರ ಕಾಲೋನಿಯ ಜನರನ್ನು ಪ್ರಾಣಿಗಳಿಂದ ರಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ನಿವಾಸಿಗಳ ಆರೋಪ.

ಕಾಲೋನಿಗೆ ಕಾಡು ಹತ್ತಿರವಾಗಿದೆ, ಆದ್ದರಿಂದ ಚಿರತೆ ಮನೆಯಂಗಳಕ್ಕೆ ಬಂದು ನಾಯಿಯನ್ನು ಹೊತ್ತುಕೊಂಡು ಹೋಗಿದೆ. ಮರಿಗಳು ಸುತ್ತಾಡುವುದರಿಂದ ಮಕ್ಕಳನ್ನು ಒಂಟಿಯಾಗಿ ಕಳುಹಿಸಲು ಜನರು ಭಯಪಡುತ್ತಾರೆ.[ಕೊಳ್ಳೆಗಾಲದಲ್ಲಿ ಚಿರತೆ ದಾಳಿ, ಲಾರಿ ಕ್ಲೀನರ್ ಬಲಿ]
ಕಾಲೋನಿಯ ಮಕ್ಕಳು ಕಾಡು ದಾರಿಯಲ್ಲಿಯೇ 2 ಕಿ.ಮೀ. ನಡೆದುಕೊಂಡು ಶಾಲೆಗೆ ಹೋಗಬೇಕು. ಮಕ್ಕಳು ಸುರಕ್ಷಿತವಾಗಿ ಮನೆ ಸೇರಿದರೆ ಸಾಕೆಂದು ಜನರು ದೇವರಿಗೆ ನಿತ್ಯ ಪ್ರಾರ್ಥನೆ ಸಲ್ಲಿಸುತ್ತಾರೆ. ಕಾಡುಪ್ರಾಣಿ ಹಾವಳಿ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ ಅಬ್ದುಲ್ ರಜಾಕ್ ಅವರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಾಲೋನಿಯ ಜನರು ಹೇಳುತ್ತಾರೆ.
ಈ ಕಾಲೋನಿಗೆ ಸಂಪರ್ಕ ಕಲ್ಪಿಸಲು ಅಗತ್ಯವಾದ ರಸ್ತೆಗಳಿಲ್ಲ, ಬೀದಿ ದೀಪ, ನೀರು ಪೂರೈಕೆ ಮುಂತಾದ ಸೌಲಭ್ಯಗಳಂತೂ ದೂರದ ಮಾತು. ಅರಣ್ಯ ಇಲಾಖೆ ಅಧಿಕಾರಿಗಳು ಸಹ ಇಲ್ಲಿ ಕಾಡು ಪ್ರಾಣಿಗಳನ್ನು ಹಿಡಿಯಲು ಬೋನುಗಳನ್ನು ಅಳವಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. [ತುಮಕೂರು : ಚಿರತೆ ಹಿಡಿದು ನಿಟ್ಟುಸಿರು ಬಿಟ್ಟ ಅಧಿಕಾರಿಗಳು]
ಚಿರತೆ ಬೇಟೆಗೆ ಕಾರ್ಯಾಚರಣೆ : ಮಂಗಳವಾರದಿಂದ ಈ ಕಾಲೋನಿಯ ಸುತ್ತಮುತ್ತಾ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ಆಂಭಿಸಲಾಗಿದೆ. ಬೋನು, ಅರವಳಿಕೆ ಚುಚ್ಚುಮದ್ದು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್, ಸಹಾಯಕ ಅರಣ್ಯಾಧಿಕಾರಿ ಮ್ಯಾಥ್ಯೂ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ನೇತೃತ್ವ ವಹಿಸಿದ್ದಾರೆ. ಚಿರತೆ ಮಾತ್ರ ಸೆರೆ ಸಿಕ್ಕಿಲ್ಲ.












Click it and Unblock the Notifications