ಮತ್ತೊಂದು ಜೆಎನ್ಯು ಮಾಡಲೊರಟಿದ್ದಾರೆ: ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ
ಮಂಗಳೂರು, ಮೇ 26: ರಾಜ್ಯದಲ್ಲಿ ಹಿಜಾಬ್ ವಿಚಾರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕೋರ್ಟ್ ಮೆಟ್ಟಿಲೇರಿದ ನಂತರ ತಣ್ಣಗಾಗಿದೆ ಎನ್ನವುಷ್ಟರಲ್ಲಿ ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ ಆರಂಭವಾಗಿದೆ. ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ನಿಯಮ ಅನುಷ್ಠಾನ ಆಗಿಲ್ಲ. ಎರಡು ತಿಂಗಳಿನಿಂದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ ಎಂದು ಹೇಳಿ ಗುರುವಾರ ಹಿಂದೂ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಕಾಲೇಜನ್ನು ಮತ್ತೊಂದು ಜೆ.ಎನ್.ಯು ಮಾಡೋಕೆ ಹೊರಟಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಹಿಜಾಬ್ ಆಯ್ಕೆ ಅವರವರ ಹಕ್ಕು: ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್
ಕೋರ್ಟ್ ಮೆಟ್ಟಿಲೇರಿದ್ದ ಹಿಜಾಬ್ ವಿವಾದ ಪಕ್ರರಣವನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿಗಳಾದ ಜೆಎಂ ಖಾಜಿ ಮತ್ತು ಕೃಷ್ಣ ದೀಕ್ಷಿತ್ ಅವರ ತ್ರಿಸದಸ್ಯ ಪೀಠವು ಮಾರ್ಚ್ 15 ರಂದು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ ಎಂದು ತೀರ್ಪು ನೀಡಿತ್ತು. "ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯಲ್ಲಿ ಅಗತ್ಯವಾದ ಧಾರ್ಮಿಕ ಆಚರಣೆಯ ಭಾಗವಾಗಿಲ್ಲ ಎಂದು ನಾವು ಪರಿಗಣಿಸಿದ್ದೇವೆ" ಎಂದು ಪೀಠ ಹೇಳಿತ್ತು. ತರಗತಿಯಲ್ಲಿ ಸರ್ಕಾರ ಅಥವಾ ಕಾಲೇಜು ಆಡಳಿತ ಮಂಡಳಿ ನಿರ್ಧರಿಸುವ ಸಮವಸ್ತ್ರವನ್ನು ಧರಿಸಲು ಮಾತ್ರ ಅವಕಾಶ ಇದೆ ಎಂದು ಹೇಳಿತ್ತು. ಆದರೆ ಮಂಗಳೂರಿನ ಕಾಲೇಜಿನಲ್ಲಿ ಮತ್ತೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರಿಂದ ವಿವಾದ ಮತ್ತೆ ಪುನಾರಂಭಗೊಂಡಿದೆ.
ಕಮ್ಯುನಿಸ್ಟ್ ಷಡ್ಯಂತ್ರ
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮತ್ತೆ ಹಿಜಾಬ್ ವಿವಾದ ಆರಂಭವಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಹಿಜಾಬ್ ನಿಯಮ ಪಾಲಿಸಲಾಗುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಬೆಳಗ್ಗೆಯೇ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕಾಲೇಜಿನಲ್ಲಿ ಹಿಜಾಬ್ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ನ್ಯಾಯಾಲಯದ ಆದೇಶವನ್ನು ಕಾಲೇಜಿನಲ್ಲಿ ಉಲ್ಲಂಘಿಸಲಾಗಿದೆ. ಈ ಬಗ್ಗೆ ಸಿಂಡಿಕೇಟ್ ಸಭೆಯಾದರೂ ಹಿಜಾಬ್ ನಿಯನವನ್ನು ಕಾಲೇಜಿನಲ್ಲಿ ಅನುಷ್ಠಾನ ಮಾಡಲಾಗುತ್ತಿಲ್ಲ. ಇದರ ಹಿಂದೆ ಕಮ್ಯುನಿಸ್ಟ್ ಷಡ್ಯಂತ್ರ ಇದೆ ಅಂತಾ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮತ್ತೊಂದು ಜೆಎನ್ಯು ಮಾಡೋ ಸಂಚು
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1100 ವಿದ್ಯಾರ್ಥಿಗಳಿದ್ದು, 43 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಗೆ ಈ ಬಗ್ಗೆ ಹಲವು ಬಾರಿ ಮನವಿ ನೀಡಿದ್ದೇವೆ. ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಆಗಿದೆ ಅಂತಾ ಹೇಳಿದ್ದಾರೆ. ಆದರೆ ಎರಡು ತಿಂಗಳಿನಿಂದ ನ್ಯಾಯಾಲಯ ದ ನಿಯಮ ಉಲ್ಲಂಘನೆ ಯಾಗಿದೆ. ವಿದ್ಯಾರ್ಥಿ ನಾಯಕನನ್ನು ವಿದ್ಯಾರ್ಥಿಗಳ ವಿರುದ್ಧ ನಿಲ್ಲುವಂತೆ ಮಾಡಿದ್ದಾರೆ. ಹೀಗಾಗಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಕೂಡಲೇ ವಿದ್ಯಾರ್ಥಿ ನಾಯಕನನ್ನು ಜವಾಬ್ದಾರಿಯಿಂದ ಕೆಳಗಿಳಿಸಬೇಕು. ಮತ್ತು ಕಾಲೇಜಿನಲ್ಲಿ ಹಿಜಾಬ್ ನಿಯಮವನ್ನು ಕೂಡಲೇ ಅನುಷ್ಠಾನ ಗೊಳಿಸಬೇಕು. ಮಂಗಳೂರು ವಿಶ್ವವಿದ್ಯಾನಿಲಯವನ್ನು ಜೆಎನ್ಯು ಮಾಡೋಕೆ ಸಂಚು ಆಗುತ್ತಿದೆ. ಇದಕ್ಕೆ ಕಾಲೇಜಿನ ಕೆಲ ಪ್ರಾಧ್ಯಾಪಕರು ಬೆಂಬಲ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿ ಸಮೂಹ ಆರೋಪಿಸಿದೆ.
ಹಿಜಾಬ್ ನಿಯಮ ಅಳವಡಿಸಲು ಸೂಚನೆ
ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ವಿಶ್ವವಿದ್ಯಾನಿಲಯದ ರಿಜಿಸ್ಟರ್ ಕಿಶೋರ್ ಆಗಮಿಸಿದ್ದಾರೆ. ಬಳಿಕ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಿಶೋರ್, ಹಿಜಾಬ್ ನಿಯಮ ಕಾಲೇಜಿನಲ್ಲಿ ಅಳವಡಿಸೋಕೆ ಸೂಚನೆ ನೀಡಿದ್ದೇವೆ. ಈ ಬಗ್ಗೆ ಕಾಲೇಜು ನೊಟೀಸ್ ಬೋರ್ಡ್ ನಲ್ಲಿ ನೋಟಿಸ್ ಅಳವಡಿಸಿದ್ದೇವೆ. ನಾಳೆ ಈ ವಿವಾದ ದ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಸಿಂಡಿಕೇಟ್ ಸಭೆ ನಡೆಸಿ ತಪ್ಪಿದಸ್ಥರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ.
ಪ್ರಮುಖ ನಿಯಮ ಪುಸ್ತಕದಲ್ಲಿ ಹಿಜಾಬ್ಗೆ ಅವಕಾಶ
ಈ ಎಲ್ಲಾ ಬೆಳವಣಿಗೆ ಬಗ್ಗೆ ವಿಶ್ವವಿದ್ಯಾನಿಲಯದ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಪ್ರತಿಕ್ರಿಯಿಸಿದ್ದು, ಎಬಿವಿಪಿ ನಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದೆ. ಕಾಲೇಜು ಆವರಣದಲ್ಲಿ ಏಕಾಏಕಿ ಹಿಜಾಬ್ ನಿಷೇಧಿಸಿರುವುದು ಸರಿಯಲ್ಲ. ಇಷ್ಟು ದಿನ ಇಲ್ಲದ ಹಿಜಾಬ್ ವಿವಾದ ಈಗ ಏಕಾಏಕಿ ಬಂದದ್ದೇಕೆ? ಕಾಲೇಜಿಗೆ ಸಂಬಂಧಿಸಿದ ಪ್ರಮುಖ ನಿಯಮ ಪುಸ್ತಕದಲ್ಲಿ ಹಿಜಾಬ್ಗೆ ಅವಕಾಶ ನೀಡಲಾಗಿದೆ. ಸಮವಸ್ತ್ರ ಜೊತೆಗೆ ಶಿರವಸ್ತ್ರ ಧರಿಸಲು ಇಚ್ಚಿಸುವ ವಿದ್ಯಾರ್ಥಿನಿಯರು ಸಮವಸ್ತ್ರದ ಮೇಲು ಹೊದಿಕೆ (ಶಾಲು) ಶಿರವಸ್ತ್ರವನ್ನು ಧರಿಸಲು ಅನುಮತಿ ಇರುತ್ತದೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಆದರೂ ಈಗ ಹಿಜಾಬನ್ನು ನಿಷೇಧಿಸಿರುವುದು ಸರಿಯಲ್ಲ. ಈ ವಿವಾದ ಸರಿಪಡಿಸಲು ಜಿಲ್ಲಾಧಿಕಾರಿಯವರು ಸೋಮವಾರದವರೆಗೆ ಕಾಲಾವಕಾಶ ಕೇಳಿದ್ದಾರೆ. .ನಮಗೆ ನ್ಯಾಯ ದೊರಕುವ ಭರವಸೆ ಇದೆ ಎಂದು ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿ ಗೌಸಿಯಾ ಹೇಳಿದ್ದಾರೆ.
ಒಟ್ಟಿನ್ನಲ್ಲಿ ತಣ್ಣಗಾಗಿದ್ದ ಹಿಜಾಬ್ ವಿವಾದ ಮತ್ತೆ ಮುನ್ನಲೆಗೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ..ರಾಜ್ಯದಲ್ಲಿ ಹಿಜಾಬ್ ಗಲಾಟೆ ಜೋರಾಗಿದ್ದಾಗ ತಣ್ಣಗಾಗಿದ್ದ ಮಂಗಳೂರು, ಈಗ ರಾಜ್ಯ ತಣ್ಣಾಗಾಗಿರುವಾಗ ಮಂಗಳೂರಿನಲ್ಲಿ ಹಿಜಾಬ್ ವಿವಾದ ಎದ್ದಿರೋದರುವುದರಿಂದ ಮತ್ತೆ ವಿವಾದ ಕಿಚ್ಚು ಹೆಚ್ಚಾಗುವ ಸಾಧ್ಯತೆಗಳಿವೆ.
(ಒನ್ಇಂಡಿಯಾ ಸುದ್ದಿ)