ಕೈದಿಗಳಿಗೆ ಮನೆಗಿಂತ ಮಂಗಳೂರು ಜೈಲೇ ಬಲು ಇಷ್ಟ
ಮಂಗಳೂರು, ನವೆಂಬರ್ 8: ಇತ್ತೀಚೆಗೆ ಇಲ್ಲಿನ ಜೈಲಿನೊಳಗಿಂದ ಸಂಚು ನಡೆಸಿ, ಕೊಲೆ, ಹಿಂಸಾಚಾರ ಪ್ರಕರಣಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಹೆಚ್ಚಾಗುತ್ತಿದೆ. ಜೈಲಿನ ಹೊರಗೆ ಅಪರಾಧ ಕೃತ್ಯಗಳು ಸಾಮಾನ್ಯ ಇರಬಹುದು. ಆದರೆ ಜೈಲಿನೊಳಗೆ ಇದ್ದುಕೊಂಡು ಹಿಂಸಾಚಾರ ನಡೆಸುವುದೆಂದರೆ ಬಂಧನ ಕೂಡ ಅನುಕೂಲವಾದ ಸನ್ನಿವೇಶ ಅನ್ನಿಸಲ್ವೆ?
ಜೈಲಿನ ಒಳಗೆ ಇದ್ದುಕೊಂಡೇ ಕೊಲೆ, ಕಲಹ, ಹಿಂಸಾಚಾರಕ್ಕೆ ಕೈದಿಗಳು ಸಂಚು ರೂಪಿಸಿರುವುದು ತಿಳಿದು ಬಂದಿದೆ. ಇಂತಹ ಒಳಸಂಚು ನಡೆಸುವುಂಥದ್ದು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಮರುಕಳಿಸಿದೆ. ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿಂತಿರುಗಿ ಕರೆದುಕೊಂಡು ಬರುವಾಗ ಆತನ ಬಳಿ, ಚೂರಿ, ಮಾತ್ರೆ, ಗಾಂಜಾ, ಮೊಬೈಲ್ ಪತ್ತೆಯಾಗಿದೆ.[ಮಂಗಳೂರು: ಕೈದಿಗಳಿಂದ ಪೊಲೀಸ್ ಮೇಲೆ ಹಲ್ಲೆಗೆ ಯತ್ನ]

ಇದರಿಂದ ಜೈಲಿನೊಳಗೆ ಮತ್ತೊಂದು ಕೃತ್ಯಕ್ಕೆ ಆತ ಸಂಚು ರೂಪಿಸಿದ್ದನೆ ಎಂಬ ಗುಮಾನಿಗೆ ಕಾರಣವಾಗಿತ್ತು. ಗಾಂಜಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅಲ್ತಾಫ್ ಈ ಕೃತ್ಯ ಎಸಗಿದಾತ. ಈತನನ್ನು ಸೋಮವಾರ ಬೆಳಗ್ಗೆ ಕೋರ್ಟ್ ಗೆ ಹಾಜರುಪಡಿಸಲು ಕರೆದುಕೊಂಡು ಹೋಗಲಾಗಿತ್ತು.
ವಿಚಾರಣೆ ನಡೆಸಿದ ಬಳಿಕ ಮರಳಿ ಕರೆದುಕೊಂಡು ಬರುವಾಗ ಪೊಲೀಸರು ತಪಾಸಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೈದಿಯ ವರ್ತನೆ ಗಮನಿಸಿ, ಸಂಶಯಗೊಂಡು ವಿಚಾರಣೆ ನಡೆಸಿದಾಗ ಅವನು ಹಾಕಿದ ಶೂನೊಳಗೆ ಗಾಂಜಾ, ಮಾದಕ ಮಾತ್ರೆಗಳು, ಮೊಬೈಲ್ ಪತ್ತೆಯಾಗಿದ್ದವು.[ಜೈಲಲ್ಲೇ ಮೊಬೈಲ್ ಬಳಸಿದ ಆರೋಪಿಗಳ ಮರುಬಂಧನ]
ಅಷ್ಟು ಮಾತ್ರವಲ್ಲ, ಆತ ಸೊಂಟದಲ್ಲಿ ಚೂರಿಯನ್ನು ಇರಿಸಿಕೊಂಡಿದ್ದ. ಇದನ್ನು ಪತ್ತೆ ಹಚ್ಚಿದ ಪೊಲೀಸರು ಆತ ಜೈಲಿನೊಳಗೆ ಯಾವುದೋ ಕೃತ್ಯ ನಡೆಸಲು ಸಿದ್ಧನಾಗಿ ಬಂದಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿಗೆ ಆ ವಸ್ತು ಯಾರು ಕೊಟ್ಟರು? ಎಲ್ಲಿ ಕೊಟ್ಟರು? ಅದರ ಹಿಂದಿನ ಉದ್ದೇಶವೇನು? ಎಂದು ತಲೆ ಕೆಡಿಸಿಕೊಂಡಿದ್ದಾರೆ.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸರು ಈ ಬಾರಿ ಜೈಲಿನೊಳಗೆ ನಡೆಯುವ ಹಿಂಸಾಚಾರವನ್ನು ತಡೆಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಯಾವುದೇ ಕೈದಿಯಾಗಿರಲಿ ಒಳ ಸಂಚು ಮಾಡಿದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.











Click it and Unblock the Notifications