ನವದುರ್ಗೆಯರ ಭವ್ಯ ಮೆರವಣಿಗೆಗೆ ಸಿದ್ಧಗೊಳ್ಳುತ್ತಿದೆ ಮಂಗಳೂರು
ಮಂಗಳೂರು, ಅಕ್ಟೋಬರ್.18: ವೈಭವದ ಮಂಗಳೂರು ದಸರಾ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದೆ. ದಸರಾದ ಮುಖ್ಯ ಆಕರ್ಷಣೆ ಶೋಭಾಯಾತ್ರೆಗೆ ಮಂಗಳೂರು ಸಕಲ ರೀತಿಯಲ್ಲಿ ಸಿದ್ಧಗೊಳ್ಳುತ್ತಿದೆ. ನಗರದ ಬೀದಿಗಳು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ.
ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯದಿಂದ ಆರಂಭಗೊಳ್ಳುವ ಶಾರದಾ ಮಾತೆ ಹಾಗೂ ನವದುರ್ಗೆಯರ ಶೋಭಾಯಾತ್ರೆ ಮೆರವಣಿಗೆಗೆ ಎಲ್ಲ ಸಿದ್ಧತೆ ನಡೆಸಲಾಗುತ್ತಿದ್ದು , ಶುಕ್ರವಾರ ಸಂಜೆ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಅರಮನೆ ಮೆರಗು ನೀಡಿದರೆ, ಮಂಗಳೂರು ದಸರಾಕ್ಕೆ ಕುದ್ರೋಳಿ ಗೋಕರ್ಣನಾಥ ದೇವಾಲಯದ್ದೇ ದರ್ಬಾರು. ಮೈಸೂರಲ್ಲಿ ಚಾಮುಂಡೇಶ್ವರಿ ಅಗ್ರದೇವತೆಯಾದರೆ, ಮಂಗಳೂರು ದಸರಾಕ್ಕೆ ಶಾರದ ಮಾತೆಯೊಂದಿಗೆ ಶಕ್ತಿಯ ಪ್ರತೀಕವಾಗಿರುವ ನವದುರ್ಗೆಯರೇ ಧರೆಗಿಳಿದು ಬರುತ್ತಾರೆ.

ಒಂದೆಡೆ ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬು ಸವಾರಿ ನಡೆದರೆ, ಇನ್ನೊಂದೆಡೆ ಮಂಗಳೂರಿನಲ್ಲಿ ನವದುರ್ಗೆಯರ ಭವ್ಯ ಸವಾರಿ ಜರುಗುತ್ತದೆ.
10 ದಿನಗಳ ಕಾಲ ನಡೆಯುವ ಮಂಗಳೂರು ದಸರಾ ಉತ್ಸವ ಕೊನೆಯ ದಿನ ಈ ಭವ್ಯ ಮೆರವಣಿಗೆಯೊಂದಿಗೆ ತೆರೆಬೀಳುತ್ತದೆ. ಮಂಗಳೂರಿನಲ್ಲಿ ನಡೆಯುವ ಈ ವಿಜೃಂಭಣೆಯ ದಸರಾ ಉತ್ಸವದ ಆಕರ್ಷಕ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಬರುತ್ತಾರೆ.

ಸುಮಾರು 9 ಕಿಮೀ ಈ ಭವ್ಯ ಮೆರವಣಿಗೆ ಜರಗುತ್ತದೆ. ಮೆರವಣಿಗೆ ಹಾದು ಹೋಗುವ ರಸ್ತೆಯುದ್ದಕ್ಕೂ ಶ್ರೀ ಕ್ಷೇತ್ರದ ವತಿಯಿಂದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ದಸರಾ ಮೆರವಣಿಗೆಯಲ್ಲಿ 75 ಕ್ಕೂ ಅಧಿಕ ಸ್ತಬ್ಧಚಿತ್ರಗಳು ನೂರಕ್ಕೂ ಹೆಚ್ಚಿನ ಕಲಾತಂಡಗಳು ಭಾಗವಹಿಸಲಿವೆ. ಈ ಭವ್ಯ ಶೋಭಾಯಾತ್ರೆಯ ಮೆರವಣಿಗೆ 16 ಗಂಟೆಗಳ ಕಾಲ ನಡೆಯಲಿದ್ದು, ನವದುರ್ಗೆಯರ ಶೋಭಾ ಮೆರವಣಿಗೆ ಸಾಂಗವಾಗಿ ನಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications