ಮಂಗಳೂರು ಕುಕ್ಕರ್ ಬ್ಲಾಸ್ಟ್: ಗಾಯಾಳಿಗೆ ಸರ್ಕಾರದ ಆರ್ಥಿಕ ಭರವಸೆ ಹುಸಿ
ಮಂಗಳೂರು, ಜನವರಿ 16: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಶನಿವಾರ ಬಿಡುಗಡೆಯಾಗಿದ್ದಾರೆ. ಚಿಕಿತ್ಸಾ ವೆಚ್ಚ ಗಗನ ಮುಟ್ಟಿದ್ದು, ರಾಜ್ಯ ಸರ್ಕಾರ ಮಾತ್ರ ನೀಡಿದ ಆರ್ಥಿಕ ಸಹಾಯದ ಭರವಸೆಯನ್ನು ಹುಸಿಗೊಳಿಸಿದೆ.
ಕಳೆದ ವರ್ಷ 2022ರ ನವೆಂಬರ್ 19 ರಂದು ಮಂಗಳೂರಿನ ಗರೋಡಿಯಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿತ್ತು. ಈ ವೇಳೆ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಶೇ.30 ರಷ್ಟು ಸುಟ್ಟ ಗಾಯಗಳಾಗಿದ್ದವು. ಕೂಡಲೇ ಆಸ್ಪತ್ರೆ ಸಾಗಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆದು ನಂತರ ಅವರನ್ನು ಜನರಲ್ ವಾರ್ಡ್ಗೆ ಸ್ಥಳಾಂತರಿಸಲಾಗಿತ್ತು. ಇದೀಗ ಶನಿವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಪೂಜಾರಿ ಅವರಿಗೆ ಒಂದು ತಿಂಗಳು ಬೆಡ್ ರೆಸ್ಟ್ ಪಡೆಯುವಂತೆ ಸೂಚಿಸಿರುವ ವೈದ್ಯರು, ಪೂರ್ತಿ ಗುಣಮುಖರಾಗಲು ಒಂದು ವರ್ಷ ಹಿಡಿಯಬಹುದು ಎಂದು ಹೇಳಿದ್ದಾರೆ. ಆದರೆ ಅವರು ಆಸ್ಪತ್ರೆ ಡಿಸ್ಚಾರ್ಜ್ ಆಗಿದ್ದರೂ ಸಹ ಇತರರ ಸಹಾಯವಿಲ್ಲದೆ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.

ಇಎಸ್ಐ ಸೌಲಭ್ಯ ಹೊಂದಿರುವ ಪೂಜಾರಿ ಅವರ ಹಿರಿಯ ಪುತ್ರಿ ಚಿತ್ರಾಕ್ಷಿ ಮಾತನಾಡಿ, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಘಟನೆ ನಂತರ ರಾಜ್ಯ ಸರ್ಕಾರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಘೋಷಿಸಿತ್ತು. ಆದರೆ ಇದುವರೆಗೂ ಯಾವುದೇ ನೆರವು ನೀಡಲು ಮುಂದಾಗಿಲ್ಲ.
ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 50 ಸಾವಿರ, ವಿದ್ಯುತ್ ಸಚಿವ ವಿ.ಸುನೀಲ್ ಕುಮಾರ್ ಅವರು ವೈಯಕ್ತಿಕವಾಗಿ ರೂ.25 ಸಾವಿರ ಹಣ ಪೂಜಾರಿ ಅವರ ಚಿಕಿತ್ಸೆಗೆ ನೀಡಿದ್ದಾರೆ. ಇದರ ಹೊರತು ಸರ್ಕಾರದಿಂದ ಆರ್ಥಿಕ ಸಹಾಯವಾಗಿಲ್ಲ, ಮುಖ್ಯಮಂತ್ರಿಗಳ ಸಹಾಯಹಸ್ತಕ್ಕಾಗಿ ಕಾಯುತ್ತಿದ್ದೇವೆ ಎಂದು ಅವರು ಅಳಲು ತೋಡಿಕೊಂಡರು.

ಸರ್ಕಾರದ ನೆರವಿಗೆ ಕಾಯುತ್ತಿರುವ ಪೂಜಾರಿ ಕುಟುಂಬ
ರಾಜ್ಯ ಗೃಹ ಸಚಿವರು ಎಲ್ಲ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದರೂ ಸರ್ಕಾರದಿಂದ ಒಂದು ರೂಪಾಯಿ ಬಿಡುಗಡೆ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನನ್ನ ತಂದೆಯ ಚಿಕಿತ್ಸೆಗೆ ಔಷಧಗಳನ್ನು ಖರೀದಿಸಲು ಹಣದ ಅವಶ್ಯಕತೆ ಹೆಚ್ಚಿದೆ.
ದುಡಿದು ತಿನ್ನುವ ಕುಟುಂಬದಲ್ಲಿ ಹೆಚ್ಚಿನ ಆದಾಯ ಮೂಲಗಳಿಲ್ಲ. ಈ ವರ್ಷದ ಮೇ ತಿಂಗಳಲ್ಲಿ ನನ್ನ ಮದುವೆ ನಿಶ್ಚಯವಾಗಿದೆ. ಪರಿಹಾರಕ್ಕಾಗಿ ಕುಟುಂಬ ತೀವ್ರವಾಗಿ ಕಾಯುತ್ತಿದೆ. ಈಗ ನಮ್ಮೆಲ್ಲರ ಜೀವನಾಡಿಯಾಗಿದ್ದ ಆಟೋರಿಕ್ಷಾ ಪೊಲೀಸ್ ಠಾಣೆಯಲ್ಲೇ ತುಕ್ಕು ಹಿಡಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೂಜಾರಿಯವರ ಹಳೆಯ ಮನೆ ನವೀಕರಣವು ರೂ.5.5 ಲಕ್ಷಕ್ಕೆ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸದ್ಯಕ್ಕೆ ಅವರ ಕುಟುಂಬ ಉಜ್ಜೋಡಿಯಲ್ಲಿ ಬಾಡಿಗೆ ಮನೆಯಲ್ಲಿದೆ. ರಾಜ್ಯ ಸರ್ಕಾರ ತುರ್ತಾಗಿ ಕುಟುಂಬಕ್ಕೆ ಹಣ ಮಂಜೂರು ಮಾಡಬೇಕು ಎಂದು ಜಿಬಿಎಫ್ ಅಧ್ಯಕ್ಷ ಆರ್. ಪದ್ಮರಾಜ್ ಒತ್ತಾಯಿಸಿದ್ದಾರೆ. ಘಟನೆಯ ಮುಖ್ಯ ಆರೋಪಿಯಾದ ಮೊಹಮ್ಮದ್ ಶಾರಿಕ್ ಚೇತರಿಸಿಕೊಳ್ಳುತ್ತಿದ್ದು, ಡಿಸೆಂಬರ್ 17 ರಂದು ಎನ್ಐಎ ಬೆಂಗಳೂರು ಜೈಲಿಗೆ ಸ್ಥಳಾಂತರಿಸಲಾಗಿದೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.












Click it and Unblock the Notifications