ಮದರಂಗಿ ಶಾಸ್ತ್ರ ಮುಗಿಸಿ ಪ್ರಿಯಕರನ ಜೊತೆ ವಧು ಪರಾರಿ!
ಮಂಗಳೂರು, ಡಿ. 30 : ಅದ್ದೂರಿ ವಿವಾಹಕ್ಕೆ ಎಲ್ಲವೂ ಸಿದ್ಧವಾಗಿತ್ತು. ವರ ತಾಳಿ ಕಟ್ಟಲು ರೆಡಿಯಾಗಿದ್ದ, ಸಂಬಂಧಿಕರು ಆಗಮಿಸಿದ್ದರು, ಅಡುಗೆ ಭಟ್ಟರು ರುಚಿ-ರುಚಿಯಾದ ಅಡುಗೆ ತಯಾರಿಸುತ್ತಿದ್ದರು. ಆದರೆ, ವಧು ಕೊನೆ ಕ್ಷಣದಲ್ಲಿ ನಾಪತ್ತೆಯಾದ ಕಾರಣ ಮದುವೆ ಮುರಿದುಬಿದ್ದಿದೆ. ವಧು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದೆ.
ಡಿ.29ರ ಸೋಮವಾರ ಕಡಬದಲ್ಲಿ ಈ ಘಟನೆ ನಡೆದಿದೆ. ಬಿಳಿನೆಲೆ ಗ್ರಾಮದ ನಿವಾಸಿ ನಿತ್ಯಾನಂದ ಎಂಬವರ ಪುತ್ರಿ ಡಾ.ಕೃಪಾ ನಾಪತ್ತೆಯಾಗಿರುವ ವಧು. ಬೆಂಗಳೂರಿನಲ್ಲಿರುವ ವೈದ್ಯೆಯಾಗಿರುವ ಡಾ. ಕೃಪಾ ಮದುವೆ ಕಡಬದಲ್ಲಿ ಕ್ಲಿನಿಕ್ ಹೊಂದಿರುವ ಡಾ. ದೇವಿಪ್ರಸಾದ್ ಜತೆ ಸೋಮವಾರ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಬೇಕಿತ್ತು. [ಆನ್ ಲೈನ್ ಮೂಲಕ ಮದುವೆ ನೋಂದಣಿ ಮಾಡಬಹುದು]

ಮದುವೆಗಾಗಿ ಸುಂದರ ಮಂಟಪ, ಊಟದ ತಯಾರಿ ನಡೆದಿತ್ತು. ಆದರೆ, ಮುಂಜಾನೆ 4 ಗಂಟೆಯ ವೇಳೆಗೆ ಡಾ.ಕೃಪಾ ನಾಪತ್ತೆಯಾಗಿದ್ದಾರೆ. ವಧು ಪರಾರಿಯಾಗಿದ್ದರಿಂದ ಕೋಪಗೊಂಡಿರುವ ವರನ ಮನೆಯವರು ಮದುವೆಗೆ ಮಾಡಿದ ಖರ್ಚುಗಳನ್ನು ವಾಪಸ್ ಕೊಡಿಸುವಂತೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. [ವರದಕ್ಷಿಣೆ ಪಡೆದ ವರ ಮದುವೆ ದಿನ ಪರಾರಿ!]
ಪ್ರೇಮ ಪ್ರಕರಣ ಶಂಕೆ : ಡಾ. ಕೃಪಾ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಸರ್ಜನ್ ಆಗಿರುವ ತುಮಕೂರು ಮೂಲದ ಯುವಕನನ್ನು ಪ್ರೇಮಿಸುತ್ತಿದ್ದರು ಎಂದು ತಿಳಿದುಬಂದಿದೆ.
ಆದರೆ, ಕೃಪಾ ಮನವೊಲಿಸಿದ್ದ ಪೋಷಕರು ಎಂಟು ತಿಂಗಳ ಹಿಂದೆ ಡಾ. ದೇವಿಪ್ರಸಾದ್ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಭಾನುವಾರ ಮದರಂಗಿ ಶಾಸ್ತ್ರ ನಡೆದಿತ್ತು, ಸೋಮವಾರ ಬೆಳಗ್ಗೆ ಮದುವೆ ನಡೆಯಬೇಕಾಗಿತ್ತು. ಬೆಂಗಳೂರಿನಿಂದ ಕೃಪಾ ಸ್ನೇಹಿತರು ವಿವಾಹಕ್ಕಾಗಿ ಆಗಮಿಸಿದ್ದರು.
ಕೃಪಾ ಮದುವೆ ದಿನ ಮುಂಜಾನೆ ಹೊತ್ತಿಗೆ ನಾಪತ್ತೆಯಾಗಿದ್ದು, ಸ್ನೇಹಿತೆಯರ ಸಹಾಯದಿಂದ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಕೃಪಾ ಪೋಷಕರಿಗೆ ಆಕೆ ಪ್ರಿಯತಮನೊಂದಿಗೆ ಪರಾರಿಯಾಗಿರುವುದು ಖಾತ್ರಿಯಾಗಿದ್ದು, ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿದ್ದಾರೆ.












Click it and Unblock the Notifications