ಮಂಗ್ಳೂರು: ಯುಟಿ ಖಾದರ್ ಮೇಲೆ ಬಿಜೆಪಿ ಯುವಮೋರ್ಚಾ ಕಿಡಿ
ಮಂಗಳೂರು, ಅಕ್ಟೋಬರ್, 30: "ಸತ್ತವರ ಮನೆಗೆ ಹೋಗೊದೊಂದೇ ಕೆಲಸವಲ್ಲ" ಎಂಬ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಹೇಳಿಕೆಯನ್ನು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ವಿಕಾಸ್ ಪುತ್ತೂರು ಖಂಡಿಸಿದ್ದಾರೆ.
ಹಿಂದುಳಿದ ವರ್ಗಕ್ಕೆ ಸೇರಿದ್ದ ಪ್ರಶಾಂತ್ ಪೂಜಾರಿ ಹತ್ಯೆಯನ್ನು "ಅವರವರೇ ಹೊಡೆದಾಡಿಕೊಂಡು ಸತ್ತಿದ್ದಾರೆ" ಎಂದು ಅತ್ಯಂತ ನಿರ್ಲಕ್ಷ್ಯತೆಯಿಂದ ಹೇಳಿದ್ದಾರೆ. ಸರ್ಕಾರವು ಈ ಪ್ರಕರಣದಲ್ಲಿ ಪೂರ್ವಾಗ್ರಹ ಪೀಡಿತವಾಗಿದೆ. ಅಲ್ಲದೇ ಈ ಪ್ರಕರಣವನ್ನು ತಿರುಚುವ ಅಥವಾ ಮುಚ್ಚಿ ಹಾಕುವ ಸಂಭವಗಳು ಎದ್ದು ಕಾಣುತ್ತಿವೆ ಎಂದು ವಿಕಾಸ್ ಪುತ್ತೂರು ಕಿಡಿಕಾರಿದ್ದಾರೆ.[ಮೂಡಬಿದಿರೆ ಪ್ರಶಾಂತ್ ಪೂಜಾರಿ ಹತ್ಯೆಗೆ ಕಾರಣವೇನು?]

ಪ್ರಶಾಂತ್ ಹತ್ಯೆಯ ಆರೋಪದಲ್ಲಿ ಬಂಧಿತನಾಗಿರುವ ಓರ್ವ ವ್ಯಕ್ತಿಯೊಟ್ಟಿಗೆ ಮೂಡಬಿದ್ರೆಯ ಶಾಸಕ ಹಾಗೂ ಸಚಿವ ಅಭಯಚಂದ್ರ ಜೈನ್ ಭಾವಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಸಚಿವರು ಇದರ ಬಗ್ಗೆ ಸ್ಪಷ್ಟೀಕರಣ ಕೊಡದೆ ಇರುವುದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಪ್ರಶಾಂತ್ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ಸರ್ಕಾರ ನೀಡುವುದಿಲ್ಲ ಎಂದು ಯುಟಿ ಖಾದರ್ ಸ್ಪಷ್ಟಪಡಿಸಿದ್ದಾರೆ. ಪ್ರಶಾಂತ್ ಹತ್ಯೆಯ ವಿಚಾರದಲ್ಲಿ ನ್ಯಾಯ ದೊರೆಯುವಂತೆ ಕಾಣುತ್ತಿಲ್ಲ. ಹಾಗಾಗಿ ಸರ್ಕಾರ ಈ ಕೂಡಲೇ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.[ಮೂಡಬಿದಿರೆ : ಪ್ರಶಾಂತ್ ಕೊಲೆಯ ಪ್ರತ್ಯಕ್ಷದರ್ಶಿ ಸಾವು]
ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಂಡು, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾರ್ಯನಿರತರಾಗಬೇಕು. ಇಲ್ಲದಿದ್ದಲ್ಲಿ ಯುವಮೋರ್ಚಾ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಪ್ರಾರಂಭಿಸಲಿದೆ ಎಂದು ವಿಕಾಸ್ ಪುತ್ತೂರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications