KSRTC Buses Cancel: ಈ ಮಾರ್ಗದಲ್ಲಿ ಶೇ.50ರಷ್ಟು ಪ್ರೀಮಿಯಂ ಬಸ್ ಸಂಚಾರ ರದ್ದು, ಯಾಕೆ?
ಮಂಗಳೂರು, ಜುಲೈ 21: ರಾಜ್ಯದ ಗ್ರಾಮೀಣ ನಗರದಿಂದ ಭಾಗದವರೆಗೂ ಸಂಪರ್ಕ ಕಲ್ಪಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಮಳೆಗಾಲದಲ್ಲಿ ಒಂದಷ್ಟು ಸಂಚಾರ ತೊಡಕುಗಳು ಎದುರಾಗುತ್ತವೆ. ಇದೀಗ ಅನಿವಾರ್ಯ ಕಾರಣದಿಂದಾಗಿ ಒಂದಷ್ಟು ಬಸ್ಗಳನ್ನು ಸಾರಿಗೆ ನಿಗಮ ರದ್ದುಗೊಳಿಸಿದ್ದು, ಪ್ರಯಾಣಿಕರು ಗಮನಿಸಿ ಸಂಚರಿಸುವಂತೆ ಮನವಿ ಮಾಡಿದೆ.
ಭಾರೀ ಮಳೆಗೆ ಗುಡ್ಡ ಕುಸಿತದಂತ ಘಟನೆಗಳು ನಡೆದಿವೆ. ಈಗಾಗಲೇ ಅಂಕೋಲಾ-ಕಾರವಾರ ರಸ್ತೆ ಕುಸಿದು ಸಾಕಷ್ಟು ಸಮಸ್ಯೆ ಆಗಿದೆ. ಇದೇ ಮಳೆಗೆ ಶಿರಾಡಿ- ಸಂಪಾಜೆ ಮಧ್ಯೆ ಘಾಟಿಯಲ್ಲಿ ಭೂ ಕುಸಿತವಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಈ ಮಾರ್ಗದಲ್ಲಿ ಶೇಕಡಾ 50 ರಷ್ಟು ಪ್ರೀಮಿಯಂ ಬಸ್ಗಳ ಸಂಚಾರವನ್ನು ರದ್ದುಗೊಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಮಂಗಳೂರಿನಿಂದ ಬೆಂಗಳೂರಿಗೆ ಎರಡು ಪ್ರಮುಖ ರಸ್ತೆಗಳು ಇವೆ. ಚಾರ್ಮಾಡಿ ಘಾಟಿ ಮತ್ತೊಂದು ಶಿರಾಡಿ ಘಾಟಿ ರಸ್ತೆ. ಮಂಗಳೂರು KSRTC ವಿಭಾಗದಿಂದ ಹೊರಡುವ ರಾಜಹಂಸ, ನಾನ್ ಎಸಿ ಸ್ಲೀಪರ್, ಸಾಮಾನ್ಯ ಸಾರಿಗೆ ಬಸ್ಗಳು ಚಾರ್ಮಾಡಿ ಮಾರ್ಗವಾಗಿಯೇ ಸಂಚರಿಸುತ್ತವೆ.
ಯಾವ ಬಸ್ಗಳು ರದ್ದು, ಏಕೆ?
ಸದ್ಯ KSRTC ಪ್ರೀಮಿಯಂ ಬಸ್ಗಳು ಅಂಬಾರಿ ಉತ್ಸವ, ವೋಲ್ವೋ ಮಲ್ಟಿ ಎಕ್ಸೆಲ್, ಡ್ರೀಮ್ ಕ್ಲಾಸ್, ಸ್ಲೀಪರ್ ಮಾದರಿಯ ಬಸ್ಗಳು ಸಂಚರಿಸಲು ಚಾರ್ಮಾಡಿ ಘಾಟಿ ರಸ್ತೆಯು ಯೋಗ್ಯವಾಗಿಲ್ಲ. ಆದ್ದರಿಂದ ಶಿರಾಡಿ ಮಾರ್ಗವಾಗಿ ಸಕಲೇಶಪುರ ಮೂಲಕ ಬರಬೇಕಿದೆ.
ಈ ಶಿರಾಡಿ ಮಾರ್ಗದಲ್ಲಿ ನಿತ್ಯ ಮಂಗಳೂರು ವಿಭಾಗದಿಂದ 40 ಪ್ರಿಮಿಯಂ ಬಸ್ಗಳು ಹೊರಡುತ್ತಿದ್ದವು. ಆದರೆ ಈಗ ಭಾರೀ ಮಳೆಯಿಂದಾಗಿ, ಚಾರ್ಮಾಡಿಯಲ್ಲಿ ಸಂಚರಿಸದೇ ಒಂದೇ ಮಾರ್ಗದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಈ ಕಾರಣಕ್ಕೆ ಅರ್ಧದಷ್ಟು ಅಂದರೆ 20 ಬಸ್ಗಳು ಮಾತ್ರವೇ ಶಿರಾಡಿ ಮೂಲಕ ಸಂಚರಿಸಲಿವೆ.
ಶಿರಾಡಿ ಘಾಟಿಯಲ್ಲಿ ಬಸ್ 3 ಗಂಟೆ ಸ್ಥಗಿತ
ಮಂಗಳೂರಿನಿಂದ ರಾತ್ರಿ 10ರಿಂದ 11 ಗಂಟೆ ಆಸುಪಾಸಿಗೆ ಹೊರಡುವ ಪ್ರೀಮಿಯಂ ಬಸ್ಗಳು ನಸುಕಿನ ಜಾವ 2ರಿಂದ 3 ಗಂಟೆ ಹೊತ್ತಲ್ಲಿ ಶಿರಾಡಿ ಘಾಟಿ ಪ್ರವೇಶಿಸುತ್ತವೆ. ಆದರೆ ಬೆಳಗ್ಗೆ 06 ಗಂಟೆಗೆ ಘಾಟಿಯಲ್ಲಿ ವಾಹನ ಸಂಚಾರ ಆರಂಭವಾಗುವ ಕಾರಣ ಮೂರು ಗಂಟೆಗಳ ಕಾಲ ಬಸ್ಗಳು ಘಾಟನಲ್ಲಿಯೇ ಉಳಿದು ಬಿಡುತ್ತವೆ. ಪ್ರಯಾಣಿಕರು ಬಸ್ನಲ್ಲಿಯೇ ಕಾಲ ಕಳೆಯ ಬೇಕಾಗುತ್ತದೆ. ನಂತರ ಬೆಳಗ್ಗೆ 6 ಗಂಟೆಗೆ ಒಂದೊಂದೆ ಬಸ್ಗಳು ಬೆಂಗಳೂರಿನತ್ತ ಬರಬೇಕಿದೆ.

ಇನ್ನೂ ರಾತ್ರಿ ಮಂಗಳೂರು ಬಿಟ್ಟ ಪ್ರಯಾಣಿಕರು ಬೆಂಗಳೂರು ತಲುಪುವುದು ಮರುದಿನ ಬೆಳಗ್ಗೆ 11 ಗಂಟೆ ಆಗುತ್ತದೆ. ಹೀಗಿದ್ದಾಗ ಅರ್ಧದಷ್ಟು ಬಸ್ಗಳನ್ನು ಮಾತ್ರವೇ ಕಾರ್ಯಾಚರಣೆಗೆ ಇಳಿಸಲು ಸಾಧ್ಯವಾಗುತ್ತಿದೆ. ಇನ್ನೂ ಪ್ರಯಾಣಿಕರಿಗೆ ಬಸ್ ಮಂಗಳೂರು ಬಿಡುವಾಗಲೇ ಘಾಟಿಯಲ್ಲಿನ ವಿಳಂಬದ ಬಗ್ಗೆ ಹೇಳುತ್ತೇವೆ ಎಂದು ಅವರು ತಿಳಿಸಿದರು.
ಬೇರೆ ಮಾರ್ಗ ಪರಿಶೀಲನೆ: ಖಾಸಗಿ ಬಸ್ ದರ ಏರಿಕೆ ಬಿಸಿ
ಎರಡು ವಾರಗಳಿಂದ ಮಳೆ ಬರುತ್ತಲೇ ಇದೆ. ಪ್ರಮುಖ ರಸ್ತೆಗಳ ಪೈಕಿ ಶಿರಾಡಿ, ಚಾರ್ಮಾಡಿ ಘಾಟ್ಗಳು ಮಾತ್ರವೇ ಸುರಕ್ಷಿತವಾಗಿವೆ. ಇದೀಗ ಅಲ್ಲಿ ಸಹ ಭೂಕುಸಿತವಾಗುತ್ತಿದೆ. ಬೇರೆ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ.
ಮಂಗಳೂರಿನಿಂದ ಹುಲಿಕಲ್ ಘಾಟಿ ಮೂಲಕ ಬರಬೇಕಾದರೆ ಸುಮಾರು 120 ಕೀಲೋ ಮೀಟರ್ ಹೆಚ್ಚು ಸಂಚರಿಸಬೇಕು. ಕುದುರೆಮುಖ, ಕಳಸ ಮಾರ್ಗವಾಗಿ ಬರಬೇಕಾದರೆ 40ಕ್ಕೂ ಹೆಚ್ಚು ಕಿಮೀ ದೂರ ಕ್ರಮಿಸಬೇಕಿದೆ. ಆದರೆ ಈ ರಸ್ತೆಗಳು ಇಕ್ಕಟ್ಟಿನಿಂದ ಕೂಡಿವೆ ಎನ್ನಲಾಗಿದೆ. ಇನ್ನೂ ಈ ಭಾಗದ ಜನರು ಖಾಸಗಿ ಬಸ್ಗಳ ಮೂರು ನಾಲ್ಕು ಪಟ್ಟು ದರ ಏರಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications