ಹಸಿರು ಸಿರಿಯ ನಡುವೆ ಕಂಗೊಳಿಸುತ್ತಿದೆ ಅಡ್ಯಾರ್ ಜಲಪಾತ
ಮಂಗಳೂರು, ಜುಲೈ 24: ಕಡಲನಗರಿ ಮಂಗಳೂರು ಕೇವಲ ಸುಂದರ ಬೀಚ್ಗಳಿಗೆ ಮಾತ್ರ ಪ್ರಸಿದ್ಧಿ ಪಡೆದಿಲ್ಲ . ಇತ್ತೀಚಿನ ದಿನಗಳಲ್ಲಿ ಧುಮ್ಮಿಕ್ಕಿ ಹರಿಯವ ಜಲಪಾತಗಳ ಆಕರ್ಷಣೆಯ ಕೇಂದ್ರವೂ ಆಗುತ್ತಿದೆ. ಮಂಗಳೂರಿನಲ್ಲಿ ಜಲಪಾತವಾ? ಎಂದು ಹುಬ್ಬೆರಿಸಿದರೆ ಅದಕ್ಕೆ ಇಲ್ಲಿದೆ ಉತ್ತರ.
ಮಂಗಳೂರು ಹೊರವಲಯದಲ್ಲಿರುವ ಜಲಪಾತವೊಂದು ಮಳೆಗಾಲದಲ್ಲಿ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಮಳೆಗಾಲದಲ್ಲಿ ಮಾತ್ರ ಧುಮ್ಮಿಕುವ ಈ ಜಲಪಾತವನ್ನು ನೋಡಲು ಜನ ದೂರದ ಊರುಗಳಿಂದ ಬರುತ್ತಾರೆ.
ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತದೆ
ಬೇಸಿಗೆಯಲ್ಲಿ ನೀರಿಲ್ಲದೆ ಬೋಳುಬೋಳಾಗಿ ಕಾಣಿಸುವ ವಳಚ್ಚಿಲ್ ಅಥವಾ ಅಡ್ಯಾರ್ ಜಲಪಾತ, ಮಳೆಗಾಲದಲ್ಲಿ ಜೀವ ತಳೆದು ಮೈದುಂಬಿ ಹರಿಯುತ್ತದೆ. ಹಸಿರು ಪರಿಸರದ ನಡುವೆ ಕಂಗೊಳಿಸುವ ಈ ಜಲಪಾತ ಎತ್ತರದ ಪರ್ವತದಿಂದ ಧುಮುಕಿ, ಬಂಡೆಕಲ್ಲುಗಳ ನಡುವೆ ತನ್ನ ಝುಳು ಝುಳು ಶಬ್ದದಿಂದ ನರ್ತಿಸುತ್ತಾ ಹರಿದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ನಗರದಲ್ಲಿ ಬ್ಯುಸಿ ಕೆಲಸಗಳ ಒತ್ತಡಗಳ ಮಧ್ಯೆ, ನೀರಿನಾಟದ ಆನಂದ ಪಡೆಯಲು ಜನರು ಸಾವಿರಾರು ರೂಪಾಯಿ ಹಣಕೊಟ್ಟು ಆಮ್ಯೂಸ್ಮೆಂಟ್ ಪಾರ್ಕ್ಗಳಿಗೆ ಹೋಗುತ್ತಾರೆ. ಆದರೆ ಮಂಗಳೂರಿನಿಂದ ಕೊಂಚ ದೂರದಲ್ಲೇ ಪ್ರಕೃತಿಯ ಮಡಿಲಲ್ಲಿ ಸುಂದರವಾದ ಜಲಪಾತ ಇದೆ ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ.
ವಾರಾಂತ್ಯ ಲೇಖನ: ತಡಿಯಂಡಮೋಳ್ ಬೆಟ್ಟದ ಮಿಂಚು ನೀಲಕಂಡಿ ಜಲಧಾರೆ!
ಜಲಪಾತ ಎಲ್ಲಿದೆ?
ಸೌಂದರ್ಯದ ಗಣಿಯಾಗಿ, ಬಳಕುವ ಬಳ್ಳಿಯಂತಿರುವ ಈ ಫಾಲ್ಸ್ ಇರೋದು ಮಂಗಳೂರು ಹೊರವಲಯದ ಅಡ್ಯಾರ್ ಎಂಬಲ್ಲಿ. ನಗರದಿಂದ ಕೇವಲ 12 ಕಿ.ಮೀ.ದೂರದಲ್ಲಿ ಬೆಟ್ಟದಿಂದ ಜಿಗಿಯುತ್ತ, ಕಲ್ಲು ಬಂಡೆಗಳ ಮೇಲೆ ನರ್ತಿಸುತ್ತ, ಧುಮ್ಮಿಕ್ಕಿ ಹರಿಯುತ್ತದೆ ಅಡ್ಯಾರ್ ಜಲಪಾತ.
ಮಂಗಳೂರು ನಗರದಿಂದ ಕೊಂಚ ದೂರದಲ್ಲಿರುವ ಅಡ್ಯಾರ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ವಳವಚ್ಚಿಲ್ ನಿಂದ ಎಡಕ್ಕೆ ಸಾಗಿದರೆ ಈ ಫಾಲ್ಸ್ ನ ದರ್ಶನವಾಗುತ್ತದೆ.
ವೀಕೆಂಡ್ ಸ್ಪಾಟ್
ಸುತ್ತಮುತ್ತಲ ಕಾಲೇಜಿನ ವಿದ್ಯಾರ್ಥಿಗಳ ನೆಚ್ಚಿನ ವೀಕೆಂಡ್ ಸ್ಪಾಟ್ ಆಗಿರುವ ಈ ಅಡ್ಯಾರ್ ಜಲಪಾತ, ಅಡ್ಯಾರ್ ಫಾಲ್ಸ್ ಅಂತಾನೇ ಹೆಸರುವಾಸಿ. ಮಳೆಗಾಲದಲ್ಲಿ ಮಾತ್ರ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಬೆಟ್ಟದ ಮೇಲಿಂದ ಹಾಲ್ನೊರೆಯ ಹಾಗೆ ಹರಿದು, ಸುಮಾರು 40 ಅಡಿ ಎತ್ತರದಿಂದ ಧುಮುಕುತ್ತದೆ.
ಈ ನೀರಿನ ಸೊಬಗನ್ನು ನೋಡಲು ಎರಡು ಕಣ್ಣು ಸಾಲದು. ಹೆಚ್ಚಿನ ಜಲಪಾತಗಳು ರಭಸದಿಂದ ಹರಿದು, ಪ್ರಪಾತ ಸೇರುವ ಕಾರಣ ಕೆಲವೊಮ್ಮೆ ಪ್ರವಾಸಿಗರ ಪಾಲಿಗೆ ಅವು ಅಪಾಯಕಾರಿಯಾಗಿರುತ್ತದೆ. ಆದರೆ ವಳಚ್ಚಿಲ್ ಜಲಪಾತದಲ್ಲಿ ನೀರು ರಭಸವಾಗಿ ಹರಿಯದೆ, ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರಿಯುತ್ತದೆ.
ಹಾಗಾಗಿಯೇ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಡ್ಯಾರ್ ಫಾಲ್ಸ್ ಗೆ ಬರುತ್ತಾರೆ.
ಮಳೆಯೊಂದಿಗೆ ಸ್ಟಾರ್ಟ್
ಅಡ್ಯಾರ್ ಜಲಪಾತ ಜೂನ್ನಲ್ಲಿ ಮಳೆಯೊಂದಿಗೆ ತೆರೆದುಕೊಳ್ಳುವ ಜಲಪಾತ. ನವೆಂಬರ್ ವರೆಗೂ ವೈಭವದಿಂದ ಮೇಳೈಸುತ್ತದೆ. ಆದರೆ ಅಡ್ಯಾರ್ ಫಾಲ್ಸ್ ಗೆ ಹೋಗೋಕೆ ಸಮರ್ಪಕವಾದ ದಾರಿ ವ್ಯವಸ್ಥೆ ಇಲ್ಲ. ಇನ್ನೊಂದೆಡೆ ಪೋಲಿಗಳು ಈ ಫಾಲ್ಸ್ ನ್ನು ಜಾಲಿ ಮಾಡೋಕೆ ಬಳಸೋದ್ರಿಂದ ಮದ್ಯದ ಬಾಟಲ್ ಗಳು, ಪ್ಲಾಸ್ಟಿಕ್ ಚೀಲಗಳು ಫಾಲ್ಸ್ ಸೌಂದರ್ಯ ಕ್ಕೆ ಧಕ್ಕೆ ತಂದಿದೆ.
ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತ ಗಮನ ಹರಿಸಬೇಕಾರ ಅವಶ್ಯಕತೆ ಇದೆ. ಒಟ್ಟಿನಲ್ಲಿ ಫಾಲ್ಸ್ ನೋಡೋಕೆ ಪಶ್ಚಿಮ ಘಟ್ಟಗಳ ತಪ್ಪಲಿಗೆ ಹೋಗೋ ಜನ ಮಂಗಳೂರಿಗೆ ಕೂಗಳತೆ ದೂರದಲ್ಲಿರೋ ಫಾಲ್ಸ್ ನ ಸೌಂದರ್ಯ ನೋಡೋ ಅವಕಾಶ ವಂಚಿತರಾಗಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತು ಜಲಪಾತ ಸೌಂದರ್ಯ ಉಳಿಸಿದ್ರೆ, ಕರಾವಳಿಯ ಪ್ರವಾಸಿ ತಾಣಗಳ ಪಟ್ಟಿಗೆ ಅಡ್ಯಾರ್ ಫಾಲ್ಸ್ ಕೂಡ ಸೇರಬಹುದು.