ಮಂಗಳೂರು ಏರ್ಪೋರ್ಟ್ ಬಾಂಬ್ ಪ್ರಕರಣ ಠುಸ್
ಮಂಗಳೂರು, ಸೆ.14: ಬಂದರು ನಗರಿ ಮಂಗಳೂರಿನಲ್ಲಿ ಕಳೆದ ರಾತ್ರಿಯಿಂದ ಭಾನುವಾರ ಸಂಜೆ ತನಕ ಇದ್ದ ಆತಂಕದ ವಾತಾವರಣ ತಿಳಿಯಾಗಿದೆ. ದುಬೈಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬನಿಂದ ವಶಕ್ಕೆ ಪಡೆದ ಸ್ಫೋಟಕ ಪದಾರ್ಥಗಳು ದುಬೈನಲ್ಲಿ ಇಲೆಕ್ಟ್ರಾನಿಕ್ ಅಂಗಡಿಯ ಮಾಲುಗಳಾಗಿದ್ದು, ಬಾಂಬ್ ತಯಾರಿಕಾ ಕಚ್ಚಾವಸ್ತುವಾಗಿರಲಿಲ್ಲ ಎಂಬುದು ಸಾಬೀತಾಗಿದೆ. ಆದರೆ, ನನ್ನ ಮಗನ ಮಾನ ಕಳೆದು ಹೋಯ್ತು ಇದಕ್ಕೆ ಉತ್ತರ ಕೊಡಿ ಎಂದು ಬಂಧಿತ ಖಾದರ್ ಅವರ ತಂದೆ ಬೊಬ್ಬಿಡುತ್ತಿದ್ದದ್ದು ಅರಣ್ಯರೋದನವಾಗಿ ಪರಿಣಮಿಸಿತು.
ಕಳೆದ ರಾತ್ರಿ 11.30ಕ್ಕೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಖಾದರ್ ಎಂಬುವವರನ್ನು ಸಿಐಎಸ್ ಎಫ್ ಸಿಬ್ಬಂದಿ ತಡೆದಿದ್ದಾರೆ. ಆಹಾರ ಸಾಮಾಗ್ರಿಗಳಿಂದ ಬ್ಯಾಗ್ ಪರಿಶೀಲಿಸಿದ್ದಾರೆ. ಅದರಲ್ಲಿ ಕೆಲವು ಸಂಶಯಾಸ್ಪದ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ಖಾದರ್ ನನ್ನು ವಿಚಾರಿಸಿದ್ದಾರೆ. [ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ]
ಮೂಲತಃ ಕೇರಳದ ಉಪ್ಪಳ ನಿವಾಸಿಯಾದ ಅಬ್ದುಲ್ ಖಾದರ್ ಇದು ನನ್ನ ಸ್ನೇಹಿತೆಯೊಬ್ಬರು ನೀಡಿದ ವಸ್ತು ಎಂದಿದ್ದಾರೆ. ಅಷ್ಟರಲ್ಲಿ ಈತನ ಸ್ನೇಹಿತೆ ಅಲ್ಲಿಗೆ ಬಂದು ಆಹಾರ ಸಾಮಾಗ್ರಿಗಳಿದ್ದ ಬ್ಯಾಗ್ ನಲ್ಲಿ ಇಲೆಕ್ಟ್ರಾನಿಕ್ ವಸ್ತು(ಟ್ಯಾಬ್) ಇರಿಸಿದ್ದು ನಾನೇ. ಈ ಬಗ್ಗೆ ಖಾದರ್ ಗೆ ಏನು ಗೊತ್ತಿಲ್ಲ.[ಬಾಂಬ್ ತಯಾರಿಕೆ ವೃತ್ತಿ ಹಾಗೂ ಜೀವನಾಧಾರವಾದರೆ]
ಈ ಟ್ಯಾಬ್ ಇಲ್ಲಿ ರಿಪೇರಿ ಮಾಡಲು ಆಗುವುದಿಲ್ಲ, ಇದರ ವಾರೆಂಟಿ ಅವಧಿ ಮುಗಿದಿದೆ, ಬ್ಯಾಟರಿ ಕೂಡಾ ಎಕ್ಸ್ ಪ್ಯಾಂಡ್ ಆಗಿದೆ. ಆಹಾರದ ಸಾಮಾಗ್ರಿಗಳ ಜೊತೆ ಇರಿಸಿದ್ದನ್ನು ಖಾದರ್ ಗೆ ಹೇಳಲು ಮರೆತೆ ಎಂದಿದ್ದಾರೆ. ಅದರೆ, ಖಾದರ್ ರನ್ನು ವಶಕ್ಕೆ ಪಡೆದ ಸಿಐಎಸ್ ಎಫ್ ಪಡೆ ಹಾಗೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಸಂಶಯಾಸ್ಪದ ವಸ್ತುಗಳ ಸತ್ಯಾಸತ್ಯತೆ ತಿಳಿಯಲು ಬೆಂಗಳೂರಿನ ತಜ್ಞರ ಪಡೆಗೆ ಕರೆ ಮಾಡಿದ್ದಾರೆ. ಅಮೇಲೇನಾಯ್ತು? ಮುಂದೆ ಓದಿ. [ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು]

ಖಾದರ್ ಮೇಲೆ ಅನುಮಾನಕ್ಕೆ ಕಾರಣವೇನು?
ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಮತ್ತೆ ಭಯೋತ್ಪಾದನಾ ಚಟುವಟಿಕೆಗಳು ಗರಿಗೆದರಿವೆ ಎಂಬ ಸುದ್ದಿ ಇತ್ತೀಚೆಗೆ ಹೆಚ್ಚಾಗಿತ್ತು. ಅಲ್ಲದೆ, ನಿರಂತರವಾಗಿ ಬಜಪೆ ವಿಮಾನ ನಿಲ್ದಾಣದಲ್ಲಿ ಸ್ಮಗಲಿಂಗ್ ಪ್ರಕರಣಗಳು ಹೆಚ್ಚಾಗಿರುವುದು ಹೆಚ್ಚಿನ ಭದ್ರತಾ ತಪಾಸಣೆಗೆ ನಾಂದಿ ಹಾಡಿದೆ.
*ಮೊಹಮ್ಮದ್ ಅಬ್ದುಲ್ ಖಾದರ್ ಇಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಆಹಾರ ಸಾಮಾಗ್ರಿಗಳಿಂದ ಪ್ಯಾಕ್ ನಲ್ಲಿರಿಸಿದ್ದು ಇನ್ನಷ್ಟು ಅನುಮಾನ ತಂದಿತು.
* ಟ್ಯಾಬ್ ನ ಬ್ಯಾಟರಿ ಲೀಕ್ ಆಗುವ ಹಂತದಲ್ಲಿತ್ತು. ಹೈಡ್ರೋಜನ್ ಪೆರಾಕ್ಸೈಡ್, ಅಮೋನಿಯಂ ನೈಟ್ರೈಟ್ ಕಂಡು ಬಂದಿದ್ದು ಸಂಶಯ ಹೆಚ್ಚಿಸಿದೆ.

ಸಿರಿಯಾ ಉಗ್ರರ ಜೊತೆ ಲಿಂಕ್ ಮಾಡಲಾಯಿತು
ಮೂಲತಃ ಕೇರಳದ ಉಪ್ಪಳ ನಿವಾಸಿಯಾದ ಅಬ್ದುಲ್ ಖಾದರ್ ಕಳೆದ ತಿಂಗಳಷ್ಟೇ ಮದುವೆಯಾಗಿದ್ದು, ದುಬೈನಲ್ಲಿ ಉದ್ಯೋಗಿಯಾಗಿದ್ದಾನೆ. ಇತ್ತೀಚೆಗೆ ರಜೆ ಮೇಲೆ ತನ್ನೂರಿಗೆ ಬಂದಿದ್ದವನು ಸೆ.13ರಂದು ದುಬೈಗೆ ವಾಪಸ್ ತೆರಳುತ್ತಿದ್ದ ಎಂದು ತಿಳಿದು ಬಂದಿದೆ.
ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುವಾದ ಅಮೋನಿಯಂ ನೈಟ್ರೈಟ್ ಸಾಗಾಟ ಮಾಡುತ್ತಿರುವುದು ಇನ್ನಷ್ಟು ಅನುಮಾನ ಹೆಚ್ಚಿಸಿತು. ಮೂಲಗಳ ಪ್ರಕಾರ, ಶಂಕಿತ ಭಯೋತ್ಪಾದಕ ದುಬೈನಿಂದ ಸಿರಿಯಾಕ್ಕೆ ತೆರಳಲು ಯತ್ನಿಸಿದ್ದ.
ಐಎಸ್ಐಎಸ್ ಉಗ್ರರನ್ನು ಸೇರಿಕೊಳ್ಳುವ ಉದ್ದೇಶದಿಂದಲೇ ಈತ ದುಬೈನಿಂದ ಸಿರಿಯಾಕ್ಕೆ ತೆರಳುತ್ತಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂಬ ಸುದ್ದಿ ಹಬ್ಬಿತು. ಆದರೆ, ಈ ಬಗ್ಗೆ ಪೊಲೀಸರಿಂದ ಅಧಿಕೃತ ಹೇಳಿಕೆ ಹೊರಬೀಳಲಿಲ್ಲ.
ಖಾದರ್ ಅವರ ತಂದೆ ಪ್ರತಿಕ್ರಿಯೆ
ನನ್ನ ಮಗ ತಪ್ಪು ದಾರಿ ಹಿಡಿದಿಲ್ಲ. ಅವನು ಯಾವುದೇ ತಪ್ಪು ಮಾಡಿಲ್ಲ. ಇಲ್ಲಿ ಸಿಕ್ಕಿದೆ ಎನ್ನಲಾದ ವಸ್ತುಗಳು ಅವನದ್ದಲ್ಲ. ಉಗ್ರರ ಜೊತೆ ಸಂಪರ್ಕ ಹೊಂದಿದವರೇ ಕಠಿಣ ಶಿಕ್ಷೆ ವಿಧಿಸಲಿ. ಮಾಧ್ಯಮಗಳು ಸತ್ಯಾಸತ್ಯತೆ ಹೊರಬೀಳುವ ಮೊದಲೇ ಅವನನ್ನು ಉಗ್ರ ಎಂದು ಕರೆಯುತ್ತಿರುವುದು ನೋವುಂಟು ಮಾಡುತ್ತಿದೆ. ಅಮಾಯಕ ಮೇಲೆ ಸ್ವಲ್ಪವಾದರೂ ಕರುಣೆಯಿಂದ ಮಾಧ್ಯಮಗಳು ವರ್ತಿಸಲಿ.ಶಂಕಿತ ಉಗ್ರ ಎಂಬ ಹಣೆಪಟ್ಟಿ ಯಾರು ಕಳಚುತ್ತಾರೆ? ಹೋದ ಮಾನ ಯಾರು ತಂದು ಕೊಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಬಾಂಬ್ ನಿಷ್ರ್ರಿಯ ದಳ ಕರೆಸಿದ ಆಯುಕ್ತರು
ಮಂಗಳೂರು ಪೊಲೀಸ್ ಆಯುಕ್ತ ಹಿತೇಂದ್ರ, ಡಿಸಿಪಿ ಡಾ.ಕೆ.ವಿ.ಜಗದೀಶ್, ಪಣಂಬೂರ್ ಎಸಿಪಿ ರವಿಕುಮಾರ್ ಮತ್ತಿತರ ಅಧಿಕಾರಿಗಳು ಕಳೆದ ರಾತ್ರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಸಿಐಎಸ್ ಎಫ್ ಪಡೆದಿಂದ ಮಾಹಿತಿ ಪಡೆದು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮುಂತಾದ ತಜ್ಞರ ತಂಡ ಕರೆಸಲು ನಿರ್ಧರಿಸಿದರು.

ಮಂಗಳೂರಿನಲ್ಲಿ ಕುತೂಹಲ ಗರಿಗೆದರಿತ್ತು
ಮಂಗಳೂರಿನಲ್ಲಿ ಕುತೂಹಲ ಗರಿಗೆದರಿತ್ತು. ಬೆಂಗಳೂರಿನಿಂದ ಬಂದ ತಜ್ಞರ ತಂಡ ಖಾದರ್ ನಿಂದ ವಶಪಡಿಸಿಕೊಂಡ ವಸ್ತುಗಳ ಪರಿಶೀಲನೆ ನಡೆಸಿದರು, ಗಂಟೆಗಟ್ಟಲೇ ಪರಿಶೀಲನೆ ನಡೆಸಿದ ಮೇಲೂ ಇದೆಲ್ಲವೂ ಬಾಂಬ್ ತಯಾರಿಕೆಗೆ ಕಚ್ಚಾವಸ್ತುವಾಗಬಹುದೇ ಹೊರತೂ ಬಾಂಬ್ ಅಲ್ಲ ಎಂದು ತಿಳಿದು ಬಂದಿತು.
ಎಲೆಕ್ಟ್ರಾನಿಕ್ ಸಾಧನವನ್ನು ರಿಪೇರಿ ಮಾಡಲು ತೆಗೆದುಕೊಂಡು ಹೋಗುವ ವಸ್ತುಗಳು ಎಂದು ಖಾದರ್ ನೀಡಿದ್ದ ಹೇಳಿಕೆಗೆ ಬೆಲೆ ಸಿಕ್ಕಿತು. ಅದರೆ, ಇನ್ನೊಂದು ಸುತ್ತಿನ ಪರೀಕ್ಷೆ ನಡೆಸಿ ಯಾವುದೇ ಸ್ಫೋಟಕ ವಸ್ತುಗಳಿಲ್ಲ ಎಂಬುದನ್ನು ಖಚಿತಪಡಿಸಕೊಳ್ಳಲಾಯಿತು.

ಮಾಹಿತಿ ಖಚಿತಪಡಿಸಿದ ಡಿಸಿಪಿ ಜಗದೀಶ್
ಬಾಂಬ್ ನಿಷ್ಕ್ರಿಯದಳದವರ ಪರೀಕ್ಷೆ ಮುಕ್ತಾಯದ ನಂತರ ಮಾತನಾಡಿದ ಡಿಸಿಪಿ ಡಾ.ಕೆ.ವಿ.ಜಗದೀಶ್, ಇಲ್ಲಿ ಯಾವುದೇ ಸ್ಫೋಟಕ ಪದಾರ್ಥಗಳಿಲ್ಲ. ಬ್ಯಾಗ್ ನಲ್ಲಿದ್ದ ಇಲೆಕ್ಟ್ರಾನಿಕ್ ಸಾಧನ(ಟ್ಯಾಬ್) ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದು ನಿಜ. ಟ್ಯಾಬ್ ನಲ್ಲಿದ್ದ ಬ್ಯಾಟರಿ ಹಾಳಾಗಿತ್ತು. ಅದರಲ್ಲಿರುವ ರಾಸಾಯನಿಕಗಳು ಶಂಕಿತ ವಸ್ತುಗಳ ಪಟ್ಟಿಯಲ್ಲಿದ್ದರಿಂದ ಬೆಂಗಳೂರಿನಿಂದ ತಜ್ಞರನ್ನು ಕರೆಸಿ ಪರೀಕ್ಷೆ ನಡೆಸಬೇಕಾಯಿತು. ಘಟನಾವಳಿಗಳು ಸಂಶಯಾಸ್ಪದವಾಗಿದ್ದರಿಂದ ಖಾದರ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾಯಿತು ಎಂದರು

ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್
ಈ ಪ್ರಕರಣದ ನಂತರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಪ್ರಯಾಣಿಕರನ್ನು ತೀವ್ರವಾಗಿ ತಪಾಸಣೆಗೊಳಪಡಿಸಲಾಗಿತ್ತು. ಸದ್ಯ ಖಾದರ್ ಅವರನ್ನು ವಿಮಾನ ನಿಲ್ದಾಣದ ಕೊಠಡಿಯೊಂದರಲ್ಲೇ ವಿಚಾರಣೆ ನಡೆಸಲಾಗಿದ್ದು, ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಮಂಗಳೂರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications