ಕುದ್ರೋಳಿಯಲ್ಲಿ ಮಂಗಳೂರು ದಸರಾ, ಸಿಎಂಗೆ ಆಹ್ವಾನ
ಮಂಗಳೂರು, ಸೆ.20: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಂದ ಈ ಬಾರಿಯ ಮಂಗಳೂರು ದಸರಾ-2014ರ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 5ರ ತನಕ ವಿಜೃಂಭಣೆಯಿಂದ ನಡೆಯಲಿದೆ. ನವರಾತ್ರಿ ಮಹೋತ್ಸವ ಸಮಾರಂಭವನ್ನು ಸೆ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸದಸ್ಯ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣ ರೂವಾರಿ ಕೇಂದ್ರ ಸರಕಾರದ ಮಾಜಿ ಸಚಿವರಾದ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಸೆ.25ರಂದು ಬೆಳಗ್ಗೆ 11:15ಗಂಟೆಗೆ ಅತ್ಯಂತ ಕಲಾತ್ಮಕ ಹಾಗೂ ಮನಮೋಹಕ ಸ್ವರ್ಣಮಯ ವರ್ಣದ ಶೈಲಿಯಲ್ಲಿ ವಿನ್ಯಾಸಗೊಳಿಸಿದ ವಿಶೇಷ ಮಂಟಪಗಳಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ಏಕಕಾಲದಲ್ಲಿ ಧಾರ್ಮಿಕ ಪೂಜಾ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗುವುದು.

ಸೆ.27ರಂದು ಸಂಜೆ 6:30ಗಂಟೆಗೆ 2014ರ ಮಂಗಳೂರು ದಸರಾ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಜನಾರ್ದನ ಪೂಜಾರಿ ವಹಿಸಲಿದ್ದಾರೆ. ಸೆ.25ರಿಂದ ಅ.3ರವರೆಗೆ ಪ್ರತಿದಿನ ಕುದ್ರೋಳಿ ಸಂತೋಷಿ ಕಲಾ ಮಂಟಪದಲ್ಲಿ ನಾಡಿನ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್4ರಂದು ಸಂಜೆ 4ಗಂಟೆಗೆ ಕ್ಷೇತ್ರದಿಂದ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳನ್ನೊಳಗೊಂಡ '2014 ಮಂಗಳೂರು ದಸರಾ'ದ ಬೃಹತ್ ಮೆರವಣಿಗೆ ಕ್ಷೇತ್ರದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆಯಲಿದೆ ಎಂದು ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ. ಈ ಬಾರಿ ವಿಶೇಷವಾಗಿ ಕೇರಳದ ಜಾನಪದ ಅಕಾಡಮಿಯ ತೈಯಂ, ಕಥಕ್ಕಳಿ ಮೊದಲಾದ ತಂಡಗಳು ಭಾಗವಹಿಸಲಿವೆ ಎಂದು ಹರಿಕೃಷ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಬಿ.ಕೆ.ತಾರಾನಾಥ, ರವಿಶಂಕರ ಮಿಜಾರ್, ಮಹೇಶ್ಚಂದ್ರ, ಸದಸ್ಯರಾದ ದೇವೇಂದ್ರ ಪೂಜಾರಿ, ಲೋಹಿತ್ ಪೂಜಾರಿ, ಡಾ.ಬಿ.ಜಿ.ಸುವರ್ಣ, ಎಂ.ಶೇಖರ ಪೂಜಾರಿ, ಎನ್.ಹರಿಶ್ಚಂದ್ರ, ಡಿ.ಡಿ.ಕಟ್ಟೆಮಾರ್, ಲೀಲಾಕ್ಷ ಕರ್ಕೇರಾ, ದೇವದಾಸ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications