Heart Attack: ದೇವಸ್ಥಾನದ ಆವರಣದಲ್ಲಿಯೇ ಹೃದಯಾಘಾತ: ವ್ಯಕ್ತಿ ಸಾವು
ಮಂಗಳೂರು, ಸೆಪ್ಟೆಂಬರ್ 10: ದೇವಸ್ಥಾನದ ಆವರಣದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಭಕ್ತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನಲ್ಲಿ ನಡೆದಿದೆ. ಕೃಷ್ಣ ಭಟ್(52) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮುಲ್ಕಿಯ ನಿವಾಸಿಯಾಗಿರುವ ಕೃಷ್ಣ ಭಟ್ ಇಂದು ಸುರತ್ಕಲ್ನ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದಲ್ಲಿ ಪ್ರದಕ್ಷಿಣೆ ಬರುತ್ತಿದ್ದ ವೇಳೆ ಕೃಷ್ಣ ಭಟ್ ಅವರಿಗೆ ಏಕಾಏಕಿ ಹೃದಯಾಘಾತವಾಗಿದ್ದು, ದೇವಸ್ಥಾನದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃಷ್ಣ ಭಟ್ ನಡೆದುಕೊಂಡು ಬರುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವ ದೃಶ್ಯ ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಂಜನಾದ್ರಿ ಬೆಟ್ಟ ಹತ್ತಿ ಇಳಿಯುವ ವೇಳೆ ಹೃದಯಾಘಾತ: ವ್ಯಕ್ತಿ ಸಾವು
ಗಂಗಾವತಿ ತಾಲೂಕಿನ ಇತಿಹಾಸ ಪ್ರಸಿದ್ದ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟ ಹತ್ತಿ ಇಳಿಯುವ ಸಂದರ್ಭ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಿನ್ನೆ ಸಂಜೆ ಸೆಪ್ಟೆಂಬರ್(09) ನಡೆದಿದೆ. ಕೊಟ್ರೇಶ ಕಲಘಟಗಿ(40) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಕೊಟ್ರೇಶ ಕಲಘಟಗಿ ತಮ್ಮ ಕುಟುಂಬ ಸಮೇತ ಅಂಜನಾದ್ರಿ ದರ್ಶನಕ್ಕೆ ಆಗಮಿಸಿದ್ದರು. ಬೆಟ್ಟ ಹತ್ತಿ ಪೂಜೆ ಸಲ್ಲಿಸಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಹೃದಯದಲ್ಲಿ ನೋವು ಕಾಣಿಸಿಕೊಂಡಿದ್ದು, ಆನೆಗೊಂದಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಅಂಜನಾದ್ರಿಗೆ ಆಗಮಿಸುವವರು ಬೆಟ್ಟ ಹತ್ತುವ ಇಳಿಯುವ ಸಂದರ್ಭದಲ್ಲಿ ಈಗಾಗಲೇ ಅನೇಕರು ಸೂಕ್ತ ಸಮಯದಲ್ಲಿ ಕೂಡಲೇ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ ಪ್ರಕರಣಗಳು ಜರುಗಿದ್ದು, ಅಂಜನಾದ್ರಿ ಬಳಿ ಆಸ್ಪತ್ರೆ ಆರಂಭಿಸುವಂತೆ ಒತ್ತಾಯವಿದ್ದರೂ ಸರ್ಕಾರ ನಿರ್ಲಕ್ಷ್ಯದ ಪರಿಣಾಮ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಕೊಟ್ರೇಶ ಕಲಘಟಗಿ ಸಾವಿನ ಪ್ರಕರಣ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.












Click it and Unblock the Notifications