ಪಡೀಲ್ ಬಳಿ ರೈಲು ಹಳಿಯ ಮೇಲೆ ಕುಸಿದ ಗುಡ್ಡ ಹಲವು ರೈಲು ಸಂಚಾರ ರದ್ದು
ಮಂಗಳೂರು ಆಗಸ್ಟ್ 23: ಮಂಗಳೂರು- ಮುಂಬೈ ಮಧ್ಯೆ ಸಂಪರ್ಕ ಕಲ್ಪಿಸುವ ಕೊಂಕಣ ರೈಲು ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಮಂಗಳೂರು ಹೊರವಲಯದ ಪಡೀಲ್ - ಕುಲಶೇಖರ ನಡುವೆ ರೈಲು ಹಳಿಯ ಮೇಲೆ ಸುರಿಯುತ್ತಿರುವ ಭಾರೀ ಮಳೆಗೆ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳನ್ನು ರದ್ದು ಗೊಳಿಸಲಾಗಿದೆ.
ಮೈಸೂರು- ಮಂಗಳೂರು -ಕಾರವಾರ ಮಧ್ಯೆ ಓಡಲಿದೆ ನೂತನ ರೈಲು
ಎರಡು ದಿನಗಳಿಂದ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪಡೀಲ್ - ಕುಲಶೇಖರ ನಡುವೆ ಗುಡ್ಡ ಕುಸಿದು ಹಳಿಯ ಮೇಲೆ ಬಿದ್ದಿದೆ. ಹಳಿಯ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸಲಾಯಿತಾದರೂ ಮಣ್ಣು ನಿರಂತರವಾಗಿ ಕುಸಿದು ಬೀಳುತ್ತಿರುವ ಕಾರಣ ಮಂಗಳೂರಿನಿಂದ ಗೋವಾ-ಮುಂಬೈ ಮಧ್ಯೆ ಸಂಚರಿಸುವ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಜೆಸಿಬಿ ಯಂತ್ರ ಬಳಸಿ, ರೈಲು ಹಳಿಯ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಶನಿವಾರ ಮುಂಜಾನೆವರೆಗೆ ಮಣ್ಣು ತೆರವುಗೊಳಿಸುವ ಕಾರ್ಯ ಪೂರ್ಣಗೊಳ್ಳಲಿದ್ದು, ರೈಲು ಸಂಚಾರ ಸುಗಮಗೊಳ್ಳಲಿದೆ ಎಂದು ಹೇಳಲಾಗಿದೆ.