ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಟಲಿ ತೀರ್ಥಕ್ಕೂ ನೀರಿಲ್ಲ !
ಮಂಗಳೂರು, ಏಪ್ರಿಲ್ 22 : ವರ್ಷದ ಹೆಚ್ಚಿನ ಅವಧಿಯಲ್ಲಿ ಮಳೆ ಬೀಳುವ ಖ್ಯಾತಿ ಹೊಂದಿರುವ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೀರಿನ ಬರ ಎದುರಾಗಿದೆ. ದೇವಸ್ಥಾನದ ಬಾವಿಯಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ಬುಧವಾರದಿಂದ ದೇಗುಲದಲ್ಲಿ ಭಕ್ತರಿಗೆ ತೀರ್ಥ ಬಾಟಲಿ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.
ದೇಗುಲದಲ್ಲಿ ದೇವರಿಗೆ ಅಭಿಷೇಕ ಸಲ್ಲಿಸಲು ಹಾಗೂ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲು ದೇವಸ್ಥಾನದ ಬಾವಿಯ ನೀರನ್ನು ಬಳಸಲಾಗುತ್ತದೆ. ಬಾವಿಯ ನೀರು ಹೊರತುಪಡಿಸಿ ಬೇರೆ ಯಾವುದೇ ನೀರನ್ನು ಇದಕ್ಕೆ ಬಳಸುವಂತಿಲ್ಲ. ದೇವಸ್ಥಾನದ ನಿತ್ಯ ಬಳಕೆಯ ಬಾವಿಯು ಬತ್ತಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. [ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶ್ವಟಿ20 ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?]

ದೇಗುಲದ ಬಾವಿಯಲ್ಲಿ ಈಗ ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು ದೇವರಿಗೆ ಅಭೀಷೇಕ ಮತ್ತು ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಕೈಗೆ ತೀರ್ಥವಾಗಿ ನೀಡಲು ಮಾತ್ರ ಬಳಸಲಾಗುತ್ತದೆ. ಬಾಟಲಿಯಲ್ಲಿ ತೀರ್ಥ ಕೊಡುವುದನ್ನು ಸ್ಥಗಿತಗೊಳಿಸಲಾಗಿದೆ. [ಕುಕ್ಕೇ ಸುಪ್ರಭಾತ ವಿವಾದ: ಕುಕ್ಕೇ ಶ್ರೀಗಳಿಗೆ ಕಿರಿಕಿರಿಯಾಯಿತೇ?]
2000 ಬಾಟಲಿಗೆ ನಿತ್ಯ ಬೇಡಿಕೆ : ಕ್ಷೇತ್ರದಲ್ಲಿ ದಿನವೊಂದಕ್ಕೆ ಸುಮಾರು 2000 ತೀರ್ಥದ ಬಾಟಲಿ ವಿತರಣೆಯಾಗುತ್ತದೆ. ಪರ್ವ ದಿನಗಳಲ್ಲಿ 3000 ರಿಂದ 4000 ತನಕವೂ ತೀರ್ಥ ಬಾಟಲಿಗಳು ವಿತರಣೆಯಾಗುತ್ತಿವೆ. ಎರಡು ವರ್ಷಗಳ ಹಿಂದೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ತೀರ್ಥ ಬಾಟಲಿ ಸ್ಥಗಿತಗೊಳಿಸಿದ ಮೂರು ದಿನಗಳಲ್ಲಿಯೇ ಉತ್ತಮ ಮಳೆಯಾಗಿದ್ದರಿಂದ ಮತ್ತೆ ತೀರ್ಥದ ಬಾಟಲಿ ವಿತರಣೆ ಆರಂಭವಾಗಿತ್ತು. [ಈ ಮಳೆಗಾಲದಲ್ಲೂ ಕುಕ್ಕೆ ಕ್ಷೇತ್ರ ಸುದ್ದಿಯಾಗುವುದು ಖಂಡಿತ]
ಪೂಜೆ ಮಾಡಿದ ದಿನ ಮಳೆ ಬಂದಿತ್ತು : ಕಳೆದ ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಪರ್ಜನ್ಯ ಜಪ ಮಾಡಲಾಗಿತ್ತು. ವಿಶೇಷ ಎಂದರೆ ಅದೇ ದಿನ ರಾತ್ರಿ ಸಾಧಾರಣ ಮಳೆಯಾಗಿತ್ತು. ಪ್ರಸ್ತುತ ಬಾವಿಯಲ್ಲಿ ನೀರಿನ ಅಭಾವ ಉಂಟಾಗಿರುವುದರಿಂದ ಬಾಟಲಿ ತೀರ್ಥ ವಿತರಣೆ ಸ್ಥಗಿತಗೊಳಿಸಲಾಗಿದೆ. ಭಕ್ತರು ಸಹಕಾರ ನೀಡುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.












Click it and Unblock the Notifications