ಯಾರಾಗಲಿದ್ದಾರೆ ಕೆಪಿಸಿಸಿ ಅಧ್ಯಕ್ಷ? ಈಶ್ವರಪ್ಪ ನುಡಿದರು ಭವಿಷ್ಯ
ಮಂಗಳೂರು, ಡಿಸೆಂಬರ್ 27: ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಯಾರಾಗಲಿದ್ದಾರೆ ಎಂಬುದು ಸದ್ಯಕ್ಕೆ ರಾಜ್ಯದಲ್ಲಿನ ಕುತೂಹಲಗಳಲ್ಲಿ ಒಂದು, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಂಬಿ.ಪಾಟೀಲ್ ಇನ್ನೂ ಹಲವು ಹೆಸರುಗಳು ಪಟ್ಟಿಯಲ್ಲಿವೆ.
ಕೆಪಿಸಿಸಿ ಅಧ್ಯಕ್ಷ ಯಾರಾಗಲಿದ್ದಾರೆ ಎಂದು ಸ್ವತಃ ಕಾಂಗ್ರೆಸ್ ಮುಖಂಡರೇ ಗೊಂದಲ್ಲಿದ್ದಾಗ, ಬಿಜೆಪಿ ನಾಯಕ, ಸಚಿವ ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷರಾಗಿ ಯಾರು ಆಯ್ಕೆ ಆಗುತ್ತಾರೆಂದು ಭವಿಷ್ಯ ನುಡಿದಿದ್ದಾರೆ.
'ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸ್ವತಃ ಸಿದ್ದರಾಮಯ್ಯ ಕೈಯಲ್ಲೂ ಆಗುವುದಿಲ್ಲ' ಎಂದು ಈಶ್ವರಪ್ಪ ಹೇಳಿದ್ದಾರೆ. ಕಾಂಗ್ರೆಸ್ ಒಳಜಗಳ ಮತ್ತು ಕೆಪಿಸಿಸಿ ಅಧ್ಯಕ್ಷ ಗಾಧಿಗೆ ಸಂಭಂದಿಸಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

ರಾಮನಗರದಲ್ಲಿ ಡಿ.ಕೆ.ಶಿವಕುಮಾರ್ ಏಸು ಕ್ರಿಸ್ತನ ದೊಡ್ಡ ಪ್ರತಿಮೆಗೆ ಶಿಲಾನ್ಯಾಸ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಕಾಂಗ್ರೆಸ್ ತನ್ನ ಮತಬ್ಯಾಂಕ್ಗಾಗಿ ಧರ್ಮಗಳನ್ನು ದೂರ ಮಾಡುತ್ತಿದೆ. ಗೋ ರಕ್ಷಕರ ಮೇಲೆ ಕೇಸುಗಳನ್ನು ಹಾಕಿದೆ. ಹಿಂದೂ ಮುಸಲ್ಮಾನರನ್ನು ದೂರ ಮಾಡಿದೆ. ಲಿಂಗಾಯತರನ್ನು ದೂರ ಮಾಡಿದೆ, ಧರ್ಮ ಒಡೆದಿದ್ದರಿಂದಲೇ ಸಿದ್ದರಾಮಯ್ಯ ಸರ್ಕಾರ ಕೆಳಗೆ ಬಿದ್ದಿದೆ ಆದರೂ ಅವರಿಗೆ ಬುದ್ಧಿ ಬಂದಿಲ್ಲ' ಎಂದರು.
'ಡಿ.ಕೆ.ಶಿವಕುಮಾರ್, ಕೆಂಪೇಗೌಡರ ಅನುಯಾಯಿ ಎನ್ನುತ್ತಾರೆ, ನಿರ್ಮಲಾನಂದ ಸ್ವಾಮಿಗಳ ಭಕ್ತ ಎನ್ನುತ್ತಾರೆ, ಏಸುವಿನ ಪ್ರತಿಮೆಗೆ ಮಾಲೆ ಹಾಕಬೇಕಾದರೆ ಅವರಿಗೆ ಕೆಂಪೇಗೌಡರು ನೆನಪು ಬರಲಿಲ್ಲವೇ, ಸ್ವಾಮೀಜಿಗಳ ನೆನಪು ಯಾಕೆ ಆಗಲಿಲ್ಲ ಎಂದು ಈಶ್ವರಪ್ಪ' ಹೇಳಿದರು.
ಡಿ.ಕೆ.ಶಿವಕುಮಾರ್ ಏಸುವಿನ ಪ್ರತಿಮೆಗೆ ಶಿಲಾನ್ಯಾಸ ಮಾಡಿರುವ ಬಗ್ಗೆ ಟ್ವೀಟ್ ಸಹ ಮಾಡಿರುವ ಈಶ್ವರಪ್ಪ, 'ರಾಮ ಮಂದಿರ ಕಟ್ಟಲು ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ಏಸುವಿನ ಪ್ರತಿಮೆ ಮಾಲಾರ್ಪಣೆ ಮಾಡುತ್ತದೆ' ಎಂದಿದ್ದಾರೆ.












Click it and Unblock the Notifications