ನಟೋರಿಯಸ್ ರೌಡಿ ಕಾಳಿಯಾ ರಫೀಕ್ ಕೊಲೆ ಹಿಂದಿನ ಮರ್ಮವೇನು ?
ಮಂಗಳೂರು, ಫೆಬ್ರವರಿ 16: ಕಾಸರಗೋಡು ಉಪ್ಪಳ ನಿವಾಸಿ ನಟೋರಿಯಸ್ ರೌಡಿ ಕಾಳಿಯಾ ರಫೀಕ್ ನನ್ನು ದುಷ್ಕರ್ಮಿಗಳ ಗುಂಪೊಂದು ಮಂಗಳವಾರ ಮಧ್ಯರಾತ್ರಿ ಸಿನಿಮೀಯ ಶೈಲಿಯಲ್ಲಿ ಕೊಲೆ ಮಾಡಿತ್ತು. ಅಟ್ಟಾಡಿಸಿ ಗುಂಡಿಟ್ಟು ತಲಾವರಿನಲ್ಲಿ ಕೊಂದು ಪರಾರಿಯಾಗಿತ್ತು.
ಆ ತಂಡ ಹೀಗೇಕೆ ಮಾಡಿತು? ಎಂಬುದಕ್ಕೆ ಕಾರಣವಿನ್ನು ತಿಳಿದು ಬಂದಿಲ್ಲ, ಅದರೆ ಆ ತಂಡದಲ್ಲಿ ನೂರ್ ಅಲಿ, ಕಸಾಯಿ ಅಲಿ, ರೌಫ್, ಜಿಯಾ ಸೇರಿ ಒಟ್ಟು ಐವರು ನಟೋರಿಯಸ್ ರೌಡಿಗಳು ಇದ್ದರೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ್ದ ಎಸಿಪಿ ಶೃತಿ, ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ, ಮಂಗಳೂರು ಸಿಸಿಬಿ ಪೊಲೀಸರು ಮತ್ತು ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು. ಹಳೇ ವೈಷಮ್ಯವೇ ಕೊಲೆಗೆ ಕಾರಣ ಎಂದು ಹೇಳಿದ್ದರು.[ಸಿನಿಮೀಯ ಶೈಲಿಯಲ್ಲಿ ರೌಡಿ ಕಾಲಿಯಾ ರಫೀಕ್ ಕೊಲೆ]
ಪೆಟ್ರೋಲ್ ಬಂಕಿನ ಹಿಂದೆ ಮುಂದೆ ಅಟ್ಟಾಡಿಸಿಕೊಂಡು ಕೊಲ್ಲುವಷ್ಟರ ಮಟ್ಟಿಗೆ ಬೆಳೆದಿದ್ದನಾ ರಫೀಕ್, ಪೊಲೀಸರ ಬಂಧಿಯಾಗಿ ಶಿಕ್ಷೆ ಅನುಭವಿಸಿ ಹೊರಬಂದಿದ್ದ ಇವನ ಕೊಲೆ ಹಿಂದಿನ ಕಥೆಯೇನು ? ಇಲ್ಲಿದೆ ಒಂದಷ್ಟು ಮಾಹಿತಿ

ಹಫ್ತಾಕ್ಕಾಗಿ ಬೇಡಿಕೆಯಿಟ್ಟಿದ್ದ
ದರೋಡೆ, ಕೊಲೆ, ಹಲ್ಲೆ, ಸುಲಿಗೆ, ಹಫ್ತಾ ವಸೂಲಿಯನ್ನೇ ಕಸುಬನ್ನಾಗಿಸಿದ ಕಾಳಿಯ ಅಂತಾರಾಜ್ಯ ಕ್ರಿಮಿನಲ್ ಆಗಿದ್ದು , ಉಪ್ಪಳವನ್ನು ತನ್ನ ಅಡ್ಡೆಯನ್ನಾಗಿಸಿದ್ದ. ಈತನ ವಿರುದ್ದ ಸುಮಾರು 45ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು ,ಗೂಂಡಾ ಕಾಯ್ದೆಯಡಿ ಕಳೆದ ವರ್ಷ ಕಾಳಿಯ ನನ್ನು ಬಂಧಿಸಲಾಗಿತ್ತು. ಕೆಲ ತಿಂಗಳ ಹಿಂದೆಯಷ್ಟೇ ಈತ ಜೈಲಿನಿಂದ ಬಿಡುಗಡೆಗೊಂಡಿದ್ದ. ಮೂರು ದಿನಗಳ ಹಿಂದಷ್ಟೇ ಉಪ್ಪಳದ ವೈದ್ಯರೋಬ್ಬರಿಗೆ ಹಫ್ತಾಕ್ಕಾಗಿ ಬೇಡಿಕೆಯನ್ನಿಟ್ಟಿದ್ದ ಎನ್ನಲಾಗಿದೆ.

ಮತ್ತೆ ಬಂಧನ
2011ರ ಮಾರ್ಚ್ 6ರಂದು ಚಿಕ್ಕಮಗಳೂರು ಜೈಲಿನಿಂದ ಪೊಲೀಸರು ಕಾಳಿಯನನ್ನು ಕೇರಳ ಕೋರ್ಟ್ ಗೆ ಹಾಜರುಪಡಿಸಲು ಕರೆತರುತ್ತಿದ್ದರು. ಈ ವೇಳೆ ಸಂಜೆ ಮಂಗಳೂರಿನ ಲಾಲ್ಬಾಗ್ ಕೆಎಸ್ಆರ್ ಟಿಸಿ ನಿಲ್ದಾಣ ಬಳಿಯಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಳಿಯ ರಫೀಕ್ ಪರಾರಿಯಾಗಿದ್ದ. ಮಾರ್ಚ್ 7ರಂದು ಕಾಳಿಯ ಸಂಚರಿಸುತ್ತಿದ್ದ ಸ್ಕಾರ್ಪಿಯೋ ವಾಹನ ಕುಂಬ್ಳೆ ಬಳಿ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಕಾಳಿಯ ಗಾಯಗೊಂಡಿದ್ದು , ಮರುದಿನ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಕದ್ರಿ ಪೊಲೀಸರು ಕಾಳಿಯ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಜೈಲಿನಿಂದ ಬಿಡುಗಡೆಗೊಂಡ ಕಾಳಿಯ ಹಳೆಯ ದ್ವೇಷದ ಹಿನ್ನಲೆಯಲ್ಲಿ ಉಪ್ಪಳ ನಿವಾಸಿ ಯುವಕನನ್ನು ಅಪಹರಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದ.

ಹತ್ಯೆಯ ಸುಳಿವು !
ಕಾಳಿಯ ರಫೀಕ್ ಸಾಯುವ ಕೆಲ ದಿನಗಳ ಹಿಂದಷ್ಟೇ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತನ್ನ ಹತ್ಯೆಯ ಸುಳಿವು ನೀಡಿದ್ದ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ ಸಂದರ್ಶನ ವೇಳೆ ತನಿಕೆ ಜೀವ ಭಯವಿದೆ ಎಂದು ಕೂಡ ಉಲ್ಲೇಖಿಸಿದ್ದಾನೆ. ಇದಲ್ಲದೆ ಹಂತಕ ಪಡೆಯೊಂದು ತನ್ನ ಹತ್ಯೆಗೆ ಸ್ಕೆಚ್ ರೂಪಿಸಿದೆ ಎಂಬ ಬಗ್ಗೆ ಹೇಳಿದ್ದ. ಅಲ್ಲದೆ ಈ ಬಗ್ಗೆ ಸಂಬಂಧ ಪಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಅವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಸಂದರ್ಶನ ವೇಳೆ ದೂರಿದ್ದಾನೆ ಎನ್ನಲಾಗಿದೆ.

7 ದಿನಗಳ ಹಿಂದೆಯೇ ಕೃತ್ಯಕ್ಕೆ ಸಂಚು
ಕೋಟೆಕಾರು ಸಮೀಪದ ಮದುವೆ ಸಭಾಂಗಣದ ಮುಂಭಾಗದಲ್ಲಿಯೇ ಕಳೆದ 7 ದಿನಗಳ ಹಿಂದೆಯೇ ಕೃತ್ಯಕ್ಕೆ ಬಳಸಲಾಗಿದ್ದ ಲಾರಿಯನ್ನು ತಂದು ಸಿಲ್ಲಿಸಲಾಗಿತ್ತು. ಪೂರ್ವ ಯೋಜಿತವಾಗಿ ಕೊಲೆಗೆ ಸಂಚು ರೂಪಿಸಿದ್ದರೂ ಏಳು ದಿನಗಳಲ್ಲಿ ವಿಫಲವಾಗಿತ್ತು. ಕೇರಳದಲ್ಲಿ ಕಳವು ಗೈದ ಲಾರಿಯನ್ನು ತಂದು ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಮಂಗಳವಾರ ತಡರಾತ್ರಿ ಕಾಳಿಯ ಮಂಗಳೂರಿಗೆ ತೆರಳುವುದರ ಖಚಿತ ಮಾಹಿತಿ ಪಡೆದ ದುಷ್ಕರ್ಮಿಗಳ ತಂಡ ಹಿಂಬಾಲಿಸಿ ಲಾರಿ ಮೂಲಕ ಅಪಘಾತ ನಡೆಸಿ ಹತ್ಯೆ ನಡೆಸಿಯೇ ಬಿಟ್ಟಿತ್ತು.

ಕೆಟ್ಟ ಸಿಸಿಟಿವಿ ಆರೋಪಿಗಳು ಬಚಾವ್
ಕೋಟೆಕಾರಿನ ಪೆಟ್ರೋಲ್ ಪಂಪ್ ನಲ್ಲಿರುವ ಸಿಸಿಟಿವಿ ಕೆಲ ದಿನಗಳ ಹಿಂದೆಯೇ ಕೆಟ್ಟು ಹೋಗಿದ್ದರ ಪರಿಣಾಮ ಆರೋಪಿಗಳ ಸುಳಿವು ಸಿಗದಂತಾಗಿದೆ. ಈ ನಡುವೆ ಕಾಳಿಯ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಉಪ್ಪಳದಲ್ಲಿ ವಿರೋಧಿಗಳು ಬಾಣ ಪಟಾಕಿ ಸಿಡಿಸಿ ಸಂಭ್ರಮಿಸಿದ ಕ್ಷಣವೂ ನಡೆಯಿತು.












Click it and Unblock the Notifications