ಮಲಯಾಳಂ ಭಾಷೆ ಕಡ್ಡಾಯದ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ
ಮಂಗಳೂರು, ಜೂನ್ 8: ಕೇರಳ ಸರಕಾರದ ಮಲಯಾಳಂ ಭಾಷೆ ಕಡ್ಡಾಯ ಸುಗ್ರೀವಾಜ್ಞೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಹಾಗೂ ವಾಟಾಳ್ ನಾಗರಾಜ್ ತಂಡದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. "ಕಾಸರಗೋಡು ಚಲೋ" ಹೆಸರಿನಲ್ಲಿ ಕರ್ನಾಟಕ-ಕೇರಳದ ಗಡಿಯನ್ನು ಬಲವಂತವಾಗಿ ಮುಚ್ಚಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ತಲಪಾಡಿಯಲ್ಲಿ ವಾಹನಗಳನ್ನು ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿದರು.ಈ ವೇಳೆ ಪೊಲೀಸರು ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ ರಾ ಗೋವಿಂದ್, ಪ್ರವೀಣ್ ಶೆಟ್ಟಿ ಮತ್ತು ಇತರರನ್ನು ಬಂಧಿಸಿದ್ದಾರೆ.

ಇದಕ್ಕೂ ಮೊದಲು 'ಕಾಸರಗೋಡು ಚಲೋ' ಕಾರ್ಯಕ್ರಮಕ್ಕೆ ಉಡುಪಿಯಲ್ಲಿ ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಯ ಕ್ಲಾಕ್ ಟವರ್ ಎದುರು ಚಾಲನೆ ನೀಡಿದರು.

"ಕನ್ನಡ ಶಾಲೆಗಳು ಹೆಚ್ಚಾಗಿರುವ ಕಾಸರಗೋಡಿನಲ್ಲಿ ಮಲಯಾಳಂ ಭಾಷೆ ಕಡ್ಡಾಯದಿಂದ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಮೇಲೆ ಹೊಡೆತ ಬೀಳಲಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಂ ಕಡ್ಡಾಯ ಗೊಳಿಸಿರುವುದರಿಂದ ಕನ್ನಡ ಭಾಷೆ ನಶಿಸಿ ಹೋಗುತ್ತದೆ. ಆ ರೀತಿ ಆಗದಂತೆ ರಾಜ್ಯ ನಾಯಕರು ಎಚ್ಚರ ವಹಿಸಬೇಕಾಗಿದೆ. ಗಡಿನಾಡಿನಲ್ಲಿ ಕನ್ನಡಗರಿಗೆ ಆಗುತ್ತಿರುವ ತೊಂದರೆಗಳನ್ನು ಸರಕಾರ ಕೂಡಲೇ ಸರಿಪಡಿಸಬೇಕು. ರಾಜ್ಯ ರಾಜ್ಯಗಳ ಮಧ್ಯೆ ಉತ್ತಮ ಸಂಬಂಧ ಮೂಡಿ ಗಡಿ ಪ್ರದೇಶಗಳ ಅಭಿವೃದ್ಧಿ ಆಗಬೇಕು," ಎಂದು ಸ್ವಾಮೀಜಿ ತಿಳಿಸಿದರು.

"ಕಾಸರಗೋಡಿನಲ್ಲಿ ಕನ್ನಡಿಗರ ಮೇಲೆ ನಿರಂತರ ದಾಳಿ ನಡೆಸಲಾಗುತ್ತಿದೆ. ನಮ್ಮನ್ನು ಆಳುವ ಸಂಸದರು, ಶಾಸಕರು ನಿದ್ದೆ ಮಾಡದೆ ಎಚ್ಚೆತ್ತುಕೊಳ್ಳಬೇಕಾಗಿದೆ. ಕಾಸರಗೋಡು ಕರ್ನಾಟಕ್ಕೆ ಸೇರಿಸಬೇಕೆಂಬ ಮಹಾಜನ್ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸಬೇಕು. ಮುಂದೆ ಜೂ.12ರಂದು ರಾಜ್ಯ ಬಂದ್ಗೆ ಕರೆ ನೀಡಲಾಗಿದೆ," ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದರು.












Click it and Unblock the Notifications