ವಿಚಾರಣೆಗಾಗಿ ಡಾನ್ ಬನ್ನಂಜೆ ರಾಜಾ ಕರ್ನಾಟಕಕ್ಕೆ?
ಬೆಂಗಳೂರು, ಫೆ.13: ಅವಿಭಜಿತ ಉಡುಪಿ ಜಿಲ್ಲೆಯ ಬನ್ನಂಜೆ ಗ್ರಾಮದ ಪುಡಿ ರೌಡಿಯಾಗಿದ್ದ ರಾಜೇಂದ್ರ ಅಲಿಯಾಸ್ ರಾಜ ಈಗ ಮೊರೆಕ್ಕೋದಲ್ಲಿ ಬಂಧಿತನಾಗಿರುವ ಕುಖ್ಯಾತ ಭೂಗತ ಪಾತಕಿ. ಭಾರತದಲ್ಲಿ ಅನೇಕ ಪ್ರಕರಣಗಳಲ್ಲಿ ನಂ.1 ಆರೋಪಿಯಾಗಿರುವ ಈತನನ್ನು ಕರೆತಂದು ವಿಚಾರಣೆ ನಡೆಸಲು ಕರ್ನಾಟಕ ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದಾರೆ.
ಬನ್ನಂಜೆ ರಾಜಾಗೆ ಸಂಬಂಧಿಸಿದ ಪ್ರಕರಣಗಳ ವಿವರಗಳನ್ನು ಮಂಗಳೂರು ಪೊಲೀಸರು ಸರಕಾರಕ್ಕೆ ಗುರುವಾರ ಸಲ್ಲಿಸಿದ್ದಾರೆ.ಎಡಿಜಿಪಿ(ಕ್ರೈಂ ಹಾಗೂ ತಾಂತ್ರಿಕ ವಿಭಾಗ) ಎನ್ ಎಸ್ ಮೆಘರಿಖ್ ಅವರು ನೀಡಿರುವ ಮಾಹಿತಿ ಪ್ರಕಾರ ಮಂಗಳೂರು ಸಿಟಿ ಪೊಲೀಸ್ ಆಯುಕ್ತ ಎಸ್ ಮುರುಗನ್ ಅವರು ಈ ಕೇಸಿನ ಬೆಳವಣಿಗೆಗಳನ್ನು ಪರಿಶೀಲಿಸುತ್ತಿದ್ದಾರೆ.ಈ ವಿವರಗಳನ್ನು ಭಾರತ ಸರಕಾರ ಮೂಲಕ ಮೊರೆಕ್ಕೋಗೆ ಕಳುಹಿಸಬೇಕಾಗಿದೆ.[ರಾಜೇಂದ್ರ ಅಲಿಯಾಸ್ ಬನ್ನಂಜೆ ರಾಜಾ ಬಂಧನ]
ಮೊದಲು ಬಂಧಿತ ವ್ಯಕ್ತಿ ಬನ್ನಂಜೆ ರಾಜ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನ ಫೋಟೋ ಮತ್ತು ವಿವರಗಳನ್ನು ಸಲ್ಲಿಸಲಾಗಿದೆ. ಬಂಧಿತ ಬನ್ನಂಜೆ ರಾಜನೇ ಎಂದು ಖಚಿತವಾದ ಬಳಿಕ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

ಶೀಘ್ರದಲ್ಲಿ ರಾಜಾನನ್ನು ಭಾರತಕ್ಕೆ ಹಸ್ತಾಂತರವಾದರೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ನಿಟ್ಟಿನಲ್ಲಿ ಮಂಗಳೂರು ಕಮಿಷನರ್ ವಿಭಾಗ ಸಿದ್ಧತೆ ನಡೆಸಿದೆ. ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ.
ಜೊತೆಗೆ ನಗರ ಪೊಲೀಸರಿಗಿಂತ ಈ ಪ್ರಕರಣದ ಬಗ್ಗೆ ಕರ್ನಾಟಕ ಗೃಹ ಇಲಾಖೆ ಪರೀಶಿಲನೆ ಮುಖ್ಯವಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಮೊರಾಕ್ಕೋದಿಂದ ಉತ್ತರ ಬಂದ ಮೇಲೆ ತಿಳಿಸಲಾಗುವುದು ಎಂದು ಎಂಎನ್ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು, ಉಡುಪಿ, ಮಂಗಳೂರು ಸೇರಿದಂತೆ 31ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೊಲೆ, ಪ್ರಾಣಬೆದರಿಕೆ, ಹಫ್ತಾವಸೂಲಿ, ಬ್ಲಾಕ್ಮೇಲ್ ಸೇರಿದಂತೆ ನಾನಾ ರೀತಿಯ ಗಂಭೀರ ಆರೋಪಗಳಿವೆ. ಉಡುಪಿ, ಮಂಗಳೂರು, ಬೆಂಗಳೂರಿನಲ್ಲಷ್ಟೇ ಅಲ್ಲದೆ ಮುಂಬೈ, ನವದೆಹಲಿಯಲ್ಲೂ ಉದ್ಯಮಿಗಳು, ಬಿಲ್ಡರ್ಗಳು ಹಾಗೂ ಚಿತ್ರರಂಗದವರನ್ನು ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪ ಬನ್ನಂಜೆ ರಾಜಾನ ಮೇಲೆ ಇದೆ.
ರೆಡ್ ಕಾರ್ನರ್ ನೋಟಿಸ್ ಪಡೆದುಕೊಂಡು ತಲೆ ಮರೆಸಿಕೊಂಡಿದ್ದ ಉಡುಪಿ ಮೂಲದ ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಉತ್ತರ ಆಫ್ರಿಕಾ ದೇಶದ ಮೊರಾಕ್ಕೊದಲ್ಲಿ ಫೆ.11ರಂದು ಬಂಧನಕ್ಕೊಳಗಾದ ಸುದ್ದಿ ಇದೆ.












Click it and Unblock the Notifications