ಭೂಗತ ಪಾತಕಿ ರಾಜೇಂದ್ರ ಅಲಿಯಾಸ್ ಬನ್ನಂಜೆ ರಾಜಾ ಬಂಧನ
ಕಾಸಾಬ್ಲಾಂಕಾ(ಮೊರಕ್ಕೋ), ಫೆ.11: ರೆಡ್ ಕಾರ್ನರ್ ನೋಟಿಸ್ ಪಡೆದುಕೊಂಡು ತಲೆ ಮರೆಸಿಕೊಂಡಿದ್ದ ಉಡುಪಿ ಮೂಲದ ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಉತ್ತರ ಆಫ್ರಿಕಾ ದೇಶದ ಮೊರಾಕ್ಕೊದಲ್ಲಿ ಬಂಧಿಸಿರುವ ಸುದ್ದಿ ಬಂದಿದೆ. ಬನ್ನಂಜೆ ರಾಜಾ ಬಂಧನಕ್ಕೆ ಭಾರತ ಸರ್ಕಾರ ರೆಡ್ಕಾರ್ನರ್ ನೋಟಿಸ್ ಹೊರಡಿಸಿದೆ.
ಕಾಸಾಬ್ಲಾಂಕಾ ನಗರರದ ಪೊಲೀಸರು ಬನ್ನಂಜೆ ರಾಜನನ್ನು ವಶಕ್ಕೆ ತೆಗೆದುಕೊಂಡು ತಕ್ಷಣವೇ ಇಂಟರ್ಪೋಲ್ಗೆ ಮಾಹಿತಿ ರವಾನೆಯಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಭಾರತದ ಹೋಟೆಲ್ ಉದ್ಯಮಿ ಒಬ್ಬರಿಗೆ 5 ಕೋಟಿ ನೀಡುವಂತೆ ಬೇಡಿಕೆಯಿಟ್ಟಿದ್ದ. ಪೊಲೀಸರಿಗೆ ಈ ಉದ್ಯಮಿ ದೂರು ನೀಡಿದ್ದರು. ಮೊರಾಕ್ಕೊದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಸೆರೆ ಸಿಕ್ಕಿದ್ದಾನೆ. ಇನ್ನೊಂದು ಮೂಲಗಳ ಪ್ರಕಾರ ಭಾರತರ ಬೇಹುಗಾರಿಕಾ ತಂಡವೇ ಆತನನ್ನು ಬೆನ್ನಟ್ಟಿ ಸೆರೆ ಹಿಡಿದಿದೆ ಎನ್ನಲಾಗಿದೆ.
ಇತ್ತ ಬೆಂಗಳೂರಿನಲ್ಲಿ ಆತಂರಿಕ ಭದ್ರತಾ ವಿಭಾಗದ ಪೊಲೀಸರು ತುರ್ತು ಸಭೆ ನಡೆಸಿ ಬನ್ನಂಜೆ ರಾಜಾನನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ. 2009ರಲ್ಲಿ ದುಬೈ ಪೊಲೀಸರು ಈತನನ್ನು ಬಂಧಿಸಿದ್ದರಾದರೂ ತಾಂತ್ರಿಕ ಕಾರಣಗಳಿಂದ ಭಾರತಕ್ಕೆ ಕರೆತರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿ ಅಂತಹ ತಪ್ಪು ಮಾಡದಿರಲು ಕರ್ನಾಟಕ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.

ರಾಜಾನ ಮೇಲಿರುವ ಕೇಸ್ ಗಳು: ಬೆಂಗಳೂರು, ಉಡುಪಿ, ಮಂಗಳೂರು ಸೇರಿದಂತೆ 31ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೊಲೆ, ಪ್ರಾಣಬೆದರಿಕೆ, ಹಫ್ತಾವಸೂಲಿ, ಬ್ಲಾಕ್ಮೇಲ್ ಸೇರಿದಂತೆ ನಾನಾ ರೀತಿಯ ಗಂಭೀರ ಆರೋಪಗಳಿವೆ. ಉಡುಪಿ, ಮಂಗಳೂರು, ಬೆಂಗಳೂರಿನಲ್ಲಷ್ಟೇ ಅಲ್ಲದೆ ಮುಂಬೈ, ನವದೆಹಲಿಯಲ್ಲೂ ಉದ್ಯಮಿಗಳು, ಬಿಲ್ಡರ್ಗಳು ಹಾಗೂ ಚಿತ್ರರಂಗದವರನ್ನು ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪ ಬನ್ನಂಜೆ ರಾಜಾನ ಮೇಲೆ ಇದೆ.
ಯಾರೀತ ರಜಾ: ಅವಿಭಜಿತ ಉಡುಪಿ ಜಿಲ್ಲೆಯ ಬನ್ನಂಜೆ ಗ್ರಾಮದ ಸುಂದರ್ಶೆಟ್ಟಿಗಾರ್ ಮತ್ತು ವಿಲಾಸಿನಿ ದಂಪತಿಯ ಪುತ್ರನಾದ ಬನ್ನಂಜೆ ರಾಜಾ ಬಿಎ ಪದವೀಧರನಾಗಿದ್ದು, 1990ರಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಿಯುಸಿ ಓದುವಾಗ ತನ್ನ ವಿರೋಧಿ ಬಣದ ಸಹಪಾಠಿಯನ್ನು ಮೊದಲ ಮಹಡಿಯಿಂದ ಕೆಳಗೆ ತಳ್ಳುವ ಮೂಲಕ ಅಪರಾಧ ಕೃತ್ಯಕ್ಕೆ ರಾಜಾ ಕಾಲಿಟ್ಟಿದ್ದ.
1990ರಲ್ಲಿ ಅಪರಾಧ ಲೋಕಕ್ಕೆ ಕಾಲಿಟ್ಟ ರಾಜೇಂದ್ರ ಅಲಿಯಾಸ್ ಬನ್ನಂಜೆ ರಾಜಾ ಮೊದಲಿಗೆ ಛೋಟಾರಾಜನ್ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದ. ಮುಂಬೈನ ಭೂಗತ ಪಾತಕಿಗಳಿಂದ ಪಳಗಿದ ಈತ ಈಗ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಡಾನ್.












Click it and Unblock the Notifications