ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು
ಮಂಗಳೂರು, ಮಾರ್ಚ್ 2: ಕರ್ನಾಟಕದ ದಕ್ಷಿಣಕ್ಕಿರುವ ಕರಾವಳಿಯ ಜಿಲ್ಲೆ ದಕ್ಷಿಣ ಕನ್ನಡ. ಸಂಪೂರ್ಣ ಸಾಕ್ಷರತೆಯ ಜಿಲ್ಲೆ ಎಂದು ಹೆಗ್ಗಳಿಕೆ ಪಡೆದಿರುವ ದಕ್ಷಿಣ ಕನ್ನಡ ಬ್ಯಾಂಕಿಂಗ್ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಪ್ರಗತಿ ಸಾಧಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಜಿಲ್ಲೆ ಅಭಿವೃದ್ಧಿಯತ್ತ ಸಾಗುತ್ತಿದೆ.
ಶೈಕ್ಷಣಿಕ ಸಂಸ್ಥೆಗಳ ತೊಟ್ಟಿಲು ದಕ್ಷಿಣ ಕನ್ನಡ ಜಿಲ್ಲೆಗೆ ವಿದ್ಯಾರ್ಜನೆಗಾಗಿ ದೂರದ ಊರುಗಳಿಂದ, ಹೊರ ರಾಜ್ಯಗಳು ಸೇರಿದಂತೆ ವಿದೇಶಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿಯೂ ದಕ್ಷಿಣ ಕನ್ನಡ ಜಿಲ್ಲೆ ಶ್ರೀಮಂತವಾಗಿದೆ. ಇಲ್ಲಿನ ಜನರ ಪಾರಂಪರಿಕ ಜೀವನ ಶೈಲಿ, ಖಾದ್ಯಗಳು, ಧಾರ್ಮಿಕ-ಆಚರಣೆಗಳಿಂದಾಗಿ ದೇಶ ವಿದೇಶಗಳ ಗಮನ ಸೆಳೆದಿದೆ.
ತುಳುನಾಡಿನ ಗಂಡುಕಲೆ ಎನಿಸಿಕೊಂಡ ಯಕ್ಷಗಾನ , ತುಳು ಪಾಡ್ದನ, ಭೂತಕೋಲ, ಕೋಳಿ ಅಂಕ, ಕಂಬಳ.. ಒಂದಾ ಎರಡಾ? ತುಳುನಾಡಿನ ಸಾಂಸ್ಕೃತಿಕ ಸೊಗಡನ್ನು ಬಣ್ಣಿಸಲು ಸಾಧ್ಯವಿಲ್ಲ.

ಶಿಕ್ಷಣ ಕಾಶಿ
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ವಿಸ್ತೀರ್ಣ 4,859 ಚದರ ಕಿಲೋಮೀಟರ್. ಜಿಲ್ಲೆಯು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ, ಉತ್ತರದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣದಲ್ಲಿ ಕೇರಳ ರಾಜ್ಯಗಳಿಂದ ಸುತ್ತುವರಿದಿದೆ.

ಇತಿಹಾಸ
ಇಂಪೀರಿಯಲ್ ಗೆಜೆಟರ್ ಆಫ್ ಇಂಡಿಯಾ ಪ್ರಕಾರ ಬ್ರಿಟಿಷ್ ಆಳ್ವಿಕೆಯಲ್ಲಿ 1908ನೇ ವರ್ಷ ಸೌತ್ ಕೆನರಾ, ತಂಜಾವೂರು ಮತ್ತು ಗಂಜಂ ಈ ಮೂರು ಪ್ರದೇಶಗಳನ್ನು ಜಿಲ್ಲೆಗಳನ್ನಾಗಿ ಪರಿವರ್ತಿಸಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಲಾಯಿತು. 1947ರಲ್ಲಿ ಸೌತ್ ಕೆನರಾ ಜಿಲ್ಲೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಎಂದು ಹೆಸರಿಸಲಾಯಿತು. ಕರ್ನಾಟಕ ಸರ್ಕಾರ ಆಗಸ್ಟ್ 1997ರಲ್ಲಿ, ಆಡಳಿತ ದೃಷ್ಟಿಯಿ೦ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾಗಿ ವಿಂಗಡಿಸಿತು.

ಜಿಲ್ಲೆಯ ಪ್ರಮುಖ ಸಮುದಾಯಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಬ್ರಾಹ್ಮಣರು (ಶಿವಳ್ಳಿ, ಹವ್ಯಕ, ಕೋಟ), ಮೊಗವೀರ, ಕೊಂಕಣಿ, ಬಂಟ್ಸ್, ಬಿಲ್ಲವ, ಕೊರಗ, ಮಲೆಕುಡಿಯಾ ಪಂಗಡದವರು ಈ ಪ್ರದೇಶದಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ.

ಜಿಲ್ಲೆಯ ಮಾಹಿತಿ
ಜಿಲ್ಲೆಯ ಒಟ್ಟು ವಿಸ್ತೀರ್ಣ: 4859 ಚ. ಕಿ. ಮೀ.
ಜನಸಂಖ್ಯೆ: 21 ಲಕ್ಷ
ಪ್ರಮುಖ ಭಾಷೆಗಳು: ತುಳು, ಕನ್ನಡ, ಕೊಂಕಣಿ, ಬ್ಯಾರಿ ಭಾಷೆ
ಜಿಲ್ಲೆಯ ತಾಲೂಕುಗಳು: ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ, ಮೂಡಬಿದಿರೆ
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು: ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರು, ಮೂಡಬಿದಿರೆ

ಹಾಲಿ ಶಾಸಕರು
ಬೆಳ್ತಂಗಡಿ: ವಸಂತ ಬಂಗೇರಾ, ಕಾಂಗ್ರೆಸ್
ಮೂಡಬಿದಿರೆ: ಕೆ. ಅಭಯ ಚಂದ್ರ ಜೈನ್, ಕಾಂಗ್ರೆಸ್
ಮಂಗಳೂರು ಉತ್ತರ: ಮೊಯ್ದೀನ್ ಬಾವಾ, ಕಾಂಗ್ರೆಸ್
ಮಂಗಳೂರು ದಕ್ಷಿಣ: ಜೆ. ಆರ್. ಲೋಬೋ, ಕಾಂಗ್ರೆಸ್
ಮಂಗಳೂರು: ಯು. ಟಿ. ಖಾದರ್, ಕಾಂಗ್ರೆಸ್
ಬಂಟ್ವಾಳ: ಬಿ. ರಮಾನಾಥ ರೈ, ಕಾಂಗ್ರೆಸ್
ಪುತ್ತೂರು: ಶಕುಂತಲಾ ಶೆಟ್ಟಿ, ಕಾಂಗ್ರೆಸ್
ಸುಳ್ಯ: ಎಸ್. ಅಂಗಾರ, ಬಿಜೆಪಿ

ಕೋಮು ಸಾಮರಸ್ಯ
ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ದಕ್ಷಿಣ ಕನ್ನಡ ಹಲವು ಸಮಸ್ಯೆಗಳಿಂದಲೂ ನಲುಗುತ್ತಿದೆ. ಇಲ್ಲಿನ ಪ್ರಮುಖ ಸಮಸ್ಯೆ ಕೋಮು ಸಾಮರಸ್ಯ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ . ಗ್ಯಾಂಗ್ ವಾರ್, ಹತ್ಯೆ ಪ್ರಕರಣಗಳು, ಕೋಮು ಗಲಭೆಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದು ಜನರನ್ನು ಆತಂಕಕ್ಕೆ ತಳ್ಳಿದೆ.
ಇದು ಒಂದೆಡೆ ಜನರ ನೆಮ್ಮದಿಯನ್ನು ಹಾಳು ಮಾಡಿದರೆ ಇನ್ನೊಂದೆಡೆ ಜಿಲ್ಲೆಯ ಅಭಿವೃದ್ದಿಗೂ ಮಾರಕವಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುವ ಪ್ರತಿ ಸಣ್ಣ ಘಟನೆ ಕೂಡ ಕೋಮು ಸಾಮರಸ್ಯವನ್ನು ಕದಡುತ್ತಿದೆ.

ಎತ್ತಿನಹೊಳೆ ಯೋಜನೆ
ನೇತ್ರಾವತಿ ನದಿ ತಿರುವು ಯೋಜನೆ ಆಥವಾ ಎತ್ತಿನಹೊಳೆ ಯೋಜನೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಅಭಿಯಾನವೇ ನಡೆಯಿತು. ಯೋಜನೆ ವಿರೋಧಿಸಿ ಹಲವಾರು ಹೋರಾಟ, ಪ್ರತಿಭಟನೆ ಸೇರಿದಂತೆ ಜಿಲ್ಲಾ ಬಂದ್ ಕೂಡ ನಡೆಯಿತು . ಆದರೆ ಹಠಕ್ಕೆ ಬಿದ್ದ ರಾಜ್ಯ ಸರಕಾರ ವಿವಾದಿತ ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಿ ಕಾಮಗಾರಿ ಕೂಡ ಆರಂಭಿಸಿದೆ. ಈ ಯೋಜನೆಯಿಂದಾಗಿ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗಲಿದೆ ಜತೆಗೆ ಮೀನುಗಾರಿಕೆಗೂ ಹೊಡೆತ ಬೀಳಲಿದೆ ಎನ್ನುವ ಆತಂಕ ಜಿಲ್ಲೆಯ ಜನರ ಮನದಲ್ಲಿದೆ.

ಗ್ರಾಮೀಣ ರಸ್ತೆಗಳಿಗೆ ಸಿಕ್ಕಿಲ್ಲ ಮುಕ್ತಿ
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಹದಗೆಟ್ಟ ರಸ್ತೆಗಳಿಗೆ ಇಂದಿಗೂ ಮೋಕ್ಷ ದೊರೆತಿಲ್ಲ. ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕಿನ ಹಲವಾರು ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳು ಇಂದಿಗೂ ಡಾಂಬರು ಕಂಡಿಲ್ಲ. ಕೆಲವು ಗ್ರಾಮೀಣ ಭಾಗಗಳಿಗೆ ಇಂದಿಗೂ ರಸ್ತೆ ಸಂಪರ್ಕವೇ ಇಲ್ಲ.

ಮರೀಚಿಕೆಯಾದ ಎಂಡೋ ಪರಿಹಾರ
ಜಿಲ್ಲೆಯ ಕೊಕ್ಕಡ, ಪಟ್ರಮೆ, ನಿಡ್ಲೆ ಭಾಗದ ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗೆ ಈವರೆಗೂ ಪರಿಹಾರ ದೊರೆತಿಲ್ಲ. ಸರಕಾರದಿಂದ ಶಾಶ್ವತ ಪುನರ್ವಸತಿ ಸಿಕ್ಕಿಲ್ಲ. ದೊರೆಯುವ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ಅರೋಪಗಳು ಹಾಗೆಯೇ ಉಳಿದುಕೊಂಡಿವೆ.

ಅಡಿಕೆ ಬೆಳೆಗಾರರ ಸಮಸ್ಯೆ
ಅದಲ್ಲದೆ ಜಿಲ್ಲೆಯ ಅಡಿಕೆ ಬೆಳೆಗಾರರ ಸಮಸ್ಯೆಗಳು ಬಗೆಹರಿದಿಲ್ಲ. ಕೊಳೆರೋಗ, ಆಗಾಗ ಕುಸಿಯುತ್ತಿರುವ ಅಡಿಕೆ ಬೆಲೆ ಜಿಲ್ಲೆಯ ಬೆಳೆಗಾರರನ್ನು ಕಂಗೆಡಿಸುತ್ತಲೇ ಇದೆ.

ಕುಡಿಯುವ ನೀರಿನ ಸಮಸ್ಯೆ
ಜಿಲ್ಲೆಯ ಹಲವಾರು ಭಾಗದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಳೆಗಾಲದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲವಾದರೂ ಬೇಸಿಗೆ ಬಂತೆಂದರೆ ಜನ ನೀರಿಗಾಗಿ ಒದ್ದಾಡುತ್ತಿದ್ದಾರೆ. ಇಂದಿಗೂ ಎಷ್ಟೋ ಮನೆಗಳಿಗೆ ಪಂಚಾಯಿತಿಯ ನೀರು ತಲುಪುತ್ತಿಲ್ಲ.












Click it and Unblock the Notifications