ಕರಣ್ ಆಚಾರ್ಯ ವಿನ್ಯಾಸದ ವಿರಾಟ ಶ್ರೀ ರಾಮನ ಹೊಸ ರೂಪ ವೈರಲ್
ಮಂಗಳೂರು, ಜುಲೈ 24: ವಿರಾಟ ಭಜರಂಗಿ ಚಿತ್ರದೊಂದಿಗೆ ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದ ಮಂಗಳೂರಿನ ಕಲಾವಿದ ಕರಣ್ ಅಚಾರ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಕರಣ್ ಆಚಾರ್ಯ ರಚಿಸಿದ್ದ ಕೇಸರಿ, ಕಪ್ಪು ಬಣ್ಣದ ಶೇಡ್ ನಲ್ಲಿ ವೆಕ್ಟರ್ ಆರ್ಟ್ ನಲ್ಲಿ ಮೂಡಿಬಂದಿದ್ದ ವಿರಾಟ ಹನುಮಾನ್ ದೇಶ ವಿದೇಶದಲ್ಲಿ ಗಮನ ಸೆಳೆದಿತ್ತು. ಕರಣ್ ಆಚಾರ್ಯ ಅವರ ಪ್ರತಿಭೆಯನ್ನು ಪ್ರಧಾನಿ ಮೋದಿ ಕೂಡ ಕೊಂಡಾಡಿದ್ದರು.
ಆದರೆ ಈಗ ಕರಣ್ ಆಚಾರ್ಯ ಅವರ ಇನ್ನೊಂದು ವೆಕ್ಟರ್ ಆರ್ಟ್ ಜನರ ಗಮನ ಸೆಳೆಯುತ್ತಿದೆ. ಈ ಬಾರಿ ಕರಣ್ ಆಚಾರ್ಯ ಕೈಚಳಕದಲ್ಲಿ ಶ್ರೀ ರಾಮನ ವಿರಾಟ ರೂಪ ಮೂಡಿಬಂದಿದೆ.

ಕೇರಳದಲ್ಲಿ ಈಗಾಗಲೇ ಆರಂಭವಾಗಿರುವ ರಾಮಾಯಣ ಮಾಸಕ್ಕೆ ಶುಭ ಕೋರುವ ಸಲುವಾಗಿ ಕರಣ್ ಆಚಾರ್ಯ ರಚಿಸಿರುವ ಈ ವಿರಾಟ ರಾಮನ ರೂಪ ಈಗ ಪ್ರಸಿದ್ಧಿ ಪಡೆಯುತ್ತಿದೆ. ಬೆನ್ನಲ್ಲಿ ಬಾಣಗಳ ಬತ್ತಳಿಕೆ ಹೊತ್ತ ಕೆಂಪು ಹಾಗು ಕೇಸರಿ ಬಣ್ಣದ ರಾಮನ ವಿರಾಟ ರೂಪಕ್ಕೆ ಕಪ್ಪು ಬಣ್ಣದ ಶೇಡ್ ಗಳ ಮೂಲಕ ಕರಣ್ ಆಚಾರ್ಯ ರಚಿಸಿದ್ದಾರೆ.

ಒಂದರಲ್ಲಿ ಶ್ರಿ ರಾಮ ಗಡ್ಡಧಾರಿಯಾಗಿ ಕಂಡರೆ, ಇನ್ನೊಂದರಲ್ಲಿ ಗಡ್ಡವಿರದ ಶ್ರೀ ರಾಮನ ವಿರಾಟ ರೂಪವನ್ನು ಕರಣ್ ಚಿತ್ರಿಸಿದ್ದಾರೆ. ಈ ಶ್ರೀ ರಾಮನ ವಿರಾಟ್ ರೂಪ ಕೂಡ ಸ್ಟಿಕ್ಕರ್ ಆಗಿ ಬದಲಾಗಲಿದೆ. ಈಗಾಗಲೇ ವಿರಾಟ ಹನುಮಾನ್ ಚಿತ್ರ ಬೈಕ್, ಕಾರು, ಬಸ್ , ಲಾರಿಗಳ ಮುಂದೆ ಸ್ಟಿಕ್ಕರ್ ರೂಪದಲ್ಲಿ ರಾರಾಜಿಸುತ್ತಿದೆ.

ಅದೇ ರೀತಿಯಲ್ಲಿ ಶ್ರೀರಾಮನ ವಿರಾಟ ರೂಪ ಕೂಡ ಪ್ರಸಿದ್ಧಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications