ನಿತ್ಯವೂ ಕನ್ನಡಿಗರಾಗಿರಬೇಕೆಂದು ಕರೆ ಕೊಟ್ಟ ಸಚಿವ ಯು.ಟಿ.ಖಾದರ್
ಮಂಗಳೂರು, ನವೆಂಬರ್.01: ವರ್ಷಕ್ಕೊಮ್ಮೆ ನವೆಂಬರ್ 1 ರಂದು ಬರುವ ಕನ್ನಡ ರಾಜ್ಯೋತ್ಸವದಂದು ಮಾತ್ರ ನಾವು ಕನ್ನಡ ನೆನಪಿಸಿಕೊಂಡರೆ ಸಾಕೇ? ವರ್ಷದ ಪ್ರತಿದಿನ ನಾವು ಕನ್ನಡಿಗರಾಗೇ ಇರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ನಗರದ ನೆಹರೂ ಮೈದಾನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಎಂಟು ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಕನ್ನಡ ನಾಡಿನಲ್ಲಿ, ಕುವೆಂಪು ಅವರ 'ಕನ್ನಡ ನಾಡಿಗೆ ನೀ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ' ಎಂಬ ಕರೆಗೆ ಓಗೊಟ್ಟು ನಾವೆಷ್ಟು ಮಂದಿ ಕನ್ನಡಕ್ಕಾಗಿ ಕೈ ಎತ್ತಿದ್ದೇವೆ? ಕನ್ನಡಕ್ಕಾಗಿ ಕೊರಳೆತ್ತಿದ್ದೇವೆ? ಎಂದು ನಾವೇ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ನಮ್ಮ ನಾಡು, ನೆಲ, ಭಾಷೆ ,ಸಂಸ್ಕೃತಿ. ಪರಂಪರೆಯ ಬಗ್ಗೆ ನಾವು ಹೆಮ್ಮೆಪಡಬೇಕು ಎಂದು ಕರೆ ನೀಡಿದರು.
63ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ 18 ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಡಿಎಆರ್ ಮತ್ತು ಜಿಲ್ಲಾ ಸಶಸ್ತ್ರ ಪಡೆ ಸೇರಿದಂತೆ ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ಡಾ.ಭರತ್ ಶೆಟ್ಟಿ, ಮೇಯರ್ ಕೆ.ಭಾಸ್ಕರ್ ಮೊಯ್ಲಿ, ಉಪಮೇಯರ್ ಕೆ.ಮುಹಮ್ಮದ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಲ್ಲಾ ಎಸ್ಪಿರವಿಕಾಂತೇ ಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಮೆರವಣಿಗೆ ನಡೆಯಿತು.

ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ವಿವರ
ಕುಮಾರ್ ಪೆರ್ನಾಜೆ - ಕೃಷಿ, ಶೇಖರ ಭಂಡಾರಿ-ಸಾಹಿತ್ಯ, ಬೊಂಡಾಲ ಸಚ್ಚಿದಾನಂದ ಶೆಟ್ಟಿ - ಶಿಕ್ಷಣ, ಪಿ.ಎಂ ಹಸನಬ್ಬ ಮೂಡಬಿದ್ರೆ- ಸಂಗೀತ, ದಿನಕರ ಇಂದಾಜೆ- ಪತ್ರಿಕೋದ್ಯಮ, ಲಕ್ಷಣ ಕುಂದರ್ - ಪತ್ರಿಕೋದ್ಯಮ, ವಿದ್ವಾನ್ ಶ್ರಾವಣ್ ಉಳ್ಳಾಲ- ನೃತ್ಯ, ನಾಗೇಶ್ ಎ -ಕ್ರೀಡೆ, ಮಾಸ್ಟರ್ ಮುಹಮ್ಮದ್ ಶಾಮಿಲ್ ಅರ್ಷದ್ - ಕ್ರೀಡೆ, ಜಾನ್ ಚಂದ್ರನ್-ಲಲಿತಕಲೆ, ಸದಾಶಿವ ಅಮೀನ್-ಲಲಿತಕಲೆ, ಚಂದ್ರಶೇಖರ ನಾಣಿಲ್-ಸಮಾಜ ಸೇವೆ, ಡಾ. ಐ ಶಶಿಕಾಂತ್ ಜೈನ್ - ಸಮಾಜ ಸೇವೆ(ಯೋಗ), ಶಂಕರ ಬಿ.ಶೆಟ್ಟಿ ವಿರಾರ್ - ಸಮಾಜ ಸೇವೆ, ಕುರ್ನಾಡು ಶಿವಣ್ಣ ಆಚಾರ್ಯ -ಜಾನಪದ, ಗೋಪಾಲ ಶಿಬರೂರು-ಜಾನಪದ, ಡಾ. ಮನೋರಮ ರಾವ್-ವೈದ್ಯಕೀಯ, ಡಾ. ದಿನೇಶ್ ಕದಂ - ವೈದ್ಯಕೀಯ












Click it and Unblock the Notifications