ಪಿಲಿಕುಳದಲ್ಲಿ ಈ ಬಾರಿಯ ಕಂಬಳ ಆಯೋಜನೆ
ಮಂಗಳೂರು, ಸೆಪ್ಟೆಂಬರ್ 15 : ಕರಾವಳಿಯಲ್ಲಿ ಈ ಋತುವಿನ ಕಂಬಳಕ್ಕೆ ಸಿದ್ಧತೆ ಆರಂಭಗೊಂಡಿದೆ . ಈ ಬಾರಿಯ ಕರಾವಳಿ ಉತ್ಸವದ ಭಾಗವಾಗಿ ಪಿಲಿಕುಳದಲ್ಲಿ ಕಂಬಳ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ.
ಮಂಗಳೂರಿನಲ್ಲಿ 'ಕರಾವಳಿ ಉತ್ಸವ' ಈ ಬಾರಿ ಡಿಸೆಂಬರ್ ನಲ್ಲಿ ನಡೆಯಲಿದೆ. ಇದರ ಭಾಗವಾಗಿ ಪಿಲಿಕುಳದಲ್ಲಿ ನೇತ್ರಾವತಿ - ಫಲ್ಗುಣಿ ಜೋಡುಕೆರೆ ಕಂಬಳ ಆಯೋಜನೆಗೆ ಜಿಲ್ಲಾಡಳಿತ ಚಿಂತನೆ ನಡೆಸಿದ್ದು ಈ ನಿಟ್ಟಿನಲ್ಲಿ ಸಭೆ ಕೂಡ ನಡೆಸಿದೆ.

ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ 2014ರಲ್ಲಿ ಕೊನೆಯ ಬಾರಿಗೆ ಕಂಬಳ ನಡೆದಿತ್ತು. 2015ರಲ್ಲಿ ಕಂಬಳ ಆಯೋಜನೆ ಗೊಂಡಿರಲಿಲ್ಲ. 2016 ರಲ್ಲಿ ಕಂಬಳದ ಮೇಲೆ ನಿಷೇಧ ಹೇರಿದ್ದ ಕಾರಣ ಕರಾವಳಿ ಭಾಗದಲ್ಲಿ ಎಲ್ಲೂ ಕಂಬಳ ಆಯೋಜ ಮಾಡಿರಲಿಲ್ಲ.
ಈ ಬಾರಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ಕಂಬಳ ನಡೆಸಲು ಅವಕಾಶವಿದೆ. ಪಿಲಿಕುಳ ನಿಸರ್ಗಧಾಮದಲ್ಲಿ ಈ ಬಾರಿ ಕಂಬಳ ನಡೆಸುವ ಕುರಿತು ಜಿಲ್ಲಾಧಿಕಾರಿ ಡಾ.ಕೆ.ಜಿ ಜಗದೀಶ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಕಂಬಳ ಆಯೋಜನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.












Click it and Unblock the Notifications