ಮೃತ ಮಗನ ವಿಮೆ ಹಣ ಹೆತ್ತವರಿಗೆ ನೀಡದೇ ವಂಚಿಸಿದ ವಕೀಲ
ಮಂಗಳೂರು, ಡಿಸೆಂಬರ್ 02; ಮಗ ರಸ್ತೆ ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿದ್ದ. ಮಗ ತೀರಿಕೊಂಡ ಕೊರಗಿನಲ್ಲೇ ಇದ್ದ ಹೆತ್ತವರಿಗೆ ಭವಿಷ್ಯ ಏನು? ಎಂಬ ಚಿಂತೆ ಕಾಡಿತ್ತು. ಆದರೆ ಮಗನ ವಿಮೆ ಹಣ ಬರುವ ಆಶಾವಾದ ಆ ಬಡ ತಂದೆ-ತಾಯಿಯಲ್ಲಿತ್ತು. ಆದರೆ ಇನ್ಶುರೆನ್ಸ್ ಹಣ ಕೈ ಸೇರುವಾಗ ನಂಬಿದ ವಕೀಲ ಮೋಸ ಮಾಡಿದ್ದಾನೆ.
ತಾಯಿಯ ಹೆಸರಿನಲ್ಲಿ ನಕಲಿ ಖಾತೆ ತೆರದು 15ಲಕ್ಷ ರೂಪಾಯಿ ಲಪಟಾಯಿಸಿದ್ದಾನೆ. ವಕೀಲನಿಂದ ಮೋಸಕ್ಕೊಳಗಾದ ಹೆತ್ತವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಂಗಳೂರಿನ ಬಜ್ಪೆ ನಿವಾಸಿ ದಿವಾಕರ ಆಚಾರ್ಯ ಮತ್ತು ಶಕುಂತಲಾ ದಂಪತಿ ಮೋಸ ಹೋದವರು. ಈ ದಂಪತಿಯ ಪುತ್ರ ಶರಣ್ ಜಿ. ಡಿ. 2019ರ ಜನವರಿ 1 ರಂದು ಬೆಂಗಳೂರಿನ ಪೀಣ್ಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದ.
ಪರಿಹಾರಕ್ಕಾಗಿ ಹೆತ್ತವರು ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದಕ್ಕಾಗಿ ಪದ್ಮನಾಭ್ ಎಂಬ ವಕೀಲರನ್ನು ನೇಮಿಸಿದ್ದರು. ಆತ ನ್ಯಾಯಾಲಯದಲ್ಲಿ ವಾದಿಸಲು ದಾಖಲೆಗಳ ಅವಶ್ಯಕತೆ ಇದೆಯೆಂದು ನಂಬಿಸಿ ಮೃತ ಯುವಕನ ಪೋಷಕರಿಂದ ಖಾಲಿ ಹಾಳೆಗಳ ಮೇಲೆ ಸಹಿ ಪಡೆದುಕೊಂಡಿದ್ದ. ಅಲ್ಲದೆ ಅವರ ಭಾವಚಿತ್ರಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳನ್ನು ಕೂಡ ಪಡೆದಿದ್ದ. ಮಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ 2021ರ ಜು.20ರಂದು ಪ್ರಕರಣ ಇತ್ಯರ್ಥಗೊಂಡಿದೆ. ಪರಿಹಾರ ಬಾಬ್ತು 15 ಲಕ್ಷ ರೂ. ನೀಡಲು ಆದೇಶವಾಗಿತ್ತು.

ಅದರಂತೆ ವಿಮಾ ಸಂಸ್ಥೆ ಸೆಪ್ಟೆಂಬರ್ 9ರಂದು ಚೆಕ್ ಮೂಲಕ ಹಣ ನೀಡಿಲು ಮುಂದಾಗಿತ್ತು. ಹೀಗಾಗಿ, ಕಕ್ಷಿದಾರರ ಸಹಿ ಅಗತ್ಯವಿದ್ದ ಕಾರಣ ಪೋಷಕರನ್ನು ಕರೆಯಿಸಿ ಸಹಿ ಪಡೆದಿದ್ದ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿರುವ ಕುರಿತು ವಕೀಲ ಪೋಷಕರಿಗೆ ತಿಳಿಸದೆ ಚೆಕ್ ತನ್ನಲ್ಲೇ ಇರಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಜೊತೆಗೆ ಚೆಕ್ನಲ್ಲಿ ಸಹಿ ಮಾಡಿರುವುದರಲ್ಲಿ ದೋಷವಿದೆ. ಹೀಗಾಗಿ, ಚೆಕ್ ಅನ್ನು ಮರಳಿ ವಿಮಾ ಕಂಪನಿಗೆ ಕಳುಹಿಸಲಾಗಿದೆ ಎಂದು ಸುಳ್ಳು ಹೇಳಿ ವಂಚಿಸಿದ್ದ ಎಂದು ಮೃತ ಯುವಕನ ಪೋಷಕರು ಆರೋಪಿಸಿದ್ದಾರೆ. ಮೃತ ಯುವಕನ ತಾಯಿಯ ಹೆಸರಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ತೆರೆದಿದ್ದ ವಕೀಲ ಅದೇ ಖಾತೆಗೆ ಚೆಕ್ ಹಣ ಸಂದಾಯ ಮಾಡಿದ್ದ.
ಮೊದಲು 15 ಲಕ್ಷ ಜಮಾವಣೆಯಾದ ಕುರಿತು ಮೊಬೈಲ್ಗೆ ಸಂದೇಶ ಬಂದಾಗ ನಿರ್ಲಕ್ಷಿಸಿದ್ದರು. ಆದರೆ ಅದೇ ಖಾತೆಯಿಂದ 5 ಲಕ್ಷ ಹಾಗೂ 10 ಲಕ್ಷ ರೂಪಾಯಿ ವರ್ಗಾವಣೆಯಾಗಿರುವ ಕುರಿತು ಸಂದೇಶ ಬಂದಿತ್ತು. ಇದರಿಂದ ಅನುಮಾನಗೊಂಡ ಪೋಷಕರು, ಪೋಸ್ಟ್ ಆಫೀಸ್ನಲ್ಲಿ ವಿಚಾರಿಸಿದಾಗ ತಮ್ಮ ಹೆಸರಲ್ಲಿ ಉಳಿತಾಯ ಖಾತೆ ತೆರೆದಿರುವುದು ತಿಳಿದು ಬಂದಿದೆ.
ಈ ಹಿನ್ನೆಲೆ ವಂಚನೆಗೊಳಗಾದ ಮೃತ ಯುವಕನ ಪೋಷಕರು ಬಂದರು ಪೊಲೀಸರು ಠಾಣೆಯಲ್ಲಿ ವಕೀಲನ ವಿರುದ್ಧ ದೂರು ದಾಖಲಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ವಕೀಲ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.
ಈ ಬಗ್ಗೆ ಮಾತನಾಡಿದ ಮೃತ ಯುವಕನ ತಂದೆ ದಿವಾಕರ ಆಚಾರ್ಯ, "ಮಗನಿಗೆ ಅಫಘಾತ ಆಗಿದ್ದ ಕಾರಣ ಭವಿಷ್ಯದಲ್ಲಿ ಮುಂದೆ ಏನು ಚಿಂತೆ ಕಾಡಿತ್ತು?. ಮಗನ ಭವಿಷ್ಯ ನಿಧಿಗಾಗಿ ಗ್ರಾಹಕ ಕೋರ್ಟ್ ನಲ್ಲಿ ದೂರು ನೀಡಿದ್ದೆವು. ವಕೀಲ ಪದ್ಮನಾಭ ಪರಿಚಯ ಇದ್ದರಿಂದ ಅವರ ಮೂಲಕ ಕೋರ್ಟ್ಗೆ ಹೋಗಿದ್ದೆವು. ಈ ಕೋರ್ಟ್ ಕಛೇರಿ ಬಗ್ಗೆ ಅಷ್ಟೇನೂ ಜ್ಞಾನ ಇಲ್ಲದೇ ಇದ್ದಿದ್ದರಿಂದ ಎಲ್ಲವುದಕ್ಕೂ ಪದ್ಮನಾಭ ಅವರ ಮೇಲೆ ಅವಲಂಬಿತರಾಗಿದ್ದೆವು. ಆದರೆ ಈಗ ಮೋಸ ಮಾಡಿರೋದು ಗೊತ್ತಾಗಿದೆ. ನಮಗೆ ನ್ಯಾಯ ಸಿಗಬೇಕೆಂದು ಪೊಲೀಸ್ ದೂರು ನೀಡಿದ್ದೇವೆ" ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ಮೃತ ಯುವಕನ ತಾಯಿ ಶಕುಂತಲಾ ಕೂಡಾ ವಕೀಲನಿಂದ ಮೋಸ ಹೋದ ಬಗ್ಗೆ ಆರೋಪ ಮಾಡಿದ್ದಾರೆ. "ನನ್ನ ಮೊಬೈಲ್ಗೆ ಹಣ ಸಂದಾಯ ಆಗಿರುವ ಬಗ್ಗೆ ಮೆಸೇಜ್ ಬಂದಿದೆ. ಆಗ ಇದು ಸುಮ್ಮನೆ ಇರಬಹುದಾಗಿ ಭಾವಿಸಿದ್ದೆವು. ಆದರೆ ಮತ್ತೆ ಹಣ ಡೆಬಿಟ್ ಆದ ಮೆಸೇಜ್ ಬರಲಾರಂಭಿಸಿದೆ. ಪೋಸ್ಟ್ ಆಫೀಸ್ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆ ತೆಗೆದಿರೋದು ಗೊತ್ತಾಗಿದೆ. ಈ ಬಗ್ಗೆ ವಕೀಲ ಪದ್ಮನಾಭ ಬಳಿ ಕೇಳಿದರೆ ತನ್ನ ಎಫ್ ಡಿ ಹಣದಲ್ಲಿ ಕೊಡೋದಾಗಿ ಹೇಳಿದ್ದಾರೆ. ಮುಂದೆ ಏನು ಮಾಡೋದು? ಅಂತಾ ಗೊತ್ತಾಗುತ್ತಿಲ್ಲ" ಎಂದು ಹೇಳಿದ್ದಾರೆ.
ವಕೀಲನಿಂದ ಮೋಸ ಹೋದ ಬಗ್ಗೆ ದೂರನ್ನು ಮೋಸ ಹೋದ ದಂಪತಿ ಈಗಾಗಲೇ ಪೊಲೀಸ್ ಕಮೀಷನರ್, ಬಾರ್ ಕೌನ್ಸಿಲ್ಗೆ ನೀಡಿದ್ದಾರೆ. ಆರೋಪಿ ವಕೀಲ ಈಗ ತಲೆಮರೆಸಿಕೊಂಡಿದ್ದು, ಪೊಲೀಸರಿಂದ ನ್ಯಾಯ ಸಿಗುವ ಭರವಸೆಯಲ್ಲಿ ಹೆತ್ತವರಿದ್ದಾರೆ.












Click it and Unblock the Notifications