ದಕ್ಷಿಣ ಕನ್ನಡದ ಹಾಡಿಗಳ ಯುವತಿಯರ ಸ್ವಾಸ್ಥ್ಯ ಕಾಪಾಡುತ್ತಿದೆ 'ಪ್ಯಾಡ್ ಗ್ರೂಪ್'
ಮಂಗಳೂರು, ಫೆಬ್ರವರಿ 8: ಅಮೆರಿಕಾದ ಬಳಿ ಸೂಪರ್ ಮ್ಯಾನ್ ,ಸ್ಪೈಡರ್ ಮ್ಯಾನ್ ಇದ್ದಾನೆ ಆದರೆ ಭಾರತದ ಬಳಿ 'ಪ್ಯಾಡ್ ಮ್ಯಾನ್; ಇದ್ದಾನೆ. ಇದು ಶೀಘ್ರದಲ್ಲೇ ತೆರೆ ಕಣಲಿರುವ ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಪ್ಯಾಡ್ ಮಾನ್ ಚಿತ್ರದ ಟ್ರೈಲರ್.
ತಮ್ಮ ಮನೋಜ್ಞ ಅಭಿನಯದಿಂದ ಈಗಾಗಲೇ ವಿಶ್ವದ ಗಮನ ಸೆಳೆದಿರುವ ಖಿಲಾಡಿ ಅಕ್ಷಯ್ ಕುಮಾರ್, 'ಪ್ಯಾಡ್ ಮ್ಯಾನ್' ಚಿತ್ರದ ಮೂಲಕ ಈ ಬಾರಿ ಮಹಿಳೆಯರ ಗಂಭೀರ ಸಮಸ್ಯೆಯ ಬಗ್ಗೆ ಅರಿವು ಮೂಡಿಸಲು ಹೊರಟಿದ್ದಾರೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅರುಣಾಚಲಂ ಮುರುಘನಾಥನ್ ಅವರ ಜೀವನ ಕಥೆ ಆಧಾರಿತ ಚಿತ್ರ ಇದಾಗಿದೆ.
ಭಾರತದ ಬಳಿ ಅರುಣಾಚಲಂ ಮುರುಘನಾಥನ್ ಎಂಬ ಪ್ಯಾಡ್ ಮ್ಯಾನ್ ಇದ್ದರೆ, ನಮ್ಮ ಮಂಗಳೂರಿನಲ್ಲಿ ಪ್ಯಾಡ್ ಗ್ರೂಪ್ ಇದೆ. ಏನಿದು ಪ್ಯಾಡ್ ಗ್ರೂಪ್? ಈ ಸ್ಟೋರಿ ಓದಿ.
ಹಾಡಿಗಳಲ್ಲಿ ಸ್ವಚ್ಛತೆಯ ಪಾಠ
ಮಂಗಳೂರಿನ ಯುವ ಮನಸ್ಸುಗಳ ತಂಡವೊಂದು, ದೂರದ ಕುಗ್ರಾಮಗಳಲ್ಲಿ ಯುವತಿಯರು ಹಾಗೂ ಮಹಿಳೆಯರಿಗೆ ಆರೋಗ್ಯದ ಪಾಠ ಹೇಳುತ್ತಿದ್ದು, ಸ್ವಚ್ಛ ದೇಹ, ಸ್ವಚ್ಛ ಮನಸ್ಸು ಸೇರಿದಂತೆ ಸ್ವಚ್ಛ ಪರಿಸರದ ಕುರಿತು ಜಾಗೃತಿ ಮೂಡಿಸುತ್ತಿದೆ. ಯುವತಿಯರು ಋತುಮತಿಯರಾದ ಬಳಿಕ ಬಳಸುವ ಅನಾರೋಗ್ಯಕರ ವಸ್ತುಗಳನ್ನು ತ್ಯಜಿಸುವಂತೆ ಮಾಡಿರುವ ಈ ಯುವ ತಂಡ ತಾವೇ ತಯಾರಿಸಿದ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು, ಪುಟ್ಟ ಮಕ್ಕಳ ಡೈಪರ್ ಗಳನ್ನು ವಿತರಿಸುತ್ತಿದೆ.
'ಸ್ವಾಸ್ಥ್ಯ ಭಾರತ್'
'ಸ್ವಾಸ್ಥ್ಯ ಭಾರತ್' ಹೆಸರಿನ ಅಭಿಯಾನ ಆರಂಭಿಸಿರುವ ಈ ಯುವ ತಂಡ ಸದ್ದಿಲ್ಲದೇ ಎಲೆಮರೆಯ ಕಾಯಿಗಳಂತೆ ತಮ್ಮಷ್ಟಕ್ಕೆ ತಾವೇ ದೇಶ ಸೇವೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗರು ಹೆಮ್ಮೆಯಿಂದ ಹೇಳಬಹುದು ಅಮೆರಿಕಾದ ಬಳಿ ಸೂಪರ್ ಮ್ಯಾನ್ ,ಸ್ಪೈಡರ್ ಮ್ಯಾನ್ ಇದ್ದಾನೆ , ಭಾರತದ ಬಳಿ ಪ್ಯಾಡ್ ಮ್ಯಾನ್ ಇದ್ದಾನೆ, ಆದರೆ ನಮ್ಮ ಬಳಿ ಪ್ಯಾಡ್ ಗ್ರೂಪ್ ಇದೆ ಅಂತ.
ಕಲ್ಪವೃಕ್ಷ ಕಲ್ಪ ಟ್ರಸ್ಟ್
ಅತೀ ಹಿಂದುಳಿದ, ಬುಡಕಟ್ಟು ಜನಾಂಗಗಳಲ್ಲಿಯ ಯುವತಿಯರು ಸೇರಿದಂತೆ ಮಹಿಳೆಯರಿಗೆ ಅನಾರೋಗ್ಯಕರ ವಸ್ತುಗಳ ಬಳಕೆಯ ಬಗ್ಗೆ ಈ ತಂಡ ಜಾಗೃತಿ ಮೂಡಿಸುತ್ತಿದೆ. ಸಮಾಜ ಸೇವಾ ಸಂಸ್ಥೆ 'ಕಲ್ಪ ಟ್ರಸ್ಟ್' ಅಡಿಯಲ್ಲಿ ಬಟ್ಟೆ ಬ್ಯಾಂಕ್ ಒಂದನ್ನು ಆರಂಭಿಸಿರುವ ಈ ಯುವ ತಂಡ ಸ್ಯಾನಿಟರಿ ನ್ಯಾಪ್ಕಿನ್, ಮಕ್ಕಳ ಡೈಪರ್ ಗಳನ್ನು ತಯಾರಿಸಿ ಬುಡಕಟ್ಟು ಜನಾಂಗದ ಯುವತಿಯರಿಗೆ ಮಹಿಳೆಯರಿಗೆ ಹಂಚುತ್ತಿದೆ. ಸ್ವಸ್ಥ ಭಾರತದ ಪರಿಕಲ್ಪನೆಯಡಿ ತಮ್ಮ ಉತ್ಪನ್ನ ಗಳಿಗೂ ಈ ಯುವ ತಂಡ 'ಸ್ವಾಸ್ಥ್ಯ' ಎಂದೇ ಹೆಸರಿಟ್ಟಿದೆ.
ಉತ್ಸಾಹಿ ಯುವ ಮನಸ್ಸುಗಳು
ಭಾರತ ಯುವ ಪ್ರತಿಭೆಗಳ ದೇಶ. ವಿಶ್ವದ ಎಲ್ಲರ ಚಿತ್ತ ಯಂಗ್ ಇಂಡಿಯಾದತ್ತ ನೆಟ್ಟಿದೆ. ವಿಶ್ವದ ಹಲವಾರು ಗಂಭೀರ ಸಮಸ್ಯೆಗಳಿಗೆ ಉತ್ತರವನ್ನು ಈಗ ಭಾರತಿಯರಿಂದಲೇ ನಿರೀಕ್ಷಿಸಲಾಗುತ್ತಿರುವ ಕಾಲಘಟ್ಟ ಇದು. ಇಂದಿನ ಯುವ ಜನತೆ ಪಬ್, ಮಾಲ್, ಪಾರ್ಕ್ ಸೇರಿದಂತೆ ಜಾಲಿ ರೈಡ್ಗಳಲ್ಲಿ ಕಾಲ ಕಳೆಯುವುದೇ ಹೆಚ್ಚು. ಆದರೆ ಮಂಗಳೂರಿನ ಉತ್ಸಾಹಿ ಯುವಕ ಯುವತಿಯರ ತಂಡ ತಮ್ಮ ಬಿಡುವಿನ ವೇಳೆಯನ್ನು ಕುಗ್ರಾಮಗಳ, ಅದರಲ್ಲೂ ಅತಿ ಹಿಂದುಳಿದ ಬುಡಕಟ್ಟು ಜನಾಂಗಗಳ ಅಭ್ಯುದಯಕ್ಕಾಗಿ ತೊಡಗಿಸಿಕೊಂಡಿದೆ.
ಸಮಾಜದ ಋಣ ತೀರಿಸುವ ಉದ್ದೇಶ
ಈ ಸಮಾಜಮುಖಿ ಚಿಂತನೆ ಆರಂಭವಾಗಿದ್ದೆ ಒಂದು ರೋಚಕ ಕತೆ. ಮಂಗಳೂರಿನ 'ಕಲ್ಪ ಟ್ರಸ್ಟ್'ನಿಂದ ಈ ಚಿಂತನೆ ಆರಂಭವಾಯಿತು. ಉಪನ್ಯಾಸಕಿ ಪ್ರಮೀಳಾ ರಾವ್ ಹಾಗೂ ಕುಟುಂಬ ಸದಸ್ಯರು. ಸಮಾಜದ ಋಣ ತೀರಿಸುವ ಉದ್ದೇಶದಿಂದ 13 ವರ್ಷಗಳ ಹಿಂದೆ ಈ ಟ್ರಸ್ಟನ್ನು ಹುಟ್ಟು ಹಾಕಿದ್ದರು. ಇಂದಿನ ಯುವ ಪೀಳಿಗೆ ಸಮಾಜಮುಖಿಯಾಗಬೇಕು, ಸಮಾಜದ ಸುಧಾರಣೆಗೆ ಸ್ಪಂದಿಸಬೇಕು ಎಂಬ ಚಿಂತನೆಯಿಂದ ಈ ಕಲ್ಪ ಟ್ರಸ್ಟ್ ಆರಂಭಗೊಂಡಿತ್ತು. ಈ ಚಿಂತನೆಗೆ ಕೈಜೋಡಿಸಿದವರು ಮಂಗಳೂರಿನ ಕೆಲ ಕಾಲೇಜಿನ ವಿದ್ಯಾರ್ಥಿ, ವಿಧ್ಯಾರ್ಥಿನಿಯರು.
ಬಟ್ಟೆ ವಿತರಿಸಿತ್ತು ಟ್ರಸ್ಟ್
ಸಮಾಜದಲ್ಲಿ ಅತ್ಯಂತ ಕೆಳ ಸ್ಥರದಲ್ಲಿ ಬದುಕುವ ಕುಗ್ರಾಮಗಳ ಬುಡಕಟ್ಟು ಸಮುದಾಯದ ಜನರ ಬದುಕನ್ನು ಅರಿತು ಅವರ ಬೇಕು ಬೇಡ, ಸಮಸ್ಯೆ, ಅನಿವಾರ್ಯತೆ, ಅಗತ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಅದಕ್ಕೆ ಪರಿಹಾರ ಒದಗಿಸಲು ನಿರ್ಧರಿಸಲಾಯಿತು. ಈ ಮೊದಲು ತೊಡುವ ಬಟ್ಟೆಗಳ ಅಗತ್ಯತೆ ಬಗ್ಗೆ ಗಮನ ಹರಿಸಿದ ವಿದ್ಯಾರ್ಥಿಗಳ ತಂಡ 7 ವರ್ಷಗಳ ಹಿಂದೆ ಬಟ್ಟೆ ಬ್ಯಾಂಕ್ ಒಂದನ್ನು ಸ್ಥಾಪಿಸಿತ್ತು.
ದಾನಿಗಳಿಂದ, ತಮ್ಮ ಸ್ನೇಹಿತರಿಂದ ಹಳೆ ಬಟ್ಟೆಗಳನ್ನು ಸಂಗ್ರಹಿಸಿದ ಈ ತಂಡ ಅವುಗಳಲ್ಲಿ ಉಪಯೋಗಿಸಬಹುದಾದ ಬಟ್ಟೆಗಳನ್ನು ಬೇರ್ಪಡಿಸಿ ಅವುಗಳನ್ನು ಶುಭ್ರಗೊಳಿಸಿ ಅಗತ್ಯ ಮಾರ್ಪಾಡುಗಳನ್ನು ಮಾಡಿ ಗಿರಿಜನ, ಬುಡಕಟ್ಟು ಹಾಡಿಗಳಿಗೆ ತೆರಳಿ ಅದನ್ನು ವಿತರಿಸಲಾಗಿತ್ತು.
ಸ್ವಚ್ಛತೆಗೊಂದು ಪರಿಹಾರ
ಹೀಗೆ ಬಟ್ಟೆ ವಿತರಣೆಗೆ ಹೋದ ಸಂದರ್ಭದಲ್ಲಿ ಹಾಡಿಯ ಯುವತಿಯರು ಹಾಗೂ ಮಹಿಳೆಯರು ಋತುಮತಿಯರಾದ ಬಳಿಕ ಉಪಯೋಗಿಸುತ್ತಿದ್ದ ಅನಾರೋಗ್ಯಕರ ವಸ್ತುಗಳು ಹಾಗೂ ಅದರಿಂದಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ವಿದ್ಯಾರ್ಥಿಗಳು ಇದಕ್ಕೊಂದು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದರು.
ಆ ಹೊತ್ತಿಗೆ ವಿದ್ಯಾರ್ಥಿಗಳ ಗಮನಕ್ಕೆ ಬಂದಿದ್ದು ದೆಹಲಿಯ ಗೂಂಜ್ ಎಂಬ ಸಂಸ್ಥೆ. ಈ ಸಂಸ್ಥೆ ಸರಳವಾಗಿ ಸ್ಯಾನಿಟರ್ ನ್ಯಾಪ್ಕಿನ್ ತಯಾರಿಸುತ್ತಿದೆ ಎಂಬ ಮಾಹಿತಿ ಪಡೆದ ವಿದ್ಯಾರ್ಥಿಗಳು ದೆಹಲಿಗೆ ತೆರಳಿ ನ್ಯಾಪ್ಕಿನ್ ತಯಾರಿಸುವ ಬಗ್ಗೆ ಮಾಹಿತಿ ಪಡೆದರು. ಇಲ್ಲಿರುವ ವಿಶೇಷತೆ ಎಂದರೆ ಈ ತರಬೇತಿಗೆ ತೆರಳಿದವರೆಲ್ಲರೂ ಹುಡುಗರು.
ದೆಹಲಿಯಿಂದ ಮಂಗಳೂರಿಗೆ
ತರಬೇತಿ ಪಡೆದು ಮಂಗಳೂರಿಗೆ ಮರಳಿದ ವಿದ್ಯಾರ್ಥಿಗಳು ತಮ್ಮ ಸಹಸದಸ್ಯರಿಗೂ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ತರಬೇತಿ ನೀಡಿದರು. ಹೀಗೆ ಆರಂಭವಾಯಿತು ವಿದ್ಯಾರ್ಥಿಗಳ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಘಟಕ.
ಪ್ರಸ್ತುತ ಮಂಗಳೂರಿನ ವಿವಿಧ ಕಾಲೇಜಿನ 34 ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಕಲ್ಪ ಟ್ರಸ್ಟ್ ಗೆ ಬಂದು ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುತ್ತಾರೆ. ಅಷ್ಟೇ ಅಲ್ಲದೇ ದಾನವಾಗಿ ಬಂದ ಬಟ್ಟೆಗಳಲ್ಲಿ ನಿರುಪಯುಕ್ತ ಜೀನ್ಸ್ ಪ್ಯಾಂಟ್ಗಳಿದ್ದರೆ ಅವುಗಳಿಂದ ಬ್ಯಾಗ್, ಕೀ ಚೈನ್, ಪರ್ಸ್ಗಳನ್ನು ತಯಾರಿಸುವ, ಚಿಂದಿ ಬಟ್ಟೆಗಳಿಂದ ಕಾಲು ಹಾಸುಗಳನ್ನು ತಯಾರಿಸುವ ಕೆಲಸ ಮಾಡುತ್ತಾರೆ. ಇದನ್ನೆಲ್ಲಾ ಗಿರಿಜನ ಹಾಡಿ, ಬುಡಕಟ್ಟು ಜನಾಂಗದ ಕುಗ್ರಾಮಗಳಲ್ಲಿ ವಿತರಿಸುತ್ತಾರೆ.
ಹಳೆ ಬಟ್ಟೆಗಳಿಗೆ ಹೊಸ ರೂಪ
ದಾನವಾಗಿ ಬಂದ ಬಟ್ಟೆಗಳಲ್ಲಿ ಕಾಟನ್ ಬಟ್ಟೆಗಳನ್ನು ಬೇರ್ಪಡಿಸಿ ಅವುಗಳನ್ನು ಬಿಸಿ ನೀರಿನಲ್ಲಿ ಒಗೆದು ಆಕಾರಕ್ಕೆ ತಕ್ಕಂತೆ ಕತ್ತರಿಸಿ ಹತ್ತಿಗಳನ್ನು ತುಂಬಿ ಸ್ಯಾನಿಟರಿ ನ್ಯಾಪ್ಕಿನ್, ಮಕ್ಕಳ ಡೈಪರ್ಗಳನ್ನು ತಯಾರಿಸುವ ಈ ವಿದ್ಯಾರ್ಥಿಗಳು ತಮ್ಮ ಉತ್ಪನ್ನಕ್ಕೆ ಸ್ವಾಸ್ಥ್ಯ ಎಂದು ಹೆಸರಿಟ್ಟಿದ್ದಾರೆ.
ರಾಜ್ಯದ 25ಕ್ಕೂ ಹೆಚ್ಚು ಗಿರಿಜನ ಕಾಲೋನಿಗಳಲ್ಲಿ ಈ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿತರಿಸಲಾಗುತಿದ್ದು ಸ್ವಸ್ಥ ಭಾರತದ ನಿರ್ಮಾಣಕ್ಕೆ ಈ ಕಲ್ಪ ಟ್ರಸ್ಟ್ ಹಾಗೂ ವಿದ್ಯಾರ್ಥಿಗಳು ತಮ್ಮ ಕೊಡುಗೆ ನೀಡುತ್ತಿದ್ದಾರೆ. ಸಮಾಜದ ಕುರಿತು ತಮ್ಮ ಜವಾಬ್ದಾರಿಯನ್ನು ಮೆರೆಯುತ್ತಿದ್ದು ಇತರರಿಗೂ ಮಾದರಿಯಾಗಿದ್ದಾರೆ.