ಭಾರತೀಯಳೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ: ಪ್ರತಿಭಾ ಕುಳಾಯಿ
ಮಂಗಳೂರು ಏಪ್ರಿಲ್ 16 : ಈ ದೇಶದಲ್ಲಿ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ಭಾರತೀಯಳು ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಹಿಂದೂಗಳಿಂದ ಮಹಿಳೆಯರಿಗೆ, ಮಕ್ಕಳಿಗೆ ಆತಂಕವಿದೆ. ಬಿಜೆಪಿ ಹಿಂದೂಗಳಿಂದ ಹೆಣ್ಣು ಮಕ್ಕಳನ್ನು ರಕ್ಷಿಸುವಲ್ಲಿ ಚೌಕಿದಾರ್ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾನು ಕೂಡ ಹಿಂದೂ. ಆದರೆ ಬಿಜೆಪಿ ಹಿಂದೂ ಅಲ್ಲ. ವಿಶ್ವದಲ್ಲಿ ಗಂಡು, ಹೆಣ್ಣು ಜಾತಿ ಮಾತ್ರ ಇರುವುದು. ಭಾರತ ಮಾತಾಕಿ ಜೈ ಅನ್ನುವವರಿಂದಲೇ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಅವರು ಕಿಡಿಕಾರಿದರು.

"ಮೋದಿ ಬೇಟಿ ಬಚಾವೋ ಅಂತಾರೆ. ಆದರೆ ಮೋದಿ ತನ್ನ ಪತ್ನಿಗೆ ಹಿಂಸೆ ಕೊಟ್ಟವರು. ಪತ್ನಿಯನ್ನೇ ದೂರ ಇಟ್ಟವರು ಪ್ರಧಾನಿ ಮೋದಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಮಹಿಳೆಯರ ಬಗ್ಗೆ ಕಾಳಜಿ ಇಲ್ಲ. ಅವರು ಜೋಗಿಯಾಗಿದ್ದಾರೆ," ಎಂದು ಕಿಡಿಕಾರಿದರು.
ಮೋದಿ ಹಾಗು ಯೋಗಿ ಅವರಿಗೆ ಹೆಣ್ಮಕ್ಕಳ ನೋವು ಅರ್ಥವಾಗಲ್ಲ. ಅವರಿಗೆ ಹೆಣ್ಣು ಮಕ್ಕಳೊಂದಿಗೆ ಇದ್ದು ಗೊತ್ತಿಲ್ಲ. ಕಳೆದ ಚುನಾವಣೆ ಸಂದರ್ಭದಲ್ಲಿ ನನ್ನ ಮನೆ ಎದುರು ಬಿಜೆಪಿ ಹಿಂದೂ ಕಾರ್ಯಕರ್ತರು ಎಂದು ಕರೆಸಿಕೊಳ್ಳುತ್ತಿರುವವರಿಂದ ದಾಂಧಲೆ ನಡೆದಿದೆ. ಮಂಗಳೂರಿನಲ್ಲಿ ಪಬ್ ದಾಳಿ, ಹೋಮ್ ಸ್ಟೇ ದಾಳಿ ನಡೆದಿದೆ. ನನಗೆ ನಾನು ಮಂಗಳೂರಿನವಳು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದರು .
ನಾನು ಕೂಡಾ ಬಿಜೆಪಿ ಹಿಂದೂಗಳಿಂದ ಹಿಂಸೆ ಅನುಭವಿಸಿದ್ದೇನೆ. ಅದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಯಾರು ರಕ್ಷಣೆ ಕೊಡುತ್ತಾರೆ ಅವರಿಗೆ ಮತ ಕೊಡಿ ಎಂದು ಅವರು ಒತ್ತಾಯಿಸಿದರು.
ಜಮ್ಮು- ಕಾಶ್ಮೀರದ ಕತುವಾದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ ಅವರು, ಸಂತ್ರಸ್ತ ಬಾಲಕಿಯ ಹೆಸರನ್ನು ನನ್ನ ಮಗಳ ಹೆಸರು ಪೃಥ್ವಿ ಜತೆ ಸೇರಿಸಿ ಕರೆಯುತ್ತೇನೆ ಎಂದು ಹೇಳಿದರು.












Click it and Unblock the Notifications