ಪೇಜಾವರ ಶ್ರೀ, ಭಾಗವತ್, ಕಲ್ಲಡ್ಕರಿಂದ ಹಿಂದೂ ಧರ್ಮ ಉಳಿದಿಲ್ಲ: ಮಟ್ಟು
ಮಂಗಳೂರು, ಆಗಸ್ಟ್ 28: ಪೇಜಾವರ ಶ್ರೀ, ಮೋಹನ್ ಭಾಗವತ್, ಕಲ್ಲಡ್ಕ ಪ್ರಭಾಕರ್ ಭಟ್ ಹಿಂದೂ ಧರ್ಮದ ಸುಧಾರಕರಾಗಿದ್ದಲ್ಲಿ ಅಸ್ಪೃಶ್ಯತೆ, ಮೂಢನಂಬಿಕೆಗಳ ವಿರುದ್ಧ ಯಾಕೆ ಮಾತನಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಪ್ರಶ್ನಿಸಿದ್ದಾರೆ.
ಮಂಗಳೂರು ಸಹೋದಯ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಡಿವೈಎಫ್ಐ ಮಂಗಳೂರು ನಗರ 11ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, "ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳಂಥವರಿಂದ ಹಿಂದೂ ಧರ್ಮ ಉಳಿದಿದೆ. ಪೇಜಾವರಶ್ರೀ, ಮೋಹನ್ ಭಾಗವತ್ ಅಥವಾ ಕಲ್ಲಡ್ಕ ಪ್ರಭಾಕರ ಭಟ್ ಅಂಥವರಿಂದ ಅಲ್ಲ. ಹಿಂದೂ ಅನ್ನುವುದು ಒಂದು ಧರ್ಮವಲ್ಲ, ಅದು ಜಾತಿಗಳ ಒಕ್ಕೂಟ," ಎಂದರು.

"ಇಂದು ದೇಶದಲ್ಲಿ ಹೊಸ ಭರವಸೆಯ ಬೆಳಕು ಕಾಣುತ್ತಿದೆ. ಅನೇಕ ಜನಪರ ಚಳವಳಿಗಳು ರೂಪುಗೊಳ್ಳುತ್ತಿವೆ. ಗುಜರಾತ್ನಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ತೀರ್ಪು ಮತ್ತು ಅತ್ಯಾಚಾರಿ ನಕಲಿ ಸ್ವಾಮಿಯ ವಿರುದ್ಧ ನ್ಯಾಯಾಲಯ ನೀಡಿದ ತೀರ್ಪು ಜನರನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಬೆಳಕಾಗಿ ಪರಿಣಮಿಸಿದೆ," ಎಂದು ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.
"ಕಮ್ಯೂನಿಸ್ಟರು ಹೋರಾಟದ ದಾರಿಯನ್ನು ಬದಲಿಸಿಕೊಳ್ಳಬೇಕು. ಕಮ್ಯೂನಿಸ್ಟರು ಒಂದು ಹೆಜ್ಜೆ ಮುಂದೆ ಹೋಗಬೇಕಿದೆ. ನಮಗೀಗ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಹೋರಾಟಗಳು ಬೇಕಾಗಿವೆ," ಎಂದು ಅಮೀನ್ ಮಟ್ಟು ನುಡಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಮಂಗಳೂರು ನಗರ ಉತ್ತರ ವಲಯ ಸಮಿತಿಯ ಅಧ್ಯಕ್ಷ ನವೀನ್ ಕೊಂಚಾಡಿ ವಹಿಸಿದ್ದರು. ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ , ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಉಪಸ್ಥಿತರಿದ್ದರು.












Click it and Unblock the Notifications