ಭಿಕಾರಿ ಸಿ ಟಿ ರವಿ ಕೋಟ್ಯಾಧಿಪತಿಯಾಗಿದ್ದು ಹೇಗೆ?
ಮಂಗಳೂರು, ಮೇ 6: ಮೂರು ಬಾರಿ ಸಚಿವನಾಗಿ ನಾನು ಸೇವೆ ಸಲ್ಲಿಸಿದ್ದೇನೆ. ನನ್ನ ಕುಟುಂಬವನ್ನು ಸಿ ಟಿ ರವಿ ಕುಟುಂಬದ ಜೊತೆ ಹೋಲಿಸಬೇಡಿ. ಭಿಕಾರಿಯಾಗಿದ್ದ ಸಿ ಟಿ ರವಿ ಕೋಟ್ಯಾಧಿಪತಿಯಾಗಿದ್ದು ಹೇಗೆ ಎಂದು ಮೊದಲು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಲಿ ಎಂದು ಅರಣ್ಯ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನನ್ನದು ಆಗರ್ಭ ಶ್ರೀಮಂತ ಕುಟುಂಬ. ಸಿ ಟಿ ರವಿಗೆ ತೊಡಲು ಬಟ್ಟೆಯಿರಲಿಲ್ಲ, ಈಗ ಆತ ಕೋಟ್ಯಾಧಿಪತಿ. ಹೇಗೆ ರವಿ ಇಷ್ಟು ದುಡ್ಡು ಸಂಪಾದನೆ ಮಾಡಿದರು ಎಂದು ಮೊದಲು ತಿಳಿಸಲಿ. ರವಿ, ಈಶ್ವರಪ್ಪ ಅವರಂತಹ ಭ್ರಷ್ಟ ವ್ಯಕ್ತಿಗಳಿಂದ ನೀತಿಪಾಠ ಕೇಳಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದು ರಮಾನಾಥ ರೈ ಗುಡುಗಿದ್ದಾರೆ. (ಪತ್ರಕರ್ತನಿಗೆ ಸಚಿವರ ಜೀವ ಬೆದರಿಕೆ)

ಪತ್ರಕರ್ತನಿಗೆ ಜೀವಬೆದರಿಕೆ ಪ್ರಕರಣದ ಬಗ್ಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮಾನಾಥ್ ರೈ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ರೈ, ನಾನು ಒಂದು ವಾರ ಊರಲ್ಲಿ ಇರಲಿಲ್ಲ. ಹಾಗಾಗಿ ಈ ಘಟನೆಯ ಬಗ್ಗೆ ನನಗೆ ಸ್ಪಷ್ಟ ಮಾಹಿತಿಯಿಲ್ಲ ಎಂದು ಪ್ರಶ್ನೆಗೆ ಉತ್ತರಿಸದೇ ಜಾರಿಕೊಂಡಿದ್ದಾರೆ.
ಸಚಿವ ಅಭಯಚಂದ್ರ ಜೈನ್ ಮಾತನಾಡುವಾಗ ವ್ಯತ್ಯಾಸವಾಗಿರಬಹುದು. ನಾನು ಈ ಬಗ್ಗೆ ಸಚಿವರ ಬಳಿ ಮಾತನಾಡಿ, ಮಾಹಿತಿ ಪಡೆದು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆಂದು ರಮಾನಾಥ್ ರೈ ಹೇಳಿದ್ದಾರೆ.
ಪತ್ರಕರ್ತನಿಗೆ ಜೀವಬೆದರಿಕೆ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದ ಮಾಜಿ ಸಚಿವ ಸಿ ಟಿ ರವಿ, ರೈ ಅವರು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು. ಅವರು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಬೇಕಾಗಿತ್ತು. ತಮ್ಮದೇ ಸಚಿವರ ಈ ವರ್ತನೆಯ ಬಗ್ಗೆ ರೈ ಅವರ ಬಳಿ ಉತ್ತರವಿಲ್ಲ. 'ರಮಾನಾಥ್ ರೈ ಹಠಾವೋ' ಆಂದೋಲನ ಮಾಡುತ್ತೇನೆ ಎಂದು ರವಿ ಹೇಳಿದ್ದರು.












Click it and Unblock the Notifications