ಮಂಗಳೂರು: ಬೈರಾಡಿಕೆರೆಯಲ್ಲಿ ಮೀನು ಹಿಡಿಯುವ ಸ್ಪರ್ಧೆ
ಮಂಗಳೂರು, ಆಗಸ್ಟ್ 06 : ಕೆರೆ ಸಂರಕ್ಷಣಾ ಸಮಿತಿಯ ಪರವಾಗಿ ಇಂದು ನಗರದ ಬೈರಾಡಿಕೆರೆಯಲ್ಲಿ ಸಾರ್ವಜನಿಕ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ನಗರದ ಬೈರಾಡಿ ಕೆರೆಯು ಶೀಘ್ರದಲ್ಲಿ 3 ಕೋಟಿ ರು. ವೆಚ್ಚದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಪೂರಕವಾಗಲಿದೆ. ಜತೆಗೆ ಇದು ಯುವಜನತೆಯಲ್ಲಿ ಉತ್ತಮ ಹವ್ಯಾಸ ಬೆಳೆಯಲು ಪ್ರೇರೇಪಣೆ ನೀಡಲಿದೆ ಎಂದರು.

ಕೆರೆ ಸಂರಕ್ಷಣಾ ಸಮಿತಿಯು ಹಲವು ವರ್ಷಗಳಿಂದ ಕೆರೆಯ ಸಂರಕ್ಷಣೆಯ ಕುರಿತು ವಿಶೇಷ ಕಾರ್ಯ ಮಾಡುತ್ತಿದೆ. ಜತೆಗೆ ಅಭಿವೃದ್ಧಿ ಸಮಿತಿಯನ್ನೂ ರಚಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಜನತೆ ಕೆರೆಯ ಕುರಿತು ಕಾಳಜಿ ವಹಿಸುತ್ತಾರೆ ಎಂದು ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ ಮಾತನಾಡಿ, ಮೀನು ಹಿಡಿಯುವುದು ಎಂಬುದು ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಸಂಸ್ಕೃತಿಯಾಗಿದೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಸಂರಕ್ಷಣಾ ಸಮಿತಿಯ ಪ್ರಯತ್ನ ಶ್ಲಾಘನೀಯ ಎಂದರು.
ಮೇಯರ್ ಕವಿತಾ ಸನಿಲ್ ಮಾತನಾಡಿ, ಯುವಕರು ಇಂತಹ ಒಳ್ಳೆಯ ಚಟುವಟಿಕೆಯ ಮೂಲಕ ದುಶ್ಚಟಗಳ ದಾಸರಾಗುವುದು ತಪ್ಪುತ್ತದೆ. ಮಹಿಳೆಯರು ಕೂಡ ಇದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವುದು ಅಗತ್ಯ ಎಂದರು.
ಸಂರಕ್ಷಣಾ ಸಮಿತಿಯ ಪ್ರಧಾನ ಸಂಚಾಲಕ ಡಾ. ಎಂ.ಅಣ್ಣಯ್ಯ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಕಾರ್ಪೊರೇಟರ್ ಪ್ರಕಾಶ್ ಬಿ, ಮುಡಾ ಸದಸ್ಯೆ ಶೋಭಾ ಕೇಶವ್, ಪ್ರಮುಖರಾದ ಸದಾನಂದ ನಾವರ, ಡೆನಿಸ್ ಡಿಸಿಲ್ವಾ, ಹೆನ್ರಿ ಪೆರಾವೊ ಉಪಸ್ಥಿತರಿದ್ದರು.












Click it and Unblock the Notifications