ಮಂಗಳೂರು: ಕಾಶಿ ಮಠದ ಮಠಾಧೀಶರ ವಿರುದ್ಧ ವಂಚನೆ ಪ್ರಕರಣ
ಮಂಗಳೂರು, ಮೇ 13: ಕಾಶಿ ಮಠದ ಸ್ವಾಮೀಜಿಗಳ ನಡುವಿನ ಹಗೆತನ ಮತ್ತೆ ಹೊತ್ತಿಕೊಂಡಿದೆ. ಕಾಶಿ ಮಠದ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ವಿರುದ್ಧ ಮಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಇನ್ನೊಬ್ಬರ ಹೆಸರಲ್ಲಿದ್ದ ಎಫ್.ಡಿ ಖಾತೆಯ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿದ ಆರೋಪದಡಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ವಿರುದ್ಧ ಕೇಸು ದಾಖಲಾಗಿದೆ. ಆದರೆ, ಪ್ರಕರಣದ ಹಿಂದೆ ಇಬ್ಬರು ಸ್ವಾಮೀಜಿಗಳ ಹಗೆತನ ಕೆಲಸ ಮಾಡಿದೆ ಎನ್ನಲಾಗುತ್ತಿದೆ.
ಸಮಾಜದಲ್ಲಿ ಅನುಕರಣೀಯ ನೆಲೆಯಲ್ಲಿ ಜೀವನ ಸಾಗಿಸಿ ನ್ಯಾಯ ನೀತಿಗೆ ಬದ್ದರಾಗಿ ಪೂಜ್ಯರೆನಿಸಿಕೊಳ್ಳುವ ಸ್ವಾಮೀಜಿಗಳೇ ಈಗ ನ್ಯಾಯದ ಕಟಕಟೆಗೆ ಬರತೊಡಗಿದ್ದಾರೆ. ಗೌಡ ಸಾರಸ್ವತ ಸಮಾಜ ಪರಮೋಚ್ಛ ಮಠ, ವಾರಾಣಸಿಯ ಕಾಶಿ ಮಠದ ಮಠಾಧೀಶ ಸಂಯಮೀಂದ್ರ ತೀರ್ಥರ ವಿರುದ್ಧ ಮಂಗಳೂರಿನ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಅದಕ್ಕೆ ಕಾರಣವಾಗಿದ್ದು, ಮಠದ ಹಳೇ ಸ್ವಾಮೀಜಿ ನೀಡಿರುವ ದೂರು.

ಕಾಶಿ ಮಠದಲ್ಲಿ ಈ ಹಿಂದಿನ ಸ್ವಾಮೀಜಿಯಾಗಿದ್ದ ದಿವಂಗತ ಸುಧೀಂದ್ರ ತೀರ್ಥರ ಉತ್ತರಾಧಿಕಾರಿಯಾಗಿ 1994ರಲ್ಲಿ ದೀಕ್ಷೆ ಪಡೆದಿದ್ದ ರಾಘವೇಂದ್ರ ತೀರ್ಥರು ಮತ್ತು ಈಗಿನ ಸ್ವಾಮೀಜಿ ಸಂಯಮೀಂದ್ರ ತೀರ್ಥರ ನಡುವಿನ ತಗಾದೆಯಿದು. ರಾಘವೇಂದ್ರ ತೀರ್ಥರು 1999ರಲ್ಲಿ ಫೆಬ್ರವರಿ ತಿಂಗಳಲ್ಲಿ ಸುರತ್ಕಲ್ ನ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ 10 ಲಕ್ಷ ರೂಪಾಯಿ ಎಫ್ ಡಿ ಇಟ್ಟಿದ್ದರು.
ಆದರೆ, 1999ರ ಜೂನ್ ತಿಂಗಳಲ್ಲಿ ರಾಘವೇಂದ್ರ ಉತ್ತರಾಧಿಕಾರಿ ಪಟ್ಟದಿಂದ ಉಚ್ಚಾಟಿತಗೊಂಡ ಕಾರಣ ಈ ಹಣದ ವಹಿವಾಟಿಗೆ ಬ್ರೇಕ್ ಬಿದ್ದಿತ್ತು. ಬಳಿಕ ಕೋರ್ಟಿನಲ್ಲಿಯೂ ಯಥಾಸ್ಥಿತಿ ಕಾಪಾಡುವಂತೆ ಆದೇಶ ಬಂದಿತ್ತು. ಆದರೆ, ಎರಡು ವರ್ಷಗಳ ಹಿಂದೆ ಹೊಸ ಉತ್ತರಾಧಿಕಾರಿಯಾಗಿ ಬಂದ ಸಂಯಮೀಂದ್ರ ತೀರ್ಥರು ಇದೀಗ ಹಳೆ ಖಾತೆಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ರಾಘವೇಂದ್ರ ತೀರ್ಥರ ಹೆಸರಲ್ಲಿ ಸುರತ್ಕಲ್ ಶಾಖೆಯಲ್ಲಿದ್ದ ಹತ್ತು ಲಕ್ಷ ರೂಪಾಯಿ ಮೌಲ್ಯ ಈಗ 40 ಲಕ್ಷ ಕ್ಕೆ ಏರಿಕೆಯಾಗಿದ್ದು, ಅದನ್ನು ಲಪಟಾಯಿಸಲು ಯತ್ನಿಸಿದ್ದಾರೆ. ಈ ಬಗ್ಗೆ ರಾಘವೇಂದ್ರ ತೀರ್ಥರು ಬ್ಯಾಂಕಿನ ಮ್ಯಾನೇಜರ್ ಸಹಿತ ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಗೌಡ ಸಾರಸ್ವತ ಸಮಾಜದ ಲಕ್ಷಾಂತರ ಭಕ್ತರು ದೇವರಂತೆ ನಂಬುವ ಸಂಯಮೀಂದ್ರ ತೀರ್ಥರ ವಿರುದ್ಧ ಈಗ ಕೇಸು ದಾಖಲಾಗಿದ್ದು, ಬಂಧನ ಭೀತಿ ಎದುರಿಸುವಂತಾಗಿದೆ ಎಂದು ಹೇಳಲಾಗಿದೆ. ಮತ್ತೋಬ್ಬರ ಹೆಸರಲ್ಲಿದ್ದ ಹಣವನ್ನು ಲಪಟಾಯಿಸುವುದು ಅಪರಾಧ ಆಗಿದ್ದು, ಕೆಲವರ ಪಿತೂರಿಯಿಂದಾಗಿ ಸ್ವಾಮೀಜಿ ಬಲೆಗೆ ಬಿದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರು ಸ್ವಾಮೀಜಿಗಳ ಗಲಾಟೆಯಲ್ಲಿ ಪೊಲೀಸರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.
ಈ ಘಟನೆಯನ್ನು ಮಠವು ತೀವ್ರವಾಗಿ ಖಂಡಿಸಿದ್ದು, ಸ್ವಾಮೀಜಿಗಳ ವಿರುದ್ಧ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಹೇಳಿದೆ. ಶ್ರೀ ಮಠ ಹಾಗೂ ಶ್ರೀ ಸಂಯಮೀಂದ್ರ ಸ್ವಾಮೀಜಿಯವರ ವಿರುದ್ಧ ನಡೆಸುತ್ತಿರುವ ಈ ಷಡ್ಯಂತ್ರದ ಬಗ್ಗೆ ಯಾರೂ ಕೂಡ ಯಾವುದೇ ಗೊಂದಲಕ್ಕೀಡಾಗಬೇಕಾಗಿಲ್ಲ ಮತ್ತು ಈ ಬಗ್ಗೆ ಎಲ್ಲ ರೀತಿಯ ಪೂರಕ ದಾಖಲೆಗಳನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಲಾಗಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications