ದಕ್ಷಿಣ ಕನ್ನಡದಲ್ಲಿ ಭೂ ಕುಸಿತದ ಜೊತೆ ಭೂಕಂಪದ ಭಯ ಆರಂಭ
ಮಂಗಳೂರು, ಆಗಸ್ಟ್ 19: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಪ್ರಳಯ ದೃಶ್ಯಗಳನ್ನು ಸೃಷ್ಠಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೋಡ ನೋಡುತ್ತಿದ್ದಂತೆ ಗುಡ್ಡಗಳೇ ಕುಸಿದು ಜಾರುತ್ತಿವೆ.
ದಕ್ಷಿಣ ಕನ್ನಡ ಗಡಿ ಭಾಗದ ಸಂಪಾಜೆ ಸಮೀಪದ ಬ್ರಹ್ಮಗಿರಿ ಬೆಟ್ಟ ಬಿರುಕು ಬಿಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದ ತುದಿಯಿಂದ ಮಣ್ಣು ಕೆಳಕ್ಕೆ ಜಾರತೊಡಗಿದೆ. ಪರಿಣಾಮ ಬೆಟ್ಟದ ತಪ್ಪಲಲ್ಲಿರುವ ಮಕ್ಕಂದೂರು, ಮದೆನಾಡು ಗ್ರಾಮ ಮನೆಗಳು ಧ್ವಂಸಗೊಂಡಿವೆ. ಗ್ರಾಮದ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಈ ನಡುವೆ ಸುಳ್ಯದ ಕೂಜುಮಲೆ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಭೂಕಂಪದ ಭಯ ಆರಂಭವಾಗಿದೆ. ಕೂಜುಮಲೆ ಬೆಟ್ಟದಲ್ಲಿ ಕೇಳಿಬಂದಿದೆ ಎನ್ನಲಾದ ಭಾರೀ ಸ್ಫೋಟದ ಸದ್ದು ಇದಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಕಲ್ಮಕಾರು ಎಂಬಲ್ಲಿನ 4 ಕುಟುಂಬಗಳು ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿದೆ. ಕೂಜುಮಲೆ ಅರಣ್ಯದ ಕೋಡಗು ಗಡಿಭಾಗದ ಮಾಯಿಲ ಕೋಟೆ ಎಂಬಲ್ಲಿ ಕೂಡ ಶನಿವಾರ ಮಧ್ಯಾಹ್ನದ ವೇಳೆ ಭಾರೀ ಸ್ಫೋಟದ ಶಬ್ದ ಕೇಳಿ ಬೆದರಿದ ಜನರು ಪಲಾಯನ ಮಾಡಿದ್ದಾರೆ.
ಸುಳ್ಯ ಪೊಲೀಸರ ನೇತೃತ್ವದಲ್ಲಿ ಬಾಳುಗೋಡು ಗ್ರಾಮದ 30ಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರಿಲಾಗಿದೆ.
ಕೂಜುಮಲೆ ಅರಣ್ಯ ಪ್ರದೇಶದಿಂದ ಬುಡ ಸಮೇತ ಮರಗಳು ಕಿತ್ತು ಬರುತ್ತಿವೆ. ಅರಣ್ಯದಿಂದ ತಪ್ಪಲ ಹಳ್ಳಿಗಳ ಮೇಲೆ ಭೂ ಕುಸಿತವಾಗುವ ಭಯ ಸೃಷ್ಟಿಯಾಗಿದೆ. ಮಾನಡ್ಕ, ಅಡ್ಕರ್ ಕಲ್ಮಮಾರು ಬಾಳುಗೋಡು ಗ್ರಾಮಗಳು ಸಂಕಷ್ಟದಲ್ಲಿವೆ.
ಈ ನಡುವೆ ಮರ್ಕಂಜದ ಮಾವಜಿ ಗುಡ್ಡದಲ್ಲೂ ಬಿರುಕು ಕಂಡುಬಂದಿದೆ. ಗುಡ್ಡದ ಕೆಳಭಾಗದಲ್ಲಿರುವ ಮೂರು ಮನೆಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ.












Click it and Unblock the Notifications