ಮಂಗಳೂರು; ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ
ಮಂಗಳೂರು, ಜೂನ್ 23; ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ತಂದೆಯೂ ಆತ್ಮಹತ್ಯೆ ಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ನಡೆದಿದೆ.
ಕೊಲೆಯಾದ ವಿದ್ಯಾರ್ಥಿಯನ್ನು 9ನೇ ತರಗತಿ ಓದುತ್ತಿದ್ದ ಸ್ವಾತಿಕ್ (15) ಎಂದು ಗುರುತಿಸಲಾಗಿದೆ. ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಯ ಸಮೀಪ ಭಜನಾ ಮಂದಿರದ ಬಳಿಯ ನಿವಾಸಿ ಬಾಬು ನಾಯ್ಕ (58) ಮಗನನ್ನು ಕೊಂದು ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಬುನಾಯ್ಕ ಹೆಂಡತಿ ಮತ್ತು ಮಗನೊಂದಿಗೆ ಮನೆಯಲ್ಲಿ ವಾಸವಾಗಿದ್ದು, ಕುಡಿತದ ಚಟ ಹೊಂದಿದ್ದ. ಕೆಲ ದಿನಗಳಿಂದ ಮನೆಯಲ್ಲಿ ಮಗನೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುತ್ತಿದ್ದ. ಬಾಬು ನಾಯ್ಕ್ ಪತ್ನಿ ಗೋಡಂಬಿ ಫ್ಯಾಕ್ಟರಿಗೆ ಕೆಲಸಕ್ಕೆ ತೆರಳಿದ್ದು, ಈ ವೇಳೆ ಮತ್ತೆ ಮಗನೊಂದಿಗೆ ಗಲಾಟೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ಬಾಬು ನಾಯ್ಕ ಮನೆಯ ಪಕ್ಕಾಸಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಬು ನಾಯ್ಕ ಕುಡಿತದ ದಾಸನಾಗಿದ್ದು, ಕೆಲ ಸಮಯ ಹೆಂಡತಿ, ಮಗ ಬಾಬು ನಾಯ್ಕನೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಬಳಿಕ ಸಂಬಂಧಿಕರು ಕುಟುಂಬದ ಜೊತೆ ಮಾತುಕತೆ ನಡೆಸಿ ರಾಜಿ ಮಾಡಿದ್ದರು.
ಆದರೆ ಈಗ ಮಗನನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಂಜಾಲಕಟ್ಟೆ ಪೊಲೀಸ್ ಅಧಿಕಾರಿ ಸೌಮ್ಯ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಪುಂಜಾಲ ಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications