ಪಾಲಿಕೆಗೆ ಫಜೀತಿ ತಂದ ವಾಟ್ಸಪ್ ಸಂದೇಶ!
ಮಂಗಳೂರು, ಮೇ 29 : ವಾಟ್ಸಪ್ ಮೂಲಕ ಹರಿದಾಡುತ್ತಿರುವ ನಕಲಿ ಸಂದೇಶವೊಂದು ಮಂಗಳೂರು ಮಹಾನಗರ ಪಾಲಿಕೆಗೆ ಪಜೀತಿ ತಂದಿಟ್ಟಿದೆ. ಬಹುಮಾನ ಪಡೆಯಲು ಅರ್ಜಿ ಕೊಡಿ ಎಂದು ಪೋಷಕರು ಪಾಲಿಕೆ ಕಚೇರಿಗೆ ಆಗಮಿಸುತ್ತಿದ್ದು, ಅವರಿಗೆ ಉತ್ತರ ಹೇಳಲು ಪಾಲಿಕೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಪಿಯುಸಿಯಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮಂಗಳೂರು ಮಹಾನಗರ ಪಾಲಿಕೆ ನಗದು ಬಹುಮಾನ ನೀಡುತ್ತಿದೆ ಎಂಬುದು ವಾಟ್ಸಪ್ ಸಂದೇಶ. ಇದಕ್ಕೆ ಅಗತ್ಯವಿರುವ ಅರ್ಜಿ ಪಾಲಿಕೆ ಕಚೇರಿಯಲ್ಲಿ ದೊರೆಯುತ್ತಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. [ಮಂಗಳೂರು ಪಾಲಿಕೆ ಬಜೆಟ್ ಮುಖ್ಯಾಂಶಗಳು]

ಕಳೆದ ಮೂರು ದಿನಗಳಿಂದ ಈ ಸಂದೇಶ ಹಲವು ವಿದ್ಯಾರ್ಥಿಗಳು ಮತ್ತು ಪೋಷಕರ ಮೊಬೈಲ್ಗೆ ಹರಿದಾಡುತ್ತಿದೆ. ಸಂದೇಶ ನೋಡಿದ ಜನರು ಅರ್ಜಿ ಕೊಡಿ ಎಂದು ಪಾಲಿಕೆ ಕಚೇರಿಗೆ ಆಗಮಿಸುತ್ತಿದ್ದಾರೆ. ನಾವು ಯಾವ ಬಹುಮಾನ ಘೋಷಿಸಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಜನರನ್ನು ಸಮಾಧಾನ ಪಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. [ಮಂಗಳೂರು ಪಾಲಿಕೆ ಆಯುಕ್ತರಿಗೆ ಗನ್ಮ್ಯಾನ್ ಭದ್ರತೆ!]
ನಕಲಿ ಸಂದೇಶ ಅಂದ್ರು ಮೇಯರ್ : ಸಂದೇಶದ ಬಗ್ಗೆ ಸ್ಪಷ್ಟನೆ ಕೇಳಲು ಒನ್ ಇಂಡಿಯಾ ಪಾಲಿಕೆ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್ ಅವರಿಗೆ ಕರೆ ಮಾಡಿದಾಗ, ಇದು ನಕಲಿ ಸಂದೇಶ ಮಹಾನಗರ ಪಾಲಿಕೆ ಯಾವುದೇ ಬಹುಮಾನ ಘೋಷಿಸಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ, ಪಾಲಿಕೆ ನಕಲಿ ಸಂದೇಶದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಆದ್ದರಿಂದ ಇಂದು ಸಹ ಹಲವಾರು ಮೊಬೈಲ್ಗಳಲ್ಲಿ ಈ ಸಂದೇಶ ಹರಿದಾಡುತ್ತಿದ್ದು, ಜನರ ಗೊಂದಲಕ್ಕೆ ಕಾರಣವಾಗಿದೆ.












Click it and Unblock the Notifications