ವಿಶ್ಲೇಷಣೆ : ಯಾರ ಕಡೆ ದಕ್ಷಿಣ ಕನ್ನಡಿಗರ ಒಲವು?
ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡದಲ್ಲಿ ಲೋಕಸಭಾ ಕ್ಷೇತ್ರ ಭರ್ಜರಿ ಪೈಪೋಟಿಗೆ ಸಾಕ್ಷಿಯಾಗಲಿದೆ. ಹಿಂದೂತ್ವದ ಪ್ರಯೋಗಶಾಲೆ ಎಂದೇ ಕರೆಯಲ್ಪಡುತ್ತಿರುವ ಇಲ್ಲಿ ಈ ಸಾರಿ ಹಳೇ ಮುಖಗಳೇ ಕಣಕ್ಕಿಳಿದಿದ್ದು. ಕೈ ಪಾಳಯದ ಜನಾರ್ಧನ ಪೂಜಾರಿ ಹಾಗೂ ಹಾಲಿ ಸಂಸದ ಬಿಜೆಪಿಯ ನಳಿನ್ ಕುಮಾರ್ ಕಟೀಲರ ಮಧ್ಯೆ ದ್ವಿಕೋನ ಸ್ಪರ್ಧೆ ನಡೆಯಲಿದೆ.
ಹಾಗೆ ಈಬಾರಿಯ ಚುನಾವಣೆಗೆ ಇಲ್ಲಿ ಪ್ರಮುಖವಾಗಿ ನಡೆದಂತಹ ಸಿಹಿ-ಕಹಿ ಘಟನೆಗಳೇ ಮುನ್ನುಡಿಯಾಗಲಿದೆ. ಇತ್ತೀಚಿನ ನೇತ್ರಾವತಿ ತಿರುವು ವಿವಾದ, ಅಡಿಕೆ ನಿಷೇದದ ಪ್ರಸ್ತಾಪ. ಸೌಜನ್ಯ ಪ್ರಕರಣ, ಕೋಮುಗಲಭೆ ಮುಂತಾದವು. ಇದಕ್ಕೆ ಹಾಲಿ ಮತ್ತು ಮಾಜಿಗಳು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಅನ್ನೋದು ಈ ಬಾರಿಯ ಫಲಿತಾಂಶ ಪ್ರತಿಫಲಿಸಲಿದೆ. 1991ರ ತನಕ ಕೈ ಭದ್ರ ಕೋಟೆಯಾಗಿದ್ದ ಈ ಕ್ಷೇತ್ರಕ್ಕೆ ತದ ನಂತರ ಬಿಜೆಪಿ ಲಗ್ಗೆ ಹಾಕಿತು. ಅಲ್ಲಿಂದ ಇಲ್ಲಿ ತನಕ ಬಿಟ್ಟು ಕೊಟ್ಟಿಲ್ಲ. ದನಂಜಯ ಕುಮಾರ್, ಡಿವಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಇಲ್ಲಿನ ಮುಂದುವರಿದ ಸಂಸದರು.
ಇಲ್ಲಿ ಗಮನಿಸಬೇಕಾದ ಒಂದು ವಿಚಾರವೆಂದರೆ, ಬಿಜೆಪಿ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರವನ್ನೊಂದು ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳನ್ನು ಕೈ ವಶಪಡಿಸಿಕೊಂಡಿತು. ದಕ್ಷಿಣ ಕನ್ನಡದ ಇತಿಹಾಸದಲ್ಲೇ ಇದು ನಂಬಲಾರದ ಫಲಿತಾಂಶ. ಇದಕ್ಕೆ ಕಾರಣ ವಿಶ್ಲೇಷಿಸಿದಾಗ, ಮೊದಲನೆಯದಾಗಿ ಬಿಜೆಪಿ ಸರ್ಕಾರದ ಕಳಪೆ ಆಡಳಿತ ಮತ್ತು ಅಲ್ಲಿ ಜನ ನಾಯಕರು ಕಾನೂನು ಸುವ್ಯವಸ್ತೆ ಕಾಪಾಡಿಕೊಳ್ಳಲು ವಿಫಲ ಆಗಿರೋದು. ಬಿಜೆಪಿ ನಾಯಕರು ಸಂಘ ಪರಿವಾರವನ್ನು ಕಡೆಗಣಿಸಿದ್ದು ಕೂಡ ಒಂದು ಮೂಲ ಕಾರಣವೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಗಾಳಿ ಎತ್ತ ಬೀಸುತ್ತಿದೆ? : ವಿಶೇಷವಾಗಿ ಇಲ್ಲಿ ಸಂಘ ಪರಿವಾರ ಮತ್ತು ಪರಿವಾರ ಯುವಕರೇ ಬಿಜೆಪಿ ಗೆಲುವಿನ ರೂವಾರಿಗಳು. ಆದರೆ ಹೋಮ್ ಸ್ಟೇ ದಾಳಿ ಆದಾಗ ಆಗಿನ ಸರ್ಕಾರ ಪರಿವಾರ ಕಾರ್ಯಕರ್ತರ ಜೊತೆ ನಡೆದುಕೊಂಡ ರೀತಿ ನಿಜಕ್ಕೂ ಬಿಜೆಪಿಯನ್ನು ಅಧಿಕಾರದಿಂದ ತಿರಸ್ಕರಿಸಲ್ಪಟ್ಟಿತು. ಲೋಕಸಭಾ ಚುನಾವಣೆಯನ್ನು ಗಮನಿಸಬೇಕಾದರೆ ಇಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಅನ್ನೋದು ಸ್ಪಷ್ಟ. ಬದಲಾವಣೆಗಿಂತ ಇಲ್ಲಿಯವರಿಗೆ ಇದು ಅನಿವಾರ್ಯ ಅಂದರೂ ತಪ್ಪಿಲ್ಲ. ವಿಧಾನಸಭಾ ಗೆಲುವಿನಂತೆ ಈ ಬಾರಿಯೂ ಗೆಲುವು ನಮ್ಮದೇ ಎಂದು ಕಾಂಗ್ರೆಸ್ ಭಾವಿಸಿದೆ. ಹಾಗೂ ಸತತ ಗೆಲುವು ಕಂಡ ಬಿಜೆಪಿ ಅತಿ ವಿಶ್ವಾಸದಿಂದ ಬೀಗುತ್ತಿದೆ. ಆದರೆ ಜನರ ಮಾತಿನಂತೆ ಕಳೆದ ವಿಧಾನಸಭಾ ಚುನಾವಣಾ ಪಲಿತಾಂಶ ಇಲ್ಲಿನ ಜಡ್ಡು ಹಿಡಿದ ಬಿಜೆಪಿಗೆ ನೀಡಿದ ಶಾಕ್ ಅಷ್ಟೇ ಅನ್ನೋದು ಜನ ನುಡಿ. ಇಲ್ಲಿ ಅವರಿಗೆ ಬಿಜೆಪಿಗೆ ಪರ್ಯಾಯವಾಗಿ ಉಳಿದಿರೋದು ಕಾಂಗ್ರೆಸ್ ಮಾತ್ರ. ಅದಕ್ಕೆ ಬೇಸತ್ತ ಜನ ಕೈ ಹಿಡಿದರು ಅನ್ನೋದು ಬೇರೆ ಮಾತು.
ಪೂಜಾರಿಗೆ ಕೊನೆ ಚುನಾವಣೆ : ಹಳೇ ಹುಲಿ, ಸತತ ಸೋಲಿನ ಸರದಾರ, ಆಂತರಿಕ ಚುನಾವಣೆಯಲ್ಲಿ ಗೆದ್ದು ಸೀಟ್ ಗಿಟ್ಟಿಸಿಕೊಂಡ ಜನಾರ್ಧನ ಪೂಜಾರಿಗೆ ಇದು ಕೊನೆಯ ಚುನಾವಣೆ. ಮಾಡು ಇಲ್ಲವೇ ಮಡಿ ಪರಿಸ್ಥಿತಿ. ವ್ಯಕ್ತಿತ್ವದಲ್ಲಿ ಉತ್ತಮ ವ್ಯಕ್ತಿಯಾದರೂ ಅವರು ಇತ್ತೀಚೆಗೆ ನಡೆದುಕೊಂಡ ರೀತಿ ವಿಚಿತ್ರ. ಸಾಮಾಜಿಕ ಸುಧಾರಣೆ ಎಂದು ಇತ್ತೀಚೆಗೆ ಮಾಡಿದ ಆವಾಂತರ ನಿಮಗೆ ನೆನಪಿರಬಹುದು. ಇದು ಇಲ್ಲಿನ ಜನರ ಭಾವನೆಗಳಿಗೆ ನೀಡಿದ ಮೊದಲ ಕೊಡಲಿ ಏಟು. ಮತಕ್ಕಾಗಿ ಒಂದು ಸಮುದಾಯವನ್ನೇ ಓಲೈಸುವ ಗೀಳು ಹತ್ತಿಸಿಕೊಂಡಿರುವ ಇವರು ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ ಅನ್ನೋದು ಇವರ ಆತ್ಮೀಯರದೇ ಅಭಿಪ್ರಾಯ.
ದಕ್ಷಿಣ ಕನ್ನಡದ ಕಾಂಗ್ರೆಸ್ನಲ್ಲಿ ಮೊಯಿಲಿ ಕುಟುಂಬ ಮತ್ತು ಪೂಜಾರಿ ಮಧ್ಯೆ ನಡೆದ ಶೀತಲ ಸಮರ ಕಾಂಗ್ರೆಸ್ಗೆ ಮುಳ್ಳಾಗುವ ಸಾಧ್ಯತೆಗಳಿವೆ. ಅದರಂತೆ ಮೊಯಿಲಿ, ಪೂಜಾರಿ, ಕನಚ್ಚೂರ್ ಮೋನು ಎಂಬ ಮೂರು ಬಣಗಳು ನಿರ್ಮಾಣವಾಗಿದ್ದು ಬಂಡಾಯದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇವರ ಪ್ಲಸ್ ಮಾರ್ಕ್ ಅಂದರೆ, ಬಿಜೆಪಿಯ ಹಾಲಿ ಸಂಸದರ ವರ್ತನೆಯಿಂದ ಬೇಸತ್ತ ಬಿಲ್ಲವ ಸಮುದಾಯ ಜನಾರ್ಧನ ಪೂಜಾರಿಯವರಿಗೆ ಜೈ ಅಂದಿರೋದು ಮತ್ತು ಮತದಾರರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಲು ಯಶಸ್ವಿಯಾಗಿದ್ದು. ಸಂಘಪರಿವಾರದಲ್ಲಿ ಇದ್ದ ಯುವ ಬಿಲ್ಲವರು ಜನಾರ್ಧನ ಪೂಜಾರಿ ಪರ ಇರೋದು ಇದಕ್ಕೊಂದು ಉಧಾಹರಣೆ.
ಬಿಜೆಪಿಗೆ ಮೋದಿ ನಾಮ ಆಸರೆ : ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಭಿವೃದ್ದಿಯ ವಿಚಾರದಲ್ಲಿ ಹಿಂದೆ ಬಿದ್ದಿದ್ದರೂ ಮತದಾರ ಈ ಸಾರೀನೂ ಅವರಿಗೆ ಮಣೆ ಹಾಕುವ ಲಕ್ಷಣಗಳು ನಿಚ್ಚಳವಾಗಿದೆ. ಅದಕ್ಕೆ ಪೂರಕವಾಗಿ ಅರಬ್ಬೀ ಅಲೆಯಂತೆ ಬೀಸುತಿರುವ ಮೋದಿ ಅಲೆ ಮತ್ತು ಬಿಜೆಪಿಗೆ ಪರೋಕ್ಷವಾಗಿ ಬೆಂಬಲಕ್ಕಿರುವ ನಮೋ ಬ್ರಿಗೇಡ್. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿಯೇ ಸಿದ್ದ ಅನ್ನೋ ಬ್ರಿಗೇಡ್ ಹುಡುಗರ ಗುಂಪು ಬಿಜೆಪಿ ಪಾಲಿಗೆ ವರದಾನವಾಗಿದೆ. ಆದರೆ ನಳಿನ್ ಕುಮಾರ್ ಕಟೀಲ್ ಸ್ಪರ್ಧೆಗೆ ಸ್ವಪಕ್ಷ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದ್ದು ವಿರೋಧದ ಮಧ್ಯೆಯೇ ಕಣಕ್ಕೆ ಇಳಿದ್ದಿದ್ದಾರೆ. ಬಿಜೆಪಿ ಬಳಿ ಈ ಬಾರಿ ಮತದಾರರ ಬಳಿ ಹೋಗಲು ಇರುವ ಒಂದೇ ಅಸ್ತ್ರ ಎಂದರೆ ಅದು ನರೇಂದ್ರ ಮೋದಿ. ಆರ್.ಎಸ್.ಎಸ್ ಪ್ರಭಾಕರ ಭಟ್ ಇಲ್ಲಿನ ಬಿಜೆಪಿಗೆ ಬೆನ್ನೆಲುಬು. [ದೇವಸ್ಥಾನಗಳಿಗೆ ಕಟೀಲ್ ಟೂರ್]
ಸಮಸ್ಯೆಗಳು ಹಲವಾರು : ಕ್ಷೇತ್ರದಲ್ಲಿ ಇತ್ತೀಚೆಗೆ ರಾಜ್ಯವನ್ನೇ ತಲ್ಲಣಗೊಳಿಸಿದ ಸೌಜನ್ಯ ಕೊಲೆ ಪ್ರಕರಣದಲ್ಲಿ ಬಿಜೆಪಿ ಕಾಂಗ್ರೆಸ್ ಎರಡು ಪಕ್ಷಗಳು ವಿರೋಧಿ ಪಾಳಯದಲ್ಲಿದ್ದವು. ಇದು ಸಹಜವಾಗಿ ಜನರನ್ನು ಕೆರಳಿಸಿತ್ತು. ಸ್ವತಃ ನಳಿನ್ ಕುಮಾರ್ ಮತ್ತು ಜನಾರ್ಧನ ಪೂಜಾರಿ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಅನ್ನೋ ಆರೋಪ ಇದೆ. ಆವಾಗ ಸೌಜನ್ಯ ಪರವಾಗಿ ದ್ವನಿ ಎತ್ತಿದ ಏಕೈಕ ಪಕ್ಷ ಅಂದರೆ ಸಿಪಿಎಂ. ಇದರ ಪರಿಣಾಮವಾಗಿ ಬೆಳ್ತಂಗಡಿ, ಪುತ್ತೂರು ಪರಿಸರದ ಕೆಲ ಮತಗಳು ಈ ಪಕ್ಷದತ್ತ ಹರಿಯಲೂಬಹುದು. ಹಾಗೆ ಅಡಿಕೆಯ ನಿಷೇಧದ ಪ್ರಸ್ತಾಪ. ಈ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ಕೊಡುವ ಜನಪ್ರತಿನಿಧಿಗಳು. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಅವರಿಗೆ ಬೇಕಾಗಿರೋದು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ. ಹಾಗೆಯೆ ಜೀವನದಿ ನೇತ್ರಾವತಿ ತಿರುವು ಯೋಜನೆ ಇತ್ತೀಚಿನ ದಕ್ಷಿಣ ಕನ್ನಡದ ಟ್ರೆಂಡ್. ಇದರಿಂದ ದಕ್ಷಿಣ ಕನ್ನಡಕ್ಕೆ ತೊಂದರೆ ಇಲ್ಲ ಅಂತ ಬೊಬ್ಬಿರಿದ ಬಿಜೆಪಿ, ಕಾಂಗ್ರೆಸ್ಸ್ ಎರಡು ಪಕ್ಷಗಳು ಜನರ ಕೆಂಗಣ್ಣಿಗೆ ಗುರಿಯಾಗಿವೆ. ಇದು ಚುನಾವಣೆಯಲ್ಲಿ ಯಾವ ರೀತಿಯ ತಿರುವು ನೀಡಬಲ್ಲದು ಅನ್ನೋದು ಅಗೋಚರ. ಇಲ್ಲಿನ ಪ್ರಮುಖ ಉದ್ಯಮ ಮೀನುಗಾರಿಕೆಗೆ ಸರಿಯಾದ ಸೌಲಭ್ಯ ನೀಡಲು ಉತ್ಸಾಹ ತೋರದ ಹಾಲಿ ಸಂಸದರಿಗೆ ಮೊಗವೀರರು ಎದುರಾಗೋ ಸಾಧ್ಯತೆಯಿದೆ. ಉಳಿದ ಪಕ್ಷಗಳಾದ ಆಮ್ ಆದ್ಮಿ ಪಕ್ಷ ಮತ್ತು ಜೆಡಿಎಸ್ ಆಟಕ್ಕುಂಟು ಲೆಕ್ಕಕಿಲ್ಲ.
ಅಭಿವೃದ್ಧಿ ಹರಿಕಾರರು ಗೆದ್ದುಬರಲಿ : ಸಂಸದರು ಯಾರೇ ಆಯ್ಕೆ ಆಗಲಿ. ಆದರೆ ತುಳು- ಕನ್ನಡಿಗರ ಹಿತ ಕಾಯುವ ವ್ಯಕ್ತಿ ಆಯ್ಕೆಯಾಗಲಿ ಅನ್ನೋದೇ ಎಲ್ಲರ ಆಶಯ. ಇಲ್ಲಿನ ಜನರ ನೆಮ್ಮದಿ ಕಸಿಯುವ ಮೂಲ ಸಮಸ್ಯೆ ಕೋಮುಗಲಭೆ. ಇದನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಬೇಕು. ಹಾಗೂ ಇಲ್ಲಿನವರ ತುತ್ತು ಅಡಿಕೆಗೆ ಉತ್ತಮ ಬೆಲೆ ಸಿಗುವಂತೆ ಸಂಸತ್ತಿನಲ್ಲಿ ಚರ್ಚಿಸುವ ಮತ್ತು ಇಲ್ಲಿನ ಮೀನುಗಾರರ ಸಮಸ್ಯೆಗಳಿಗೆ ಶಾಶ್ವತ ಮಂಗಳ ಹಾಡುವವನು ಸಂಸದನಾಗಲಿ. ಪ್ರವಾಸೋಧ್ಯಮಕ್ಕೆ ಮಂಗಳೂರು ಉತ್ತಮ ಕ್ಷೇತ್ರವಾಗಿದ್ದು ಈ ನಿಟ್ಟಿನಲ್ಲಿ ಅಭಿವೃದ್ದಿಯಾಗಬೇಕಿದೆ. ನೇತ್ರಾವತಿ ನದಿ ತಿರುವು, ವಿಶೇಷ ಆರ್ಥಿಕ ವಲಯ ಮುಂತಾದ ಹುಚ್ಚು ಯೋಜನೆಗಳ ವಿರುದ್ಧ ದ್ವನಿ ಎತ್ತಬೇಕು. ತುಳು ಭಾಷೆಗೆ ವಿಶೇಷ ಸ್ಥಾನಮಾನ, ತುಳು ಲಿಪಿಯ ಅಭಿವೃದ್ದಿ, ತುಳುನಾಡಿನ ಸಂಸ್ಕೃತಿಗಳನ್ನು ಉಳಿಸುವ ಬಗ್ಗೆ ಗಮನ ಹರಿಸುವವನು ಸಂಸದನಾಗಲಿ ಎಂದು ಹಾರೈಸೋಣವೇ!












Click it and Unblock the Notifications