ದ.ಕ ಜಿಲ್ಲೆಯಲ್ಲಿ ಈದುಲ್ ಫಿತ್ರ್ ಸಂಭ್ರಮ; ಮನೆಯಲ್ಲೇ ಆಚರಿಸಿದ ಮುಸ್ಲಿಂ ಬಾಂಧವರು
ಮಂಗಳೂರು, ಮೇ 13: ರಂಜಾನ್ ಉಪವಾಸ ವೃತಾಚರಣೆ ಕೊನೆಗೊಂಡ ಹಿನ್ನೆಲೆ ಇಂದು (ಗುರುವಾರ) ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಮನೆಯಲ್ಲೇ ಆಚರಿಸಿದ್ದಾರೆ.
ಕೊರೊನಾ ಕಾರಣದಿಂದಾಗಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಲ್ಪಟ್ಟ ಹಿನ್ನೆಲೆ ಮನೆಯಲ್ಲಿಯೇ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಕುಟುಂಬಸ್ಥರ ಜೊತೆಗೂಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಲಾಕ್ಡೌನ್ ನಿಂದಾಗಿ ಈದ್ ಹಬ್ಬದ ಶಾಪಿಂಗ್ ನಿಂದ ದೂರವುಳಿದಿದ್ದ ಮುಸ್ಲಿಮರು, ಜಿಲ್ಲಾ ಖಾಝಿ ಅವರ ಕರೆಯಂತೆ ಸರಳವಾಗಿ ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಮುಕ್ತ ಭಾರತಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆಯೂ ಧಾರ್ಮಿಕ ನಾಯಕರು ಕರೆ ನೀಡಿದ್ದಾರೆ.

ಮಸೀದಿಗಳಲ್ಲಿಯೂ ಜನ ಸೇರಿದಂತೆ ಮುಸ್ಲಿಂ ಧರ್ಮ ಗುರುಗಳು ಕರೆ ನೀಡಿದ ಹಿನ್ನಲೆಯಲ್ಲಿ ಎಲ್ಲೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿರಲಿಲ್ಲ. ಮಸೀದಿಗಳ ಮುಂದೆ ಕೊರೊನಾ ಹಿನ್ನೆಲೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಗಿದೆ ಎಂಬ ಬೋರ್ಡ್ ಹಾಕಲಾಗಿದೆ. ಮನೆಗಳಲ್ಲೇ ದಾನ-ಧರ್ಮ ಪಾಲಿಸುವಂತೆ ಮುಸ್ಲಿಂ ಧರ್ಮ ಮುಖಂಡರು ಕರೆ ನೀಡಿದ ಹಿನ್ನಲೆಯಲ್ಲಿ ಮನೆಯಲ್ಲೇ ಹಬ್ಬ ಆಚರಿಸಲಾಗಿದೆ.

ಅಲ್ಲದೇ ಕುಟುಂಬಸ್ಥರ ಮನೆಗೆ ತೆರಳಿ ಹಬ್ಬದ ಶುಭಾಶಯ ಸಲ್ಲಿಸುವ ಬದಲು ಸಾಮಾಜಿಕ ಜಾಲತಾಣದ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಪರಸ್ಪರ ಆಲಿಂಗನ ಮಾಡಿ ಶುಭಾಶಯ ಸಲ್ಲಿಸುವ ಪ್ರಕ್ರಿಯೆಯಿಂದಲೂ ದೂರವಿರುವಂತೆ ಸೂಚಿಸಲಾಗಿದೆ.












Click it and Unblock the Notifications