"ಕಾವ್ಯಾ ಸಾವಿಗೆ ಸಂಬಂಧಿಸಿದಂತೆ ಆಳ್ವಾರ ತೇಜೋವಧೆ ನಿಲ್ಲಿಸಿ"
ಮಂಗಳೂರು, ಆಗಸ್ಟ್ 1: ಕಾವ್ಯಾ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ವಿನಾಕಾರಣ ಮೋಹನ್ ಆಳ್ವಾ ಮತ್ತು ಅವರ ಸಂಸ್ಥೆಯ ತೇಜೋವಧೆ ಮಾಡಲಾಗುತ್ತಿದೆ. ಆಳ್ವಾಸ್ ವಿದ್ಯಾ ಸಂಸ್ಥೆಯ ಆಡಳಿತ ವ್ಯವಸ್ಥೆ ಪ್ರಾಮಾಣಿಕವಾಗಿದೆ. ಆಳ್ವಾರವರೂ ಕೂಡ ಪಾರದರ್ಶಕ ವ್ಯಕ್ತಿತ್ವದವರಾಗಿದ್ದಾರೆ. ಆಳ್ವಾರವರು ಖುದ್ದು ತನಿಖೆಗೆ ಸಿದ್ಧರಿರುವಾಗ ಮಾಧ್ಯಮಗಳಲ್ಲಿ ಅಪಪ್ರಚಾರ ಸರಿ ಅಲ್ಲ ಎಂದು ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ತಿಳಿಸಿದ್ದಾರೆ.
ಮೋಹನ್ ಆಳ್ವಾರನ್ನು ಅಪರಾಧಿಯಂತೆ ಬಿಂಬಿಸುವುದು ಸರಿಯಲ್ಲ. ಕಾವ್ಯಾ ಸಾವಿನ ವಿಷಯದ ತನಿಖಾ ವರದಿ ಬಂದ ಬಳಿಕ ಅವರಿಗಾಗುವ ಮಾನಸಿಕ ಹಿಂಸೆ ಮತ್ತು ಸಂಸ್ಥೆಗಾದ ನಷ್ಟವನ್ನು ತುಂಬಿಕೊಡುವವರು ಯಾರು ಎಂದು ಸದಾನಂದ ಶೆಟ್ಟಿ ಪ್ರಶ್ನಿಸಿದ್ದಾರೆ.

ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಇಪ್ಪತ್ತಾರು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಅವರ ಪೋಷಕರು ಆತಂಕಕ್ಕೀಡಾಗಿದ್ದಾರೆ. ಈ ಸಂಸ್ಥೆಯಲ್ಲಿ ವಿವಿಧ ಜಾತಿ ಧರ್ಮಗಳ ನಾಲ್ಕು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಇಲ್ಲಿ ವಿದ್ಯಾರ್ಜನೆ ಮಾಡಿದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಈಗಲೂ ಈ ಸಂಸ್ಥೆಯಲ್ಲಿ ತಮ್ಮ ಮಕ್ಕಳನ್ನು ವಿದ್ಯಾರ್ಜನೆಗೆ ಕಳುಹಿಸಲು ಪೋಷಕರು ತುದಿಗಾಲಲ್ಲಿ ನಿಂತಿದ್ದಾರೆ. ಒಂದೇ ಮನೆಯ ಎರಡು ಮೂರು ಮಕ್ಕಳು ಈ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇನ್ನಾದರೂ ತೇಜೋವಧೆ ನಿಲ್ಲಿಸಿ, ಸತ್ಯ ಅರಿತು ಮಾತನಾಡಿ, ಕಾವ್ಯಾ ಸಾವಿನ ವಿಷಯದಲ್ಲಿ ಪಾರದರ್ಶಕ ತನಿಖೆಯಾಗಲಿ ಎಂದು ಎ.ಸದಾನಂದ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜುಲೈ 20ರ ರಾತ್ರಿ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದ ಹಾಸ್ಟೆಲ್ ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ, ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.












Click it and Unblock the Notifications