ಕುದ್ರೋಳಿ ದೇವಸ್ಥಾನಕ್ಕೆ ಪ್ರಭಾಕರ ಭಟ್ ಕಾಲಿಟ್ಟಿದ್ದೇ ಅಪಚಾರ: ಮಟ್ಟು
ಮಂಗಳೂರು, ಜನವರಿ 31: ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರ ಆತ್ಮಚರಿತ್ರೆ ಬಿಡುಗಡೆಯ ದಿನ ಶ್ರೀಕ್ಷೇತ್ರ ಕುದ್ರೋಳಿ ದೇವಸ್ಥಾನಕ್ಕೆ ಆರ್.ಎಸ್.ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕಾಲಿಟ್ಟಿದ್ದೇ ಅಪಚಾರ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಕಿಡಿಕಾರಿದ್ದಾರೆ.
ಗಾಂಧೀಜಿ ಪುಣ್ಯತಿಥಿ ದಿನದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಡಿವೈಎಫ್ಐ ಕಾರ್ಯಕರ್ತರಿಂದ ಆಯೋಜಿಸಲಾಗಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಶ್ರೀ ನಾರಾಯಣ ಗುರುಗಳಿಂದ ಸ್ಥಾಪಿಸಲ್ಪಟ್ಟ ಕುದ್ರೋಳಿ ದೇವಸ್ಥಾನಕ್ಕೆ ಆರ್.ಎಸ್.ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಆಹ್ವಾನಿಸಿದ್ದು ಸರಿಯಲ್ಲ," ಎಂದು ಹೇಳಿದ ಅವರು, "ಭಿನ್ನ ಸೈದ್ಧಾಂತಿಕ ನಿಲುವು ಜೊತೆಯಾಗುವುದು ಸರಿಯಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರ ಭಾಷಣದಿಂದ ಜಿಲ್ಲೆಯಲ್ಲಿ ಗಲಭೆಯಾಗಿದ್ದು ಎಲ್ಲರಿಗೂ ಗೊತ್ತಿರುವಂತಹ ವಿಚಾರ. ಅಂಥವರು ಪೂಜಾರಿಯವರ ಜೊತೆಗೆ ಗುರುತಿಸಿಕೊಳ್ಳಬಾರದಿತ್ತು," ಎಂದು ಟೀಕಿಸಿದರು.

"ಯಾರು ಈ ಕಲ್ಲಡ್ಕ ಪ್ರಭಾಕರ ಭಟ್?" ಎಂದು ಆಕ್ರೋಶ ವ್ಯಕ್ತಪಡಿಸಿದ ಮಟ್ಟು, "ನಮ್ಮ ಜನ ನಾಯಕರು ಈ ವ್ಯಕ್ತಿಯ ಹೆಸರು ಹೇಳಲು ಭಯಪಡುತ್ತಾರೆ," ಎಂದು ಹೇಳಿದರು.
"ಜನಾರ್ದನ ಪೂಜಾರಿಯವರು ವೇದಿಕೆಯಲ್ಲಿ ಕೂತು ಕಣ್ಣೀರು ಹಾಕುತ್ತಾರೆ. ಮುಗ್ಧ ಬಿಲ್ಲವ ಯುವಕರನ್ನು ಬಲಿ ಕೊಡುವಾಗ ಇವರು ಕಣ್ಣೀರು ಹಾಕುವುದಿಲ್ಲ," ಎಂದು ಪೂಜಾರಿ ಅವರ ವಿರುದ್ದ ದಿನೇಶ್ ಅಮೀನ್ ಮಟ್ಟು ಹರಿಹಾಯ್ದರು.
"ಯುವಕರನ್ನು ಬಲಿ ಪಡೆವ ಮೆದುಳು ಕಲ್ಲಡ್ಕ, ನಾಗಪುರ, ಕೇಶವ ಕೃಪಾದಲ್ಲಿರುತ್ತದೆ. ನಮ್ಮ ನಾಯಕರು ಈ ಯುವಕರ ಮೆದುಳನ್ನು ಸ್ವಚ್ಛಗೊಳಿಸಲು ಮುಂದಾಗಲಿಲ್ಲ," ಎಂದು ಮಟ್ಟು ವಿಷಾದ ವ್ಯಕ್ತಪಡಿಸಿದರು.

"ಗಾಂಧಿಯನ್ನು ಕೊಂದಿದ್ದು ಸರಿ ಎನ್ನುವವರು ನಮ್ಮ ಸಮಾಜದಲ್ಲಿದ್ದಾರೆ. ಗಾಂಧಿ ಕೊಂದ ಗೋಡ್ಸೆಗೆ ದೇವಸ್ಥಾನ ಕಟ್ಟುತ್ತಾರೆ," ಎಂದ ಅವರು, "ಹೀಗಾಗಿ ಇದು ಶಾಂತಿಯ ಕಾಲವಲ್ಲ, ಯುದ್ಧದ ಕಾಲ. ಈ ಹಿನ್ನೆಲೆಯಲ್ಲಿ ಗೋಡ್ಸೆ ಆರಾಧಕರನ್ನು ಅಧಿಕಾರದಿಂದ ದೂರ ಇಡಬೇಕು," ಎಂದು ಅವರು ತಿಳಿಸಿದರು.
"ದೇವರನ್ನು ಮುಂದಿಟ್ಟು ಮತ ಕೇಳಲು ಬಂದರೆ ಒದ್ದೋಡಿಸಿ" ಎಂದು ಹೇಳಿದ ಅವರು, "ದೇವರನ್ನು ಮನೆ ಕೋಣೆಯಲ್ಲಿ ಇಟ್ಟುಕೊಳ್ಳಬೇಕು. ಧರ್ಮ, ದೇವರ ಹೆಸರಲ್ಲಿ ಚುನಾವಣೆಗೆ ಬರುವುದು ಎಷ್ಟು ಸರಿ," ಎಂದು ಪ್ರಶ್ನಿಸಿದರು. "ರಾಮ- ಕೃಷ್ಣರನ್ನು ಚುನಾವಣೆಗೆ ತರುತ್ತಾರಲ್ಲ; ಇದು ದುರಂತ" ಎಂದು ಹೇಳಿದ ಅಮೀನ್ ಮಟ್ಟು, "ವಿಕಾಸ ಪುರುಷನ ಮಾತು ಈ ದೇಶದಲ್ಲಿ ಭ್ರಮೆ ಸೃಷ್ಟಿಸಿದೆ," ಎಂದು ಕಿಡಿಕಾರಿದರು.












Click it and Unblock the Notifications