ಸೌಜನ್ಯ ಹತ್ಯೆ ಪ್ರಕರಣದ ಕುರಿತು ಸರ್ಕಾರ ಎಲ್ಲಾ ಕಡೆಗಳಿಂದಲೂ ಮಾಹಿತಿ ತರಿಸಿಕೊಂಡಿದೆ: ದಿನೇಶ್ ಗುಂಡೂರಾವ್
ಮಂಗಳೂರು, ಆಗಸ್ಟ್, 11: ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣ ಮರುತನಿಖೆ ಆಗ್ರಹ ವಿಚಾರದಲ್ಲಿ ಸರ್ಕಾರ ಎಲ್ಲವನ್ನೂ ಗಮನಿಸಿದೆ. ಎಲ್ಲಾ ಕಡೆಗಳಿಂದಲೂ ಮಾಹಿತಿ ತರಿಸಿಕೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಸೌಜನ್ಯ ಪ್ರಕರಣದಲ್ಲಿ ಸಿಬಿಐ ವರದಿ ಕೊಟ್ಟಾಗಿದೆ. ಆದರೆ ಈಗ ಸಾಕಷ್ಟು ಜನ ಇದರ ಮರು ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಇದು ಸರ್ಕಾರದ ಮಟ್ಟದಲ್ಲಿದ್ದು, ಸರ್ಕಾರ ಮಾಹಿತಿ ತರಿಸಿಕೊಳ್ಳುತ್ತಿದೆ. ಸಿಎಂ ಮತ್ತು ಗೃಹ ಇಲಾಖೆ ಕೇಸ್ ಡಿಟೈಲ್ಸ್ ಬರಲಿ ಎಂದು ಹೇಳಿದ್ದಾರೆ. ಸರ್ಕಾರದ ಮಟ್ಟದಲ್ಲಿ ಮರು ತನಿಖೆ ಬಗ್ಗೆ ತೀರ್ಮಾನವಾಗಲಿದೆ. ನಾನು ಕೂಡ ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಸರ್ಕಾರ ತನಿಖೆಗೆ ಮುಂದಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸುವ ಅಧಿಕಾರಿಗಳ ತಂಡ ರಚನೆಯಾಗಿದೆ. ಕೆಲಸವಾಗದೆ ಬಿಲ್ಗಳಾದ ಬಗ್ಗೆ, ಅನವಶ್ಯಕ ಕೆಲಸ, ಹೆಚ್ಚು ಹಣ ಪಡೆದ ಕೆಲಸಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ರಸ್ತೆಗಳು, ಸಿವಿಲ್ ವಿಚಾರ ಮಾತ್ರವಲ್ಲದೇ ಕಸದ ವಿಚಾರ ಕೂಡ ತನಿಖೆ ಆಗಲಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದೆ ಇರೋದು ದೊಡ್ಡ ಸಮಸ್ಯೆ. ಅದು ಈಗಿನ ಸಮಸ್ಯೆ ಅಲ್ಲ, ಎರಡು ವರ್ಷದಿಂದ ಆಗಿಲ್ಲ. ಮುಂದಿನ 30 ದಿನಗಳ ಒಳಗಡೆ ವರದಿ ಸಿಗಲಿದೆ. ನ್ಯಾಯಯುತವಾಗಿ ಆದ ಕೆಲಸಗಳಿಗೆ ಬಿಲ್ ಪಾವತಿ ಆಗಲಿದೆ. ಕಳಪೆ ಗುಣಮಟ್ಟದ ಕೆಲಸವಾಗದಿದ್ದಲ್ಲಿ ನಾವು ಬಿಲ್ ಕೊಡುವುದಿಲ್ಲ ಎಂದರು.
ಸಾರ್ವಜನಿಕರ ಹಣ ಅದು, ನಾವು ನೋಡಿ ಕೊಡುತ್ತೇವೆ. ಡಿಸಿಎಂ ವಿರುದ್ಧ ಆರೋಪಕ್ಕೆ ಯಾವುದೇ ಹುರುಳಿಲ್ಲ. ಅನಾವಶ್ಯಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರ ತಡೆಗೆ ನಾವು ಅಥವಾ ಡಿಸಿಎಂ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ವಿರೋಧ ಪಕ್ಷದವರು ದಾರಿ ತಪ್ಪಿಸಲು ಆಧಾರ ರಹಿತವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯ ಕರ್ಮಕಾಂಡ ಹೊರಗೆ ಬರಲು ಹೆಚ್ಚು ಸಮಯ ಬೇಕಾಗಿಲ್ಲ. ಎಲ್ಲವೂ ಹೊರಗೆ ಬರಲಿದೆ ಎಂದರು.
ದಕ್ಷಿಣ ಕನ್ನಡ ಬಿಜೆಪಿ ಶಾಸಕರಿಂದ ಹಕ್ಕುಚ್ಯುತಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಎಲ್ಲರನ್ನೂ ಸರ್ಕಾರದಲ್ಲಿ ಸಮಾನವಾಗಿ ನೋಡುತ್ತೇವೆ. ಶಿಷ್ಟಾಚಾರ ಪ್ರಕಾರವೇ ಆಮಂತ್ರಣ ಪತ್ರಿಕೆ ಸಿದ್ಧವಾಗುತ್ತದೆ. ಆದರೆ ಕೆಲವೊಮ್ಮೆ ಅವರಿಗೆ ಬೇಕಾದವರಿಗೆ ಆಹ್ವಾನ ಕೊಟ್ಟು ವಿಶೇಷ ಅಹ್ವಾನಿತರು ಮಾಡುತ್ತಾರೆ. ಆದರೆ ಶಾಸಕರು, ಅಧಿಕಾರಿಗಳ ಹೆಸರು ಹಾಕಿ ಕಾರ್ಯಕ್ರಮ ಮಾಡಿದರೆ ತೊಂದರೆಯಾಗಲ್ಲ. ಅವರಿಗೆ ಬೇಕಾದ ಹೆಸರು ಹಾಕಿಕೊಂಡರೆ ಸಮಸ್ಯೆ ಆಗುತ್ತದೆ. ಹಾಗಾಗಿ ನಾನೇ ಡಿಸಿಯವರಿಗೆ ಅಂತಹದ್ದಕ್ಕೆ ಅವಕಾಶ ಕೊಡಬೇಡಿ ಎಂದು ಹೇಳಿದ್ದೇನೆ ಎಂದರು.












Click it and Unblock the Notifications