ಚಿತ್ರಗಳು; ಕಣ್ಮನ ತುಂಬಿತು ಧರ್ಮಸ್ಥಳದ ಲಕ್ಷ ದೀಪೋತ್ಸವ
ಮಂಗಳೂರು, ನವೆಂಬರ್ 27: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿದ್ದ ಲಕ್ಷ ದೀಪೋತ್ಸವ ಸಂಪನ್ನಗೊಂಡಿದೆ. ಲಕ್ಷಾಂತರ ಭಕ್ತರು ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಮಂಜುನಾಥನ ಸನ್ನಿಧಿಯತ್ತ ಹೆಜ್ಜೆ ಹಾಕಿದ್ದರು. ಗರ್ಭಗುಡಿಯಿಂದ ಹೊರಬರುವ ಮಂಜುನಾಥ ಸ್ವಾಮಿ ಬೆಳ್ಳಿ ರಥದಲ್ಲಿ ಕ್ಷೇತ್ರ ಸುತ್ತುವುದನ್ನು ಕಂಡು ಧನ್ಯರಾದರು.
ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ ಐದು ದಿನಗಳಿಂದ ನಡೆದ ಲಕ್ಷ ದೀಪೋತ್ಸವದ ಸಂಭ್ರಮ ಇಂದು ರಥೋತ್ಸವದೊಂದಿಗೆ ಸಂಪನ್ನಗೊಂಡಿದೆ. ದೀಪೋತ್ಸವ ಸಂಭ್ರಮಕ್ಕೆ ಕೊನೆಯ ದಿನವಾದ ಇಂದು ಲಕ್ಷಾಂತರ ಭಕ್ತರು ಸೇರಿದ್ದರು. ಇಂದು ಶ್ರೀಸ್ವಾಮಿಗೆ ಗೌರಿಮಾರುಕಟ್ಟೆ ಉತ್ಸವ ನಡೆದಿದ್ದು, ಹೂ ಹಣ್ಣುಗಳಿಂದ ಸಿಂಗರಿಸಿದ ಬೆಳ್ಳಿ ರಥ ದೇವಸ್ಥಾನದ ಮುಂಭಾಗದಿಂದ ಹೊರಟು, ನೆರೆದಿದ್ದ ಲಕ್ಷ ಲಕ್ಷ ಭಕ್ತರ ನಡುವೆ, ರಥಿಬೀದಿಯಾಗಿ ಗೌರಿಮಾರುಕಟ್ಟೆಗೆ ಸಾಗಿತು. ಉತ್ಸವದುದ್ದಕ್ಕೂ ನಾದ ಸ್ವರಗಳು, ವಾಲಗ, ಡೊಳ್ಳು ಕುಣಿತ, ಶಂಖದಾಸರು ಮತ್ತು ಕಹಳೆ, ವೀರಗಾಸೆಯರು, ಬ್ಯಾಂಡ್ ಸೆಟ್ಟುಗಳು ಸಾಥ್ ನೀಡಿದವು. ಇಡೀ ಧರ್ಮಸ್ಥಳವೇ ಭಕ್ತಿ ಭಾವದಲ್ಲಿ ಲೀನವಾದಂತೆ ಕಂಡಿತು.

ಮುಖ್ಯದ್ವಾರದ ಎಡಬದಿಯ ಗೌರಿಮಾರುಕಟ್ಟೆಗೆ ತಲುಪಿದ ಶ್ರೀಸ್ವಾಮಿಯ ಉತ್ಸವ ಮೂರ್ತಿಗೆ ವಿಧವಿಧದ ದೀಪಗಳಿಂದ ಮಂಗಳಾರತಿ ನೆರವೇರಿಸಲಾಯಿತು. ಈ ಬಾರಿ 2000 ಕಲಾವಿದರು ಧರ್ಮಸ್ಥಳಕ್ಕೆ ಆಗಮಿಸಿದ್ದರು. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ಮಾರ್ಗದರ್ಶನದಲ್ಲಿ ನಡೆದ ಅಂತಿಮ ದಿನದ ಸಮವಸರಣ ಪೂಜೆಗೆ ನೂರಾರು ಭಕ್ತರು ಸಾಕ್ಷಿಯಾದರು. ಭರತನಾಟ್ಯ ಸೇರಿದಂತೆ ವಿವಿಧ ಬಗೆಯ ನಾಟ್ಯ ಪ್ರದರ್ಶನ ಮತ್ತು ಶ್ರೀಕೃಷ್ಣಲೀಲಾ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ಮಧ್ಯರಾತ್ರಿ 2 ಗಂಟೆಗೆ ಆರಂಭವಾದ ರಥೋತ್ಸವ ಮುಂಜಾನೆ 6.30ಕ್ಕೆ ಸ್ವಸ್ಥಾನ ಸೇರಿತು.

ದೀಪೋತ್ಸವಕ್ಕೆ ಬರುವ ಭಕ್ತರನ್ನು ಆಕರ್ಷಿಸುವ ಉದ್ದೇಶದಿಂದ ಇಡೀ ಕ್ಷೇತ್ರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ತಡರಾತ್ರಿಯವರೆಗೂ ಕ್ಷೇತ್ರದಲ್ಲಿ ಜನ ಸಂದಣಿ ಇದ್ದ ಕಾರಣ ನಿರಂತರ ಅನ್ನ ಸಂತರ್ಪಣೆಯೂ ನಡೆಯಿತು. 5 ದಿನಗಳಿಂದ ಅಮೃತವರ್ಷಿಣಿ ಸಭಾಂಗಣದಲ್ಲಿ ಪ್ರತಿನಿತ್ಯ ದೇಸಿಯ ಸಾಂಸ್ಕೃತಿಕ ರಸದೌತಣವೇ ಏರ್ಪಟ್ಟಿದ್ದು ಇಂದು ಸಂಜೆ ಕೂಡ ಮುಂದುವರೆಯಲಿದೆ. ಇಂದು ಸಂಜೆ ಚಂದ್ರನಾಥಸ್ವಾಮಿಯ ಮಸವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ.












Click it and Unblock the Notifications