ಕುದ್ರೋಳಿ ಕ್ಷೇತ್ರದ ದಸರಾ ಮಹೋತ್ಸವಕ್ಕೆ ತೆರೆ
ಮಂಗಳೂರು, ಸೆಪ್ಟೆಂಬರ್ 30: ವಿಜೃಂಭಣೆಯ ಅತ್ಯಾಕರ್ಷಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವಕ್ಕೆ ತೆರೆಬಿದ್ದಿದೆ .
ಮಂಗಳೂರು ದಸರಾ ಮಹೋತ್ಸವದ ಕೊನೆಯ ದಿನವಾದ ಇಂದು ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯದಿಂದ ಶಾರದಾದೇವಿ ಸೇರಿದಂತೆ ಶಕ್ತಿಯ ಪ್ರತೀಕವಾಗಿರುವ ನವದುರ್ಗೆಯರ ಹಾಗೂ ಗಣಪತಿ ಮೂರ್ತಿಯ ಶೋಭಾಯಾತ್ರೆ ನಡೆಯಿತು.

ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯ ನವೀಕರಣದ ರೂವಾರಿ ಜನಾರ್ದನ ಪೂಜಾರಿ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು. ಅಲಂಕೃತ ನವದುರ್ಗೆಯರ ಮಂಟಪ ಮೆರವಣಿಗೆಯೊಂದಿಗೆ 50ಕ್ಕೂ ಹೆಚ್ಚು ಟ್ಯಾಬ್ಲೋಗಳು ಒಳಗೊಂಡಿದ್ದವು.
ಪ್ರತಿಯೊಂದು ಟ್ಯಾಬ್ಲೋಗಳೂ ರಾಜ್ಯದ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಜನಪದ ಕಲಾ ಮೇಳಗಳು ಶೋಭಾಯಾತ್ರೆಗೆ ಮೆರುಗು ತುಂಬಿದವು.

ಸೆ. 30ರಂದು ಸಂಜೆ ಆರಂಭಗೊಂಡ ಶೋಭಾಯಾತ್ರೆ ನಗರದ ರಾಜ ರಸ್ತೆಯಲ್ಲಿ 9 ಕಿಲೋಮೀಟರ್ ಸಾಗಿ ನಾಳೆ ಮುಂಜಾನೆ ಕೊನೆಗೊಳ್ಳಲಿದೆ . ಕುದ್ರೋಳಿ ಕ್ಷೇತ್ರದಿಂದ ಹೊರಟ ಮೆರವಣಿಗೆ ಮಣ್ಣಗುಡ್ಡ, ಲೇಡಿಹಿಲ್ ಸರ್ಕಲ್, ಲಾಲ್ ಬಾಗ್, ಪಿ ವಿ ಎಸ್ ಸರ್ಕಲ್, ನವಭಾರತ್ ಸರ್ಕಲ್ ಕಡೆಗೆ ಸಾಗಿತು.
ಆನಂತರ, ಕೆ ಎಸ್ ರಾವ್ ರಸ್ತೆ, ಹಂಪನಕಟ್ಟೆ, ಗಣಪತಿ ಹೈಸ್ಕೂಲ್ ರಸ್ತೆಯಾಗಿ ಶ್ರೀ ವೆಂಕಟರಮಣ ದೇಗುಲದ ಮುಂಭಾಗದಿಂದ ಕಾರ್ ಸ್ಟ್ರೀಟ್, ಅಳಕ್ಕೆ ಮಾರ್ಗವಾಗಿ ಮೆರವಣಿಗೆ ಸಾಗಿತು.

ಭಾನುವಾರ (ಅ. 1) ಮುಂಜಾನೆ ಶಾರದಾದೇವಿ ಸೇರಿದಂತೆ ನವದುರ್ಗೆಯರ ಒಟ್ಟು 14 ಮೂರ್ತಿಗಳನ್ನು ಕುದ್ರೋಳಿಯ ಪುಷ್ಕರಣಿಯಲ್ಲಿ ವಿಸರ್ಜನೆಯೊಂದಿಗೆ ಶೋಭಾ ಯಾತ್ರೆ ಕೊನೆಗೊಳ್ಳಲಿದೆ.

ಒಟ್ಟಾರೆಯಾಗಿ, ಶ್ರೀ ಗೋಕರ್ಣೇಶ್ವರ ಕ್ಷೇತ್ರದಲ್ಲಿ ಈ ಬಾರಿಯ ದಸರಾ ಮಹೋತ್ಸವವು ಎಲ್ಲರ ಕಣ್ಮನ ಸೂರೆಗೊಂಡಿತು. ಸಾವಿರಾರು ಭಕ್ತರು ಈ ಸಂಭ್ರಚಾರಣೆಯಲ್ಲಿ ಭಾಗಿಯಾಗಿದ್ದರು.












Click it and Unblock the Notifications