ಯಕ್ಷಗಾನ ರಂಗಸ್ಥಳದಲ್ಲಿ ಕಾಂತಾರ ಮೋಡಿ: ಪ್ರೇಕ್ಷಕರ ಅಸಮಾಧಾನ
ಮಂಗಳೂರು, ಡಿಸೆಂಬರ್ 2: ಭಾರತ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿರುವ ಕಾಂತಾರ ಚಿತ್ರ ಹಲವು ವಿನೂತನ ಪ್ರಯೋಗಗಳಿಗೆ ವೇದಿಕೆ ಮಾಡಿಕೊಟ್ಟಿದೆ. ಕಾಂತಾರದಂತಹ ಚಿತ್ರವನ್ನು ಮಾಡಬೇಕು ಎನ್ನುವುದು ಅನೇಕ ನಿರ್ದೇಶಕರ ಆಸೆಯಾಗಿದೆ.
ಕಾಂತಾರ ಚಿತ್ರದ ಹಾಡುಗಳಂತೂ ಎಲ್ಲರನ್ನೂ ಮೋಡಿ ಮಾಡಿದ್ದು, ಇದೀಗ ಕಾಂತಾರ ಚಿತ್ರದ ಹಾಡಿನ ರಾಗ ಯಕ್ಷಗಾನದ ರಂಗಸ್ಥಳಕ್ಕೂ ಕಾಲಿಟ್ಟಿದೆ. ಕಾಂತಾರ ಸಿನಿಮಾ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಎಲ್ಲೇ ಹೋದರೂ ಕಾಂತಾರದ ಬಗ್ಗೆ ಮಾತು, ಹಾಡುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಸದ್ಯ ಯಕ್ಷಗಾನದಲ್ಲೂ ಕಾಂತಾರ ಚಿತ್ರದ ಹಾಡಿನ ಧಾಟಿಯನ್ನು ಬಳಸಿಕೊಳ್ಳಲಾಗುತ್ತಿದೆ.
ಕಾಂತಾರ ಚಿತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ; ನಟ ಚೇತನ್ ವಿರುದ್ಧ ಪ್ರಕರಣ ರದ್ದಿಗೆ ನಕಾರ
ತೆಂಕುತಿಟ್ಟಿನ ಸಸಿಹಿತ್ಲು ಶ್ರೀಭಗವತಿ ಮೇಳ, ಬಡಗಿನ ಸಾಲಿಗ್ರಾಮ ಶ್ರೀಗುರುಪ್ರಸಾದಿತ ಮೇಳ ನೂತನ ಪ್ರಸಂಗದಲ್ಲಿ ಕಾಂತಾರ ಸಿನಿಮಾದ ಹಿಟ್ ಹಾಡುಗಳಾದ ವರಾಹರೂಪಂ ಹಾಗೂ ಸಿಂಗಾರ ಸಿರಿಯೇ ಧಾಟಿಯ ಹಾಡುಗಳ ಬಳಕೆಯಾಗಿದೆ. ಖ್ಯಾತ ಭಾಗವತರುಗಳಾದ ಡಾ.ಪ್ರಖ್ಯಾತ್ ಶೆಟ್ಟಿ ಹಾಗೂ ಚಂದ್ರಕಾಂತ ರಾವ್ ಮೂಡುಬೆಳ್ಳೆಯವರು ಕಾಂತಾರ ಚಿತ್ರದ ಹಾಡಿನ ಧಾಟಿಯಲ್ಲಿ ಭಾಗವತಿಕೆ ಮಾಡಿದ್ದಾರೆ. ಎರಡೂ ಮೇಳಗಳಲ್ಲೂ ಸ್ತ್ರೀ ಪಾತ್ರದ ನಾಟ್ಯಕ್ಕಾಗಿ ಹಾಡನ್ನು ಬಳಸಲಾಗಿದೆ.
ಯಕ್ಷಗಾನಕ್ಕೆ ಅದರದ್ದೇ ಆದಂತಹ ರಾಗಗಳು ಇದೆ. ಆದರೆ ಇಂದು ಪ್ರೇಕ್ಷಕರನ್ನು ರಂಜಿಸಲು ಯಕ್ಷಗಾನದಲ್ಲಿ ಸಿನಿಮಾ ಧಾಟಿಯ ರಾಗಗಳನ್ನು ಬಳಸಲಾಗುತ್ತಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಆದರೆ ಯಕ್ಷಗಾನ ಮೇಳಗಳು ಪ್ರೇಕ್ಷಕರ ಆಕರ್ಷಣೆಗೆ ಪ್ರಸ್ತುತ ಘಟನೆ, ವಿಚಾರಗಳನ್ನು ಪ್ರಸಂಗಗಳಲ್ಲಿ ಜೋಡಣೆ ಮಾಡುವುದು ಮಾತ್ರ ಸರ್ವೇ ಸಾಮಾನ್ಯವಾಗಿದೆ.
ಕಾಂತಾರ ಚಿತ್ರದ ಹಾಡನ್ನು ಯಕ್ಷಗಾನದಲ್ಲಿ ಬಳಕೆ ಮಾಡಿರುವುದು ಸಂಪ್ರದಾಯಬದ್ಧ ಯಕ್ಷಗಾನ ಪ್ರೇಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಯಕ್ಷಗಾನದಲ್ಲಿ ವಿನೂತನತೆಯನ್ನು ತರುವ ಭರದಲ್ಲಿ ಸಂಪ್ರದಾಯದ ಹಾದಿ ತಪ್ಪಬಾರದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.